ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲ್ಲೂಕಿನ ಮರೇಗುದ್ದಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ 1997-98 ಸಾಲಿನ 7 ನೇ ತರಗತಿಯ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ ಕಾರ್ಯಕ್ರಮದಲ್ಲಿ ವಿದ್ಯೆಯನ್ನು ಕಲಿಸಿದ ಗುರುವಿಗೆ ಹೂವಿನ ಸುರಿಮಳೆಗೈದು ತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಿದರು.
70 ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುವಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಶಿಕ್ಷಕ ಎಸ್.ಪಿ.ಮಠಪತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಶಾಲಾ ಮುಖ್ಯ ಶಿಕ್ಷಕಿ ಆರ್.ಬಿ. ಪಾಟೀಲ ಮಾತನಾಡಿ, ಶಿಕ್ಷಕರ ಕಣ್ಣಿನಲ್ಲಿ ತಾವುಗಳು ಕಲಿಸಿದ ಮಕ್ಕಳ ಚಿತ್ರಣ ಕಾಣಿಸುತ್ತದೆ. ಇಂತಹ ಕಾರ್ಯಕ್ರಮ ಮಾಡುವದರಿಂದ ಮುಂದಿನ ಮಕ್ಕಳಿಗೆ ಮಾರ್ಗದರ್ಶನವಾಗುತ್ತದೆ. ನಮ್ಮ ಶಾಲೆಯಲ್ಲಿ 72 ಮಕ್ಕಳು 7 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು. ಎಲ್ಲ ಮಕ್ಕಳಿಗೋಸ್ಕರ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗಾಗಿ, ನಮ್ಮ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಧನ ಸಹಾಯ ಹಾಗೂ ಸಹಕಾರವನ್ನು ನೀಡಿದರೆ ಮಾತ್ರ ಶಾಲೆಯು ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಶಿಕ್ಷಕ ಕೆ.ಎಸ್.ಟರಕಿ ಮಾತನಾಡಿ, ಸಂಸ್ಕಾರ, ಸಂಸ್ಕೃತಿಯನ್ನು ನೀಡುವದು ನಮ್ಮ ದೇಶವಾಗಿದೆ. ದೇಶದಲ್ಲಿ ಹೆಚ್ಚಾಗಿ ಗೌರವವನ್ನು ನೀಡುವದು ಯಾರಿಗಾದರೂ ಇದ್ದರೆ ಅದು ಶಿಕ್ಷಕರಿಗೆ ಮಾತ್ರ ಎಂದರು.
ಶಿಕ್ಷಕ ಡಿ.ಎ.ಪತ್ತಾರ ಮಾತನಾಡಿ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸುವುದು, ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ನೀಡುವುದು ಮುಖ್ಯವಾಗಿದೆ ಎಂದರು.
ಶಿಕ್ಷಕ ಸದಾಶಿವ ಮದ್ನೂರ ಮಾತನಾಡಿದರು.
ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿದ ನಿವೃತ್ತ ಶಿಕ್ಷಕ ಎಸ್.ಪಿ.ಮಠಪತಿ ಹಾಗೂ ಧರ್ಮಪತ್ನಿ ಪಾರ್ವತಿ ಮಠಪತಿ, ಗ್ರಾ.ಪಂ. ಅಧ್ಯಕ್ಷ ಹನುಮಂತ ಗುಡಿ, ಎಸ್.ಎಸ್.ಕೋಲೂರ, ಶ್ರೀಮತಿ ಎ.ಕೆ.ಸಾರವಾಡ ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರವೀಣ್ ಮಂಟೂರ, ಗೋವಿಂದ ಕಾಮರೆಡ್ಡಿ, ಅಶೋಕ ಅಂಗಡಿ, ಬಸವರಾಜ ಯಾದವಾಡ , ಅಡಿವೇಪ್ಪ ಹಳ್ಳೂರ, ಲಲಿತಾ ಪಾಟೀಲ, ಗುರುಪಾದ ಅಥಣಿ, ಪ್ರವೀಣ್ ಮಂಟೂರ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು, ಪ್ರಕಾಶ ಹುಗ್ಗೇನ್ನವರ ಸ್ವಾಗತಿಸಿದರು, ಅಡವೇಶ ವಾರದ ಪ್ರಾಸ್ತಾವಿಕ ಮಾತನಾಡಿದರು.

