ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಯೋಗ ಎನ್ನುವುದು ಕೇವಲ ವ್ಯಾಯಾಮವಲ್ಲ. ಯೋಗ ದೇಹ-ಮನಸ್ಸಿನ ಸಮತೋಲನಕ್ಕಾಗಿ ಅಗತ್ಯವಾದ ಜೀವನ ಶೈಲಿಯಾಗಿದೆ ಎಂದು ರಾಣಿ ಚನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀಮತಿ ಆಶಾದೇವಿ ಗುಡಗುಂಟಿಮಠ ಹೇಳಿದರು.
ನಗರದ ಬಸವಭವನದ ಆವರಣದಲ್ಲಿ ನಡೆದ ರಾಣಿ ಚನ್ನಮ್ಮ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಸತತ 11 ದಿನಗಳವರೆಗೆ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಹಿಳೆಯರನ್ನು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ದಿಕ್ಕಿನಲ್ಲಿ ಮುನ್ನಡೆಸುವುದು ನಮ್ಮ ಸಂಸ್ಥೆ ಮುಖ್ಯ ಧೈಯವಾಗಿದೆ. ಯೋಗದಿಂದ ಜೀವನ ಬದಲಾಗುವ ಸಾಧ್ಯತೆ, ಯೋಗದಿಂದ ಶಿಸ್ತು, ಸಂಸ್ಕೃತಿ, ಆಚರಣೆಗಳು ರೂಢಿಸಿಕೊಳ್ಳಬಹುದು. ಮಹಿಳೆಯರಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯೋಗ ಶಿಬಿರ ಒಂದು ದಿಟ್ಟ ಹೆಜ್ಜೆಯಾಗಿದೆ. ಜನರಿಗೆ ಯೋಗದ ಮಹತ್ವ ತಿಳಿಸುವ ಮತ್ತು ಜೀವನದಲ್ಲಿ ಯೋಗದ ಅನಿವಾರ್ಯತೆ ಪ್ರತಿಪಾದಿಸುವ ಉತ್ತಮ ವೇದಿಕೆಯನ್ನು ನಿರ್ಮಿಸಲಾಗಿತ್ತು. ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಶ್ರೇಯಸ್ಸಿಗಾಗಿ ನಮ್ಮ ಮಹಿಳಾ ಮಂಡಲ ಶ್ರಮಿಸುತ್ತಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸವಿತಾ ಸನದಿ, ಕಸ್ತೂರಿ, ಖಜಾಂಚಿ ಹೇಮಲತಾ ಚಂಡಕಿ, ಕಾರ್ಯದರ್ಶಿ ಅನಿತಾ ದೇಸಾಯಿ ಸಹಿತ ಮಹಿಳಾ ಮಂಡಳದ ಸದಸ್ಯರು ಇದ್ದರು.
ಯೋಗಗುರು ಮಲ್ಲಿಕಾರ್ಜುನ ಬಚಡೆ ತರಬೇತಿ ನೀಡುವ ಮೂಲಕ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡಿದರು. ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಉದ್ಯೋಗಸ್ಥರು, ಹಿರಿಯ ನಾಗರಿಕರು ಸಹಿತ ನೂರಾರು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಸತತವಾಗಿ 11 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಸಹಿತ ವಿವಿಧ ಕಾರ್ಯಕ್ರಮಗಳು ಜರುಗಿದವು.
