ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಭಾರತ ಸೇವಾದಳದ ಪಾತ್ರ ಹಿರಿದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳದ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಭಾರತ ಸೇವಾದಳದ ತಾಲೂಕು ಮಟ್ಟದ ಮಿಲಾಪ್ ಶಿಬಿರವನ್ನು ಉದ್ಘಾಟಿಸಿ, ಭಾರತ ಸೇವಾದಳದ ಚಟುವಟಿಕೆಗಳು ನಿರಂತರವಾಗಿ ಶಾಲೆಗಳಲ್ಲಿ ನಡೆಯಬೇಕು. ನಾಡಗೀತೆ, ರಾಷ್ಟ್ರಗೀತೆಯನ್ನು ಲಯಬದ್ಧವಾಗಿ ಕಲಿಸುವಲ್ಲಿ ಸೇವಾದಳದ ಶಿಕ್ಷಕರು ಮಾಡುತ್ತಿರುವದು ಶ್ಲಾಘನೀಯ. ಮಕ್ಕಳಲ್ಲಿ ಶಿಸ್ತು, ದೇಶಭಕ್ತಿ ಬೆಳೆಯುವಂತೆ ಮಾಡುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ತಯಾರು ಮಾಡಬೇಕೆಂದರು.
ಭಾರತ ಸೇವಾದಳ ರಾಜ್ಯ ಉಪಾಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿ, ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಶಿಸ್ತು, ಸಂಯಮ, ಧೈರ್ಯ, ಸಹನೆಯ ಗುಣಗಳನ್ನು ಕಲಿಸಬೇಕು. ಸೇವಾದಳದ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ದೇಶಪ್ರೇಮ ಜಾಗೃತಗೊಳಿಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮದ ಪಾಠ ಕಲಿಸಬೇಕೆಂದರು.
ತಾಲೂಕು ಭಾರತ ಸೇವಾದಳದ ಕಾರ್ಯದರ್ಶಿ ಆರ್.ಜಿ.ಅಳ್ಳಗಿ ಮಾತನಾಡಿ, ಭಾರತ ಸೇವಾದಳವು ನಾ.ಸು.ಹರ್ಡೀಕರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತ ಸೇವಾದಳದ ಚಟುವಟಿಕೆಗಳು ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು ಮೈಗೂಡಿಸುತ್ತದೆ. ಭಾರತ ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ನೈತಿಕ ಶಿಕ್ಷಣ, ದೇಶಪ್ರೇಮದ ಶಿಕ್ಷಣವನ್ನು ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ತಾಲೂಕು ಸಮಿತಿ ಅಧ್ಯಕ್ಷ ಎಸ್.ಐ. ಗಚ್ಚಿನವರ, ತಾಲೂಕು ಭಾರತ ಸೇವಾದಳದ ಖಜಾಂಚಿ ವ್ಹಿ.ಬಿ.ಮರ್ತುರ, ತಾಲೂಕು ಭಾರತ ಸೇವಾದಳದ ಗೌರವಾಧ್ಯಕ್ಷ ಎಫ್.ಡಿ.ಮೇಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಶೋಕ ಗುಡದಿನ್ನಿ, ಸದಸ್ಯರಾದ ನಾಗಪ್ಪ ಕ್ವಾಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಎ.ಐ.ಮಠಪತಿ, ಜಿ.ವೈ.ನಾಗರಾಳ, ತಾಲೂಕು ಸಂಘಟಕ ಬಿ.ವ್ಹಿ.ಚಕ್ರಮನಿ ಇತರರು ಇದ್ದರು. ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತವಿಕವಾಗಿ ಮಾತನಾಡಿದರು. ಶಿವು ಮಡಿಕೇಶ್ವರ ಸ್ವಾಗತಿಸಿದರು. ಕೊಟ್ರೇಶ ಹೆಗ್ಡಾಳ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ಕಾರ್ಯಕರ್ತರು ಜೂನ್ ತಿಂಗಳಿಂದ ಮಾರ್ಚ್ ತಿಂಗಳವರೆಗಿನ ವಾರ್ಷಿಕ ಯೋಜನೆಯನ್ನು ವಿತರಿಸಲಾಯಿತು.