ವಿಜಯಪುರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.
ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ನನ್ನು ಉದ್ಘಾಟಿಸಿದ ಸಚಿವರು, ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೪೮ ಲಕ್ಷ ಕಟ್ಟಡ ಕಾಮಗಾರಿ, ೧೨.೦೫ ಲಕ್ಷ ಅಡುಗೆ ಸಲಕರಣೆಗಳ ಮೊತ್ತ ಸೇರಿದಂತೆ ೬೦.೦೫ ಲಕ್ಷ ರೂ. ವೆಚ್ಚದಲ್ಲಿ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಇಂದಿರಾ ಕ್ಯಾಂಟಿನ್ನಲ್ಲಿ ಉತ್ತಮ ರುಚಿ-ಶುಚಿಯಾದ ಗುಣಮಟ್ಟದ ಆಹಾರ ಲಭ್ಯವಾಗಲಿದ್ದು, ಇದರಿಂದ ಬಡ ಜನರಿಗೆ ಅನುಕೂಲವಾಗಲಿದೆ. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು, ಜೂ.೨೮ರಂದು ಬಬಲೇಶ್ವರ ಹಾಗೂ ತಿಕೋಟಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಆಹಾರ ಗುಣಮಟ್ಟತೆಯನ್ನು ಪರೀಕ್ಷಿಸುವ ದೃಷ್ಟಿಯಿಂದ ಕಾಲಕಾಲಕ್ಕೆ ಅಧಿಕಾರಿಗಳು ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಫ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆ.ಕೆ.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

೧೪೦ ವರ್ಷ ಹಳೆಯ ಇತಿಹಾಸದ ನವೀಕರಣಗೊಂಡ ಗ್ರಂಥಾಲಯ ಉದ್ಘಾಟನೆ
ವಿಜಯಪುರ: ಶುಕ್ರವಾರ ನಗರದ ಗಾಂಧಿವೃತ್ತ ಹಾಗೂ ನೆಹರೂ ಮಾರುಕಟ್ಟೆ ಹತ್ತಿರದಲ್ಲಿರುವ ೧೪೦ ವರ್ಷಗಳ ಸುದಿರ್ಘ ಇತಿಹಾಸ ಹೊಂದಿದ ನವೀಕರಣಗೊಂಡ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಉದ್ಘಾಟಿಸಿದರು.
೧೮೮೫ರಲ್ಲಿ ಸ್ಥಾಪಿತವಾದ ಈ ನಗರ ಕೇಂದ್ರ ಗ್ರಂಥಾಲಯ ಉತ್ತಮವಾದ ಪುಸ್ತಕ ಸಂಗ್ರಹವನ್ನು ಹೊಂದಿದೆ. ಹಳೆಯ ಇತಿಹಾಸವನ್ನು ಹೊಂದಿದ ಗ್ರಂಥಾಲಯವು ಇಂದು ಹೊಸ ರೂಪವನ್ನು ಪಡೆದುಕೊಂಡಿದೆ. ನಗರ ಕೇಂದ್ರ ಗ್ರಂಥಾಲಯವನ್ನು ಸುಂದರವಾದ ಕಂಪೌಂಡ ಗೋಡೆ ಹಾಗೂ ಪ್ರವೇಶದ್ವಾರ ನಿರ್ಮಾಣ, ಹೊಸ ಹಂಚು ಅಳವಡಿಕೆ, ಸುಣ್ಣ-ಬಣ್ಣ, ಹೊಸ ಕಪಾಟು ಬಾಗಿಲುಗಳ ಜೋಡಣೆ, ಫ್ಯಾನ್ ವ್ಯವಸ್ಥೆ, ಬೆಳಕಿಗಾಗಿ ಎಲ್ಇಡಿ ಬಲ್ಬಗಳ ವ್ಯವಸ್ಥೆ, ಟೇಬಲ್ ಚೇರ್, ಬೆಂಚ್ ಹಾಗೂ ಪುಸ್ತಕಗಳನ್ನು ಇಡುವ ಶೆಲ್ಪ ಅಳವಡಿಕೆ ಸೇರಿದಂತೆ ಒಟ್ಟು ೧೯ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಆವರಣದಲ್ಲಿ ಓದುಗ ಸ್ನೇಹಿ ವಾತಾವರಣ ನಿರ್ಮಿಸುವುದಲ್ಲದೇ, ಗಿಡಮರಗಳ ಮೂಲಕ ಸುಂದರ ಉದ್ಯಾನವನ, ಮಕ್ಕಳ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ-ಸೆಮಿನಾರ ಕೋಣೆಯನ್ನು ನಿರ್ಮಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳು, ಓದುಗರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆ ಅನಾವರಣ
ವಿಜಯಪುರ: ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದ ಆವರಣದಲ್ಲಿ ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಅನಾವರಣಗೊಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಜಾಗೃತಿ ಮೂಡಿಸುವ ಅಂಗವಾಗಿ ರಾಜ್ಯದ ವಿವಿಧ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ೧೦-೬ ಅಡಿ ಅಳತೆಯ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಂವಿಧಾನ ಪೀಠಿಕೆಯನ್ನು ಅಳವಡಿಸಿ ಸಂವಿಧಾನ ಜಾಗೃತಿ ಮೂಡಿಸಲಾಗುತ್ತಿದ್ದು, ಇದರ ಅಂಗವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲಿಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪಾಲಾರ್ಪಣೆ ಮಾಡಿದ ಸಚಿವರು, ನಂತರ ಸಂವಿಧಾನ ಪೀಠಿಕೆ ಅನಾವರಣಗೊಳಿಸಿ, ಸಂವಿಧಾನ ಪೀಠಿಕೆ ಬೋಧಿಸಿದರು.