ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಬಸವೇಶ್ವರ ವೃತ್ತದಲ್ಲಿ ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕ್ಷಿಪಣಿ ದಾಳಿ ಕೈಗೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಬುಧವಾರ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.
ಭಾರತ ಮಾತಾ ಕೀ ಜೈ, ಭಾರತೀಯ ಸೈನ್ಯಕ್ಕೆ ಜೈ, ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಸೇರಿದ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ನಂತರ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ವಿಜಯೋತ್ಸವದಲ್ಲಿ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ತ್ರಿವರ್ಣ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ನಮ್ಮ ಹೆಮ್ಮೆಯ ಭಾರತೀಯ ಸೈನ್ಯದ ಜೊತೆ ನಾವು ಸದಾ ಇದ್ದೇವೆ. ನಿನ್ನೆ ಮದ್ಯರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತೀಯ ಸಶಸ್ತ್ರ ಪಡೆ ಕ್ಷಿಪಣಿ ದಾಳಿ ಮಾಡಿ ಉಗ್ರರ ಅಡುಗು ತಾಣಗಳನ್ನು ನಾಶ ಮಾಡಿ ಅನೇಕ ಉಗ್ರರನ್ನು ಸದೆ ಬಡಿದ ಭಾರತೀಯ ಸೈನ್ಯದ ಅಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಮಾಡಿದಕ್ಕೆ ನಮ್ಮ ಸೈನ್ಯದ ಮೇಲೆ ನಮಗೆ ಹೆಮ್ಮೆ ಇದೆ ಎಂದು ಹೇಳಿದರು.
ಅಪರೇಷನ್ ಸಿಂಧೂರ ಎಂದರೆ ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ. ಇದು ಜೀವನ ಮತ್ತು ಬಲಿದಾನದೊಂದಿಗೆ ಸಂಬಂಧ ಹೊಂದಿದೆ. ಸಿಂಧೂರವು ಕೇವಲ ಒಂದು ವಸ್ತುವಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಆರ್.ಐ/ ಬಿರಾದಾರ, ಜಮಾತೆ ಇಸ್ಲಾಂ ಅಧ್ಯಕ್ಷ ಸಲೀಂ ಸಯ್ಯದ ಮಾತನಾಡಿದರು.
ಸಂಭ್ರಮಾಚರಣೆಯಲ್ಲಿ ರಾಷ್ಟ್ರೀಯ ಬಸವಸೈನ್ಯದ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ, ತಾಲೂಕು ಅಧ್ಯಕ್ಷ ಸಂಜುಗೌಡ ಬಿರಾದಾರ, ಮನ್ನಾನ ಶಾಬಾದಿ, ಸುನೀಲ ಚಿಕ್ಕೊಂಡ, ಸಂಗಮೇಶ ಜಾಲಗೇರಿ, ಶಂಕರಗೌಡ ಪಾಟೀಲ, ಶಂಕರ ರಜಪೂತ, ಅಪ್ಪು ಗಬ್ಬೂರ, ಸುರೇಶ ಹೂಗಾರ, ಮಂಜು ಜಾಲಗೇರಿ, ಅರುಣ ಗೊಳಸಂಗಿ, ಸಿದ್ರಾಮ ಪಾತ್ರೋಟಿ, ಸಂಗನಬಸು ಪೂಜಾರಿ, ಬಸವರಾಜ ರೇವಡಿಗಾರ, ನವೀನ ಬೇವನೂರ, ವಿಜಯ ರಗಟಿ, ವಿರೇಶ ಗಬ್ಬುರ,ಮಹಾದೇವ ನಾಯ್ಕೋಡಿ ಮಲ್ಲು ಬನಾಸಿ, ಸದಾನಂದ ಸುಲಾಖೆ, ನವೀನ ಬೇವನೂರ, ಇರ್ಫಾನ ಕೊರಬು, ಶಫೀಕ ಹೊಕ್ರಾಣಿ ಇತರರು ಇದ್ದರು.