ವಿಜಯಪುರದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಭಾಭವನ & ಅಗಸ್ತ್ಯ ಪೌಂಡೇಶನ್ ಪ್ರಾಯೋಜಕತ್ವದ ಸಂಚಾರಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದಿನ ಕಾಲದಲ್ಲಿ ಗುರುಕುಲಗಳು ಗುಡಿಸಿಲಿನಲ್ಲಿ ನಡೆಯುತ್ತಿದ್ದವು. ಅಲ್ಲಿ ಒಳ್ಳೆಯ ಶಿಕ್ಷಣ ಪಡೆದು ಮೇಧಾವಿಗಳಾಗಿ ಉನ್ನತ ಹುದ್ದೆ ಪಡೆಯುತ್ತಿದ್ದರು. ಯಾಕೆಂದರೆ ಅಲ್ಲಿ ಒಳ್ಳೆಯ ಶಿಕ್ಷಕರಿಂದ ಒಳ್ಳೆಯ ಶಿಕ್ಷಣ ದೊರಕುತ್ತಿತ್ತು. ಆದರೆ ಅಲ್ಲಿ ಸುಸಜ್ಜಿತ ಕಟ್ಟಡಗಳಿರಲಿಲ್ಲ. ಇಂದು ಹಲವು ಸೌಲಭ್ಯಗಳೊಂದಿಗೆ ಕಟ್ಟಡ, ಡಿಜಿಟಲ್ ಕ್ಲಾಸ್ ಇತ್ಯಾದಿ ಇದ್ದರು ಶಿಕ್ಷಣದ ಗುಣಮಟ್ಟ ಹೆಚ್ಚಾಗಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಠಕ್ಕೆಯಲ್ಲಿ ಶುಕ್ರವಾರ ಸಂಜೆ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸಿ.ಎಸ್.ಆರ್.(ಎಂ.ಎಸ್.ಐ.ಎಲ್) ಅನುದಾನದಡಿ ನಿರ್ಮಿಸಲಾದ ಸಭಾಭವನ ಉದ್ಘಾಟನೆ, ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಗಸ್ತ್ಯ ಪೌಂಡೇಶನ ಪ್ರಾಯೋಜಕತ್ವದ ಸಂಚಾರಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಶಾಲೆಯ ಹೃದಯವಿದ್ದಂತೆ. ಶಿಕ್ಷಕರು ಪ್ರಾಮಾಣಿಕತೆಯಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯೂ ಕುಸಿತ ಕಂಡಿದ್ದು ಸುಧಾರಣೆಗೆ ಹೆಚ್ಚು ಆಧ್ಯತೆ ನೀಡಬೇಕು. ಶಾಲೆಗೆ ಬರುವ ಪ್ರತಿ ಮಕ್ಕಳ ಪ್ರತಿಭೆ ಹೊರಹಾಕಿ ಶಿಕ್ಷಕರು ಉತ್ತಮ ಶಿಕ್ಷಣ ನೀಡಿದರೆ ನಮ್ಮ ಜಿಲ್ಲೆ ಫಲಿತಾಂಶದಲ್ಲಿ ಟಾಪ್ 1 ರ ಜಿಲ್ಲೆಯಾಗಿ ಹೊರ ಹೊಮ್ಮುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಫಲಿತಾಂಶ ಸುಧಾರಣೆಗೆ ಪ್ರತಿ ಶಾಲೆಗೆ ಒಬ್ಬ ನೊಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಹೆಚ್ಚು ಅಂಕ ಪಡೆದ ಮಕ್ಕಳಿಗೆ ಅಭಿನಂದಿಸಿದರು. ನಮ್ಮಜಿಲ್ಲೆ ಆದರ್ಶ ಜಿಲ್ಲೆಯಾಗಿ ಹೊರಹೊಮ್ಮಬೇಕು. ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಸಿಗಬೇಕು ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಸರ್ಕಾರ ಹಲವು ಸೌಲಭ್ಯ ನೀಡಿದರೂ ಯಾಕೆ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುತ್ತಿಲ್ಲ. ಎಲ್ಲ ಸೌಲಭ್ಯ ಇದ್ದರೂ ಸರ್ಕಾರಿ ಶಾಲೆಗಳು ಯಾಕೆ ಮುಚ್ಚುತ್ತಿವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ ಗುಣಮಟ್ಟದ ಶಿಕ್ಷಣ ಈ ಜಿಲ್ಲೆಗೆ ಸೀಗಬೇಕು ಎಂಬ ಭಯಕೆಯಿಂದ ಸಚಿವರು ಶೈಕ್ಷಣಿಕ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ್ದಾರೆ. ಶಿಕ್ಷಣ ಜೀವನದಲ್ಲಿ ತುಂಬಾ ಆತ್ಮವಿಶ್ವಾಸ ನೀಡುತ್ತದೆ. ಎಸ್.ಎಸ್.ಎಲ್.ಸಿಯಲ್ಲಿ ಮಕ್ಕಳು ಹೆಚ್ಚು ಫಲಿತಾಂಶ ಪಡೆಯಲು ಜಿಲ್ಲಾ ಕ್ರೀಯಾ ಯೋಜನೆ ತಯಾರು ಮಾಡಿದ್ದೇವೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಸಚಿವರ ಸೂಚನೆಯಂತೆ ನೊಡಲ್ ಅಧಿಕಾರಿ ನೇಮಕ ಮಾಡಿದ್ದೇವೆ. ಜಿಲ್ಲಾ ಪಂಚಾಯಿತಿ, ಡಿಡಿಪಿಐ ಹಾಗೂ ಜನಪ್ರತಿನಿಧಿಗಳ ಸಹಯೋಗದಲ್ಲಿ ಮಾಡುತ್ತಿದ್ದೇವೆ. ವಿಧ್ಯಾರ್ಥಿಗಳು ದಿನಂಪ್ರತಿ ಶಾಲೆಗೆ ಹೋಗಿ ಪ್ರತಿ ತರಗತಿಗೆ ಹಾಜರು ಇರಬೇಕು. ಶಿಕ್ಷಕರ ಜೊತೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ನೇರವಾಗಿ ನಮಗೆ ಕರೆ ಮಾಡಿ ಎಂದರು.
ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು.
ಗ್ಯಾರಂಟಿ ಸಮೀತಿ ಅಧ್ಯಕ್ಷ ಗುರು ದಾಸ್ಯಾಳ, ಡಿಡಿಪಿಐ ಟಿ.ಎಸ್.ಕೊಲಾರ, ಬಿಇಓ ಪ್ರಮೋದಿನಿ ಬಳೋಲಮಟ್ಟಿ, ಎಸ್.ಡಿ.ಮೊಸಲಗಿ, ಗೀತಾ ಪಾಟೀಲ ಇದ್ದರು.
ಸ್ವಾಗತವನ್ನು ಬಿಇಓ ಪ್ರಮೋದಿನಿ ಬಳೋಲಮಟ್ಟಿ, ನಿರೂಪಣೆಯನ್ನು ಮಾರುತಿ ರಾಠೋಡ, ಶಿವಶರಣ ಶಿರೂರ ವಂದನಾರ್ಪಣೆಯನ್ನು ಪ್ರಭು ಬಿರಾದಾರ ನೆರವೇರಿಸಿದರು.
“ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕೊಡುವ ಮೂಲಕ 92 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ ಪಡೆದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಜಿಲ್ಲೆ ಟಾಪ್ ಹತ್ತರಲ್ಲಿ ಇರಬೇಕು ಎಂಬ ಆಸೆ ನಮ್ಮೆಲ್ಲರದು, ನಮ್ಮ ಮಕ್ಕಳು ಓದುವ ಶಾಲಾ ಕೊಠಡಿ ನಿಜವಾದ ದೇವಾಲಯ, ಅಂತಹ ಶಾಲಾ ಕಟ್ಟಡ ನಿರ್ಮಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ಅಭಿವೃದ್ಧಿಯಾಗಿದೆ. ರೈತರ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲಿ ಎಂಬುದು ನನ್ನ ಸದಾಶಯ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