ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ಮತ್ತು ಘಟಪ್ರಭಾ , ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ನೀರಿನ ಒಳಹರಿವು ಹಾಗೂ ಹೊರ ಹರಿವು ಎರಡು ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕವಾಗಿದೆ. 1,08,723 ಕ್ಯೂಸೆಕ್ ಒಳಹರಿವು ಇದ್ದರೆ 1.07.973 ಕ್ಯೂಸೆಕ್ ಹೊರಹರಿವು ಇದೆ. ಈ ಬ್ಯಾರೇಜ್ ಕೆಳಭಾಗದಲ್ಲಿ ಇರುವ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ ಈಗಾಗಲೇ ಸಂಪೂರ್ಣ ಮುಳುಗಿ ಹೋಗಿದೆ. ಜಲಾಶಯದ ಮೇಲ್ಬಾಗದಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಘಟಪ್ರಭಾ ನದಿಯಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ. ಜಿಎಲ್ಬಿಸಿ ಕಾಲುವೆಗೆ 2400 ಕ್ಯೂಸೆಕ್ ಹಾಗೂ ನದಿಗೆ 13890 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಮುಧೋಳ ತಾಲೂಕಿನಲ್ಲಿ ಒಟ್ಟು 12 ಬ್ಯಾರೇಜ್ಗಳು ಇದ್ದು, ನೀರಿನ ಹರಿವು 30 ಕ್ಯೂಸೆಕ್ ದಾಟಿದರೆ ಕೆಲ ಬ್ಯಾರೇಜ್ಗಳು ಮುಳುಗಿ ಸೇತುವೆ ರಸ್ತೆಯಲ್ಲಿ ಸಂಚಾರ ಬಂದ್ ಆಗುವ ಸಂಭವ ಇದೆ. ಈಗ ಮಿರ್ಜಿ ಗ್ರಾಮದ ಬ್ಯಾರೇಜ್ ಜಲಾವೃತವಾಗುವ ಹಂತಕ್ಕೆ ಸ್ವಲ್ಪ ಬಾಕಿ ಇದೆ. ಸೇತುವೆ ಎತ್ತರದ ವರೆಗೂ ನೀರು ಹರಿದು ಬರುತ್ತಿದೆ.