ಸಿಂದಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಾರ್ವಜನಿಕರ ಆಸ್ತಿಗಳ ಉತಾರೆ ನೀಡುವಲ್ಲಿ ರೂ.೨೦೩೦ ಸಾವಿರ ಬೇಡಿಕೆಯಿಟ್ಟು ಅವರಿಂದ ಫೋನ್ಫೇ ಮೂಲಕ ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ಭ್ರಷ್ಠಾಚಾರದಲ್ಲಿ ತೊಡಗಿದ ಪುರಸಭೆ ಸಿಬ್ಬಂದಿ ಅಜೀತ ಹಳಿಂಗಳಿ ಅವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಠರಾವು ಪಾಸು ಮಾಡಿದ ಪ್ರತಿಯನ್ನು ಮೇಲಾಧಿಕಾರಿಗಳಿಗೆ ರವಾನೆ ಮಾಡಿ ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸೂಚಿಸಿದರು.
ಸಿಂದಗಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಆಸ್ತಿಗಳ ಮೇಲೆ ಸಾಲ ಪಡೆಯಲು ಬೋಜಾ ದಾಖಲು ಮಾಡಲು ಪರಿತಪ್ಪಿಸುತ್ತಿರುವದನ್ನು ಗಮನಿಸಿ ರೂ.೫೦೦ ತುಂಬಿಸಿಕೊಂಡು ಭೋಜಾ ದಾಖಲು ಮಾಡಿ, ಅಲ್ಲದೆ ಬಾಕಿ ಉಳಿದ ಆಸ್ತಿಯನ್ನು ಬಡ್ಡಿ ರಹಿತ ತುಂಬಲು ೨ತಿಂಗಳು ಕಾಲಾವಕಾಶವಿದೆ. ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈಗಿರುವ ತಹಶೀಲ್ದಾರ ಕಾರ್ಯಾಲಯ ನೂತನ ಮಿನಿವಿಧಾನ ಸೌಧಕ್ಕೆ ಸ್ಥಳಾಂತರವಾಗುತ್ತಿರುವ ಹಿನ್ನಲೆಯಲ್ಲಿ ಆ ಕಟ್ಟಡವನ್ನು ಪುರಸಭೆ ಕಾರ್ಯಾಲಯಕ್ಕೆ ಹಸ್ತಾರಿಸುವಂತೆ ಠರಾವು ಪಾಸು ಮಾಡಿ ಮೇಲಾಧಿಕಾರಿಗಳಿಗೆ ಮನವಿ ರವಾಸಿಸುವಂತೆ ತಿಳಿಸಿದ ಅವರು ಕೈಗಾರಿಕಾ ವಲಯದಲ್ಲಿರುವ ಮಳಿಗೆಗಳನ್ನು ಹಸ್ತಾಂತರ ಮಾಡಿಕೊಂಡು ಆಸ್ತಿ ತೆರಿಗೆ ಮಾಡಿಕೊಳ್ಳಿ ಎಂದರು.
ಮಾಜಿ ಉಪಾದ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ೧೫ನೇ ಹಣಕಾಸು ಯೋಜನೆಯಡಿ ಬಂದಿರುವ ರೂ.೧ಕೋಟಿ ೯೬ಲಕ್ಷ ಬರೀ ೧೦ವಾರ್ಡಗಳಿಗೆ ಮಾತ್ರ ಹಂಚಿಕೆ ಮಾಡಿ ಅಧಿಕಾರ ದುರುಪಯೋಗ ಪಡಿಕೊಳ್ಳುತ್ತಿದ್ದೀರಿ ಎಂದು ಆರೋಪಿಸುತ್ತಿದಂತೆ ಅಧ್ಯಕ್ಷ ಡಾ.ಮನಗೂಳಿ ಉತ್ತರಿಸಿ ಈ ಹಣದಲ್ಲಿ ಮಿಸಲಾತಿ ಅನುಗುಣವಾಗಿ ಹಂಚಿಕೆ ಮಾಡಿ ಅದರಲ್ಲಿ ಉಳಿಯುವ ರೂ.೭೮ಲಕ್ಷ ಹಣದಲ್ಲಿ ೨೩ವಾರ್ಡುಗಳಿಗೆ ಹಂಚಿಕೆ ಮಾಡಿದ್ದಾದರೆ ತಲಾ ರೂ.೩ಲಕ್ಷ ಮಾತ್ರ ಬರುತ್ತಿದ್ದು, ಇಲ್ಲಿಯವರೆಗೆ ಅಭಿವೃದ್ಧಿಯಾಗದ ವಾರ್ಡುಗಳನ್ನು ಗುರುತಿಸಿ ಅಲ್ಲಿ ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಮಲಘಾಣ ರಸ್ತೆಯಲ್ಲಿರುವ ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲ ಅದಕ್ಕೆ ಈ ಅನುದಾನ ರಸ್ತೆ ಅಭಿವೃದ್ಧಿಗೆ ಬಳಸಿ ಎಂದು ಸೂಚಿಸಿದರು.
