ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಮಲ್ಲಯ್ಯ, ರಾವುತರಾಯ ದೇವಸ್ಥಾನಗಳ ಯಾತ್ರಿನಿವಾಸ ಅಭಿವೃದ್ಧಿಗಾಗಿ ಕಮಿಟಿ ಸದಸ್ಯರು ನೀಡಿದ ಉದಾರ ದೇಣಿಗೆ ನಿಜವಾಗಿಯೂ ಶ್ಲಾಘನೀಯವಾದದು ಎಂದು ಕಮಿಟಿ ಅಧ್ಯಕ್ಷ ವಿನೋದಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಯಾತ್ರಿನಿವಾಸ ಅಭಿವೃದ್ಧಿಗಾಗಿ ಕಮಿಟಿ ಸದಸ್ಯ ನಾಗರಾಜ್ ಸಂಗಣ್ಣವರ ನೀಡಿದ ೫ ಲಕ್ಷ ರೂ.ಗಳ ದೇಣಿಗೆ ಚೆಕ್ ಅನ್ನು ಸ್ವೀಕರಿಸಿ ನಂತರ ಅವರನ್ನು ಕಮಿಟಿ ಮೂಲಕ ಸನ್ಮಾನಿಸಿ ಮಾತನಾಡಿದರು. ಭಕ್ತರ ಆಶಯದಂತೆ ನಿರ್ಮಿಸಲಾಗುತ್ತಿರುವ ಯಾತ್ರಿನಿವಾಸಕ್ಕೆ ಕಮಿಟಿ ಸದಸ್ಯರು ನೀಡಿದ ಈ ಸಹಕಾರ ಸಮಯೋಚಿತ ಹಾಗೂ ಅನುಕರಣಿಯ ಎಂದರು.
ಕಮಿಟಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ದಾನಿ ನಾಗರಾಜ ಸಂಗಣ್ಣವರ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಪುರಂದಾಸರ ಕೀರ್ತನಾವಾಣಿಯಂತೆ ಧರ್ಮ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸಹಕಾರಿಯಾಗುವಂತೆ ನನ್ನ ತನು,ಮನ, ಧನದ ಭಕ್ತಿಸೇವೆ ಸಲ್ಲಿಸಿದ್ದೇನೆ ಎಂದರು.
ಕಮಿಟಿ ಉಪಾಧ್ಯಕ್ಷ ಶ್ರೀಧರ ನಾಡಗೌಡ, ಕಾರ್ಯದರ್ಶಿ ಮಲ್ಲು ನಾಟೀಕಾರ, ಸದಸ್ಯರಾದ ಕಾಶೀನಾಥ ತಳಕೇರಿ, ನಿಂಗು ಯಂಭತ್ನಾಳ, ಅಪ್ಪೋಜಿ ದೇಸಾಯಿ, ಶಿವನಗೌಡ ಯರನಾಳ, ರಾವುತಪ್ಪ ದೇವರಮನಿ, ಯಮನೂರಪ್ಪ ಸಣ್ಣಕ್ಕಿ, ಮಲ್ಲು ಜಮಾದಾರ, ಪ್ರಕಾಶ ಮಲ್ಲಾರಿ, ರಮೇಶ ಮ್ಯಾಗೇರಿ, ರಾಜು ಮೆಟಗಾರ, ಬಾಬುಗೌಡ ಹತ್ತಳ್ಳಿ, ಬಾಬು ಸೌದಿ ಇದ್ದರು.