ವಿಜಯಪುರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉದ್ಯಾನ, ಮಾರುಕಟ್ಟೆ ಹಾಗೂ ಅನೇಕ ನಗರಗಳುಳ್ಳ ಅದ್ಭುತ ನಗರ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರು ಅನೇಕ ನಗರ ನಿರ್ಮಾತರಿಗೆ ಇಂದು ಸಹ ಮಾದರಿಯಾಗಿದ್ದಾರೆ. ಕೆಂಪೇಗೌಡರು ನಿರ್ಮಾಣ ಮಾಡಿದ ಬೃಹತ ಬೆಂಗಳೂರು ಈಗಲೂ ಸಹ ತನ್ನ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಈ ನಗರದಲ್ಲಿ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಆಸರೆಯ ತಾಣವಾಗಿದೆ. ಇಡೀ ವಿಶ್ವದಲ್ಲಿಯೇ ಗುರುತಿಸುವಂತಹ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಕಾರ್ಯ ಸ್ಮರಣೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾದೇವ ರೆಬಿನಾಳ ಅವರು ವಿಶೇಷ ಉಪನ್ಯಾಸ ನೀಡಿ, ಬೃಹತ್ ನಗರ ನಿರ್ಮಾಣವಷ್ಟೇ ಅಲ್ಲದೆ ಪಾರದರ್ಶಕತೆಯುಳ್ಳ ಉತ್ತಮ ಆಡಳಿತಗಾರಾಗಿದ್ದ ಕೆಂಪೇಗೌಡರು ರೈತರಿಗೆ ಹೊರೆಯಾಗದಂತೆ ತೆರಿಗೆ, ಸೈನ್ಯಕ್ಕಾಗಿ ಹಣ ಮೀಸಲಿಟ್ಟಿದ್ದರು. ಸಾಮಾನ್ಯ ಜನರೆ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕೌಶಲ್ಯ ಮತ್ತು ಜಾಣ್ಮೆಯಿಂದ ಸ್ವತಂತ್ರ್ಯ ಸಂಸ್ಥಾನವನ್ನು ನಿರ್ಮಿಸಿ ದಕ್ಷಿಣ ಕರ್ನಾಟಕದಲ್ಲಿ ನಾಡಪ್ರಭು ಎಂದು ಜನಮಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ಕಾಶಿನಾಥ ಭೋಸಲೆ ಸುಗಮ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರವನ್ನು ಸಂಗೀತಾ ಮಠಪತಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ್, ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ಅನಸೂಯಾ ಚಲವಾದಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಿಂಬಾಬಾ ಮುದ್ದೇಬಿಹಾಳ, ಸಂಕೇತಗೌಡ ಗಾಯಕ್ವಾಡ, ವಿದ್ಯಾವತಿ ಅಂಕಲಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.