ಈ ವೇಳೆ ಸದಸ್ಯ ಬಸವರಾಜ ಯರನಾಳ ಮಾತನಡಿ, ಪುರಸಭೆಯಲ್ಲಿ ನಕಲಿ ಮೊಹರ (ಸಿಲ್) ಮಾಡಿದ ಪ್ರಕರಣವಿದೆ. ಇಂತಹ ಪ್ರಕರಣಗಳು ಮೇಲಿಂದ ಮೇಲೆ ಇಲ್ಲಿ ನಡೆಯುತ್ತಿವೆ. ಇದರ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೆ ೭ಜನ ಸದಸ್ಯರನ್ನು ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಸದಸ್ಯ ಶ್ರೀಶೈಲ ಬೀರಗೊಂಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಿರಿಯ ಆರೋಗ್ಯ ನಿರೀಕ್ಷಕಿ ಇಂದೂಮತಿ ಮಣೂರ ಮಾತನಾಡಿ, ಜನನ-ಮರಣ ದಾಖಲಾತಿ ಮರಣ ಹೊಂದಿದ ೨೧ದಿನಗಳಲ್ಲಿ ದಾಖಲಿಸಬೇಕು. ಬಳಿಕ ಬಂದ ಅರ್ಜಿಗಳಿಗೆ ನ್ಯಾಯಾಲಯದಿಂದ ನೋಟರಿ ಮಾಡಿಸಬೇಕಾಗುತ್ತದೆ ಕಾರಣ ನಿಗದಿತ ವೇಳೆಗೆ ದಾಖಲಿಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಸಂದೀಪ ಚೌರ, ಮಾಜಿ ಅದ್ಯಕ್ಷರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಸದಸ್ಯರಾದ ಹಾಸೀಂ ಆಳಂದ, ಸಾಯಬಣ್ಣ ಪುರದಾಳ, ಭೀಮು ಕಲಾಲ, ಪ್ರತಿಭಾ ಕಲ್ಲೂರ, ಗೊಲ್ಲಾಳ ಬಂಕಲಗಿ, ಬಸಮ್ಮ ಸಜ್ಜನ, ಹಾಸಿಂಪೀರ ಆಳಂದ, ಚನ್ನಪ್ಪ ಗೋಣಿ, ಸಿದ್ದು ಮಲ್ಲೇದ, ಅಬ್ದುಲ್ರಹಿಮ ದುದನಿ, ಸಿಬ್ಬಂದಿಗಳಾದ ನಬಿರಸೂಲ ಉಸ್ತಾದ, ಸಚಿನ ಮೋರಟಗಿ, ದತ್ತಾತ್ರೇಯ ಹಳ್ಳಿ ಸೇರಿದಂತೆ ಅನೇಕರು ಇದ್ದರು.
ಸಭೆಯಲ್ಲಿ ಕೆಲ ಸದಸ್ಯರು ಚರ್ಚೆಯಲ್ಲಿ ಬಾಗಿಯಾದರೆ, ಮಹಿಳಾ ಸದಸ್ಯರು ಉತ್ಸವ ಮೂರ್ತಿಗಳಾಗಿ ಕುಳಿತ್ತಿದ್ದರು. ಮುಖ್ಯಾಧಿಕಾರಿ ಎಸ್.ರಾಜಶೇಖರ ಸ್ವಾಗತಿಸಿದರು. ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ ಸಭೆಯ ಅಜಂಡಾ ಓದಿದರು.