ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ವ್ಯಕ್ತಿಯೊರ್ವನ ಮೇಲೆ ಪೋಲಿಸ್ ಅಧಿಕಾರಿಗಳು ಹಿಗ್ಗಾ-ಮುಗ್ಗವಾಗಿ ಹೊಡೆದು, ಹಲ್ಲೆ, ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ, ತಡರಾತ್ರಿಯಲ್ಲಿ ನೂರಾರು ರೈತರು ಧಿಡೀರನೆ ಪ್ರತಿಭಟನೆಯನ್ನು ನಡೆಸಿದ ಘಟನೆ ಜರುಗಿದೆ.
ತಾಲೂಕಿನ ಸಿದ್ದಾಪೂರ ಗ್ರಾಮದ ಬಳಿ ಬೈಕ್ ಸವಾರನಿಂದ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಕಡ್ಲಿ (65) ಸ್ಥಳದಲ್ಲಿಯೇ ಸಾವನ್ನಪ್ಪಿದ ಧಾರುಣ ಘಟನೆ ಸಂಭವಿಸಿದೆ. ಬೈಕ್ ಸವಾರ ಸಿದ್ದಪ್ಪ ಕುರಿ (29) ಜಮಖಂಡಿ ರಸ್ತೆಯ ಮಾರ್ಗವಾಗಿ ಶಿರೋಳ ಗ್ರಾಮಕ್ಕೆ ತೆರಲುವ ಸಮಯದಲ್ಲಿ ಹನುಮಂತ ಕಡ್ಲಿ ಎಂಬ ವ್ಯಕ್ತಿಯು ಎಮ್ಮೆಯನ್ನು ಮೇಯಿಸುತ್ತಾ ಬರುವ ಸಮಯದಲ್ಲಿ ಎಮ್ಮೆಯು ಧಿಡೀರನೆ ರಸ್ತೆಯ ಮೇಲೆ ಬಂದ ಪರಿಣಾಮ ಎಮ್ಮೆ ಮೇಯಿಸುತ್ತಿದ್ದ ಹಣಮಂತನಿಗೆ ವೇಗವಾಗಿ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಹನುಮಂತ ಕಡ್ಲಿ ಸಾವನ್ನಪ್ಪಿದ ದುರ್ದೃವಿ.
ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ, ಬೈಕ್ ಸವಾರನಾದ ಸಿದ್ದಪ್ಪ ಕುರಿ (29) ಹಾಗೂ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡುವ ವ್ಯಕ್ತಿಗೆ ಮತ್ತು ಬೈಕ್ ಸವಾರನಿಗೆ ಸಹಾಯ ಮಾಡಿದ ಕಾಡಪ್ಪ ಕುರಿ (40) ಇಬ್ಬರನ್ನು ಪೋಲಿಸ್ರು ಠಾಣೆಗೆ ಕರೆತಂದು ಹಿಗ್ಗಾ-ಮುಗ್ಗವಾಗಿ ಪೋಲಿಸ್ ಅಧಿಕಾರಿಗಳು ಥಳಿಸಿದ್ದು. ಸಹಾಯಕ್ಕೆ ಬಂದ ವ್ಯಕ್ತಿಯ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ತಡರಾತ್ರಿಯಲ್ಲಿ ನೂರಾರು ರೈತರು ಪ್ರತಿಭಟನೆಯನ್ನು ನಡೆಸಿದರು.
ರೈತ ಮುಖಂಡ ಬಸವಂತ ಕಾಂಬಳೆ ಮಾತನಾಡಿ,
ಪೋಲಿಸರ ಮೇಲೆ ಸಾರ್ವಜನಿಕರು ನಂಬಿಕೆಯನ್ನು ಇಟ್ಟುಕೊಂಡು ಠಾಣೆಗೆ ಬರುತ್ತಾರೆ. ಆದರೆ ಪೋಲಿಸ್ ಅಧಿಕಾರಿಗಳು ಅಮಾಯಕ ವ್ಯಕ್ತಿಗಳ ಮೇಲೆ ಹೀಗೆ ಹಿಗ್ಗಾ-ಮುಗ್ಗವಾಗಿ ಹೊಡೆದು, ಹಲ್ಲೆ, ದೌರ್ಜನ್ಯ ವೆಸಗಿದ್ದು ಕಾನೂನು ಬಾಹಿರ. ಅಮಾಯಕರ ಮೇಲೆ ದರ್ಪ, ದೌರ್ಜನ್ಯ ಮಾಡುವದನ್ನು ಕೈಬಿಡಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಡಿಎಸ್ಪಿ ಅವರು ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಹನಮಂತಗೌಡ ಪಾಟೀಲ, ಸುಭಾಸ ಶಿರಬೂರ, ಅಶೋಕ ಪಡಸಲಗಿ, ರಾಮಣ್ಣ ದೇಸಾಯಿ, ಸುರೇಶ ಚಿಂಚಲಿ, ಹನಮಂತ ನಬಾಬ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಇದ್ದರು.
ಹರಸಾಹಸ ಪಟ್ಟ ಅಧಿಕಾರಿಗಳು: ಗ್ರಾಮೀಣ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನವೂಲಿಸಲು ಮುಧೋಳ ಪೋಲಿಸ್ ಠಾಣೆಯ ಪಿಎಸ್ಐ, ಹಾಗೂ ಜಮಖಂಡಿ ಸಿಪಿಐ, ಡಿಎಸ್ಪಿ ಹರಸಾಹಸ ಪಟ್ಟರು ಸಹ ಪ್ರತಿಭಟನೆಯನ್ನು ರೈತರು ಮುಂದುವರಿಸಿದ್ದರು.
ತಪ್ಪೊಪ್ಪಿಕೊಂಡ ಡಿಎಸ್ಪಿ
ನಮ್ಮ ಇಲಾಖೆಯ ಪೋಲಿಸ್ ಅಧಿಕಾರಿಗಳು ತಿಳಿಯದೇ ತಪ್ಪು ಮಾಡಿರುವದು ಸಹಜ, ಅದಕ್ಕಾಗಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ತಗೆದುಕೊಳ್ಳುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಎಸ್ಪಿ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.