ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಂಸಾರದಲ್ಲಿ ಗಂಡು-ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರು ಸಾಮರಸ್ಯದಿಂದ ಜೀವನ ಮಾಡಿದರೆ ಸಂಸಾರ ಸುಖಮಯವಾಗಿರುತ್ತದೆ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಳಿಚಂಡಿ ಗ್ರಾಮದ ಗ್ರಾಮದೇವತೆ ಆದಿದೇವಿಶಕ್ತಿ ಜಾತ್ರಾಮಹೋತ್ಸವದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಉಪದೇಶಾಮೃತ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನ ನೀಡಲಾಗಿದೆ. ಜನ್ಮ ನೀಡಿದ ತಾಯಿಯನ್ನು, ಪ್ರತಿಯೊಬ್ಬ ಪತಿ ತನಗಾಗಿ ಜನ್ಮ ಪಡೆದ ಪತ್ನಿಯನ್ನು, ಜನ್ಮ ಪಡೆದ ಮಗಳನ್ನು ಈ ಮೂವರು ಮಹಿಳೆಯನ್ನು ಪ್ರೀತಿಸುವಂತಾದರೆ ಮಹಿಳೆಯರಿಗೆ ನಿಜವಾದ ಗೌರವ ನೀಡಿದಂತೆ. ಪ್ರತಿಯೊಬ್ಬರಿಗೂ ಮಹಿಳೆಯರಿಗೆ ಗೌರವ ನೀಡಿದರೆ ನಮ್ಮ ಸಂಸ್ಕ್ರತಿ ಉಳಿದಂತಾಗುತ್ತದೆ ಎಂದರು.
ಭಾರತ ದೇಶದಲ್ಲಿ ದೈವ ಶಕ್ತಿ ಅಪಾರವಾಗಿದೆ. ಪ್ರತಿಯೊಬ್ಬರೂ ತಮಗೆ ಕಷ್ಟ ಬಂದಾಗ ದೇವರ ಮೊರೆ ಹೋಗಿ ಪರಿಹಾರ ಕಾಣುವದು ಸಹಜ. ಅರಳಿಚಂಡಿ ಗ್ರಾಮದಲ್ಲಿರುವ ಗ್ರಾಮದೇವತೆ ಆದಿಶಕ್ತಿದೇವತೆಯು ಅಪಾರ ಶಕ್ತಿಯನ್ನು ಹೊಂದಿದ್ದಾಳೆ. ಈ ದೇವಿಯಲ್ಲಿ ಕಷ್ಟವನ್ನು ಹೇಳಿಕೊಂಡು ಬಂದ ಜನರಿಗೆ ಖಂಡಿತ ಪರಿಹಾರ ಸಿಕ್ಕು ಜೀವನದಲ್ಲಿ ಸುಖ-ನೆಮ್ಮದಿಯಿಂದ ಇರುತ್ತಾರೆ. ಭಕ್ತರ ಸಹಕಾರದಿಂದ ಈ ಕ್ಷೇತ್ರವು ಇನ್ನಷ್ಟು ಬೆಳೆಯಬೇಕು. ಆದಿಶಕ್ತಿದೇವತೆಯ ಹಿರೇಮಠವು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಬೆಳೆಯುವಂತಾಗಲೆಂದರು.
ಈಚೆಗೆ ಕಾಶ್ಮೀರದ ಪೆಹಲ್ಗಾಮ್ದಲ್ಲಿ ಉಗ್ರರು ಮಾಡಿದ ದಾಳಿಗೆ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಇದರಲ್ಲಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರವು ನಮ್ಮ ಸೈನಿಕರಿಂದ ನಿನ್ನೆ ಮಧ್ಯರಾತ್ರಿ ಸಿಂಧೂರ ಆಪರೇಷನ್ ಕಾರ್ಯಾಚರಣೆ ಮಾಡುವ ಮೂಲಕ ನೂರಾರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತಿಕಾರ ನೀಡಿದೆ. ಇದು ನಾವೆಲ್ಲರೂ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ದೇಶದ ಮಹಿಳೆಯರ ಸಿಂಧೂರ ಕಳೆದವರನ್ನು ಎಂದಿಗೂ ಬಿಡುವದಿಲ್ಲ ಎಂಬ ಸಂದೇಶ ಪಾಪಿ ಪಾಕಿಸ್ತಾನಕ್ಕೆ ದೇಶದ ಯೋಧರು ನೀಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿ, ದೇವರಲ್ಲಿ ಯಾವಾಗಲೂ ಒಳ್ಳೆಯದನ್ನು ಬೇಡಿಕೊಳ್ಳಬೇಕು. ಪ್ರತಿಯೊಬ್ಬರೂ ಲಿಂಗಾಯತ ಧರ್ಮದ ಆಚರಣೆಯನ್ನು ಮಾಡುವಂತಾಗಬೇಕು. ಚಿಕ್ಕಮಕ್ಕಳನ್ನು ಸಮಾಧಾನ ಪಡಿಸಲು ಮೊಬೈಲ್ ಕೊಡುವದನ್ನು ಕಾಣುತ್ತೇವೆ. ಮುಂದೆ ಅವರು ವಯಸ್ಸಿಗೆ ಬಂದಾಗ ಪಾಲಕರು ಕಷ್ಟ ಪಡಬೇಕಾಗುತ್ತದೆ. ಪಾಲಕರು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳುವ ಜೊತೆಗೆ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಬೇಕೆಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಳಿಚಂಡಿಯಲ್ಲಿರುವ ಆದಿಶಕ್ತಿದೇವತೆ ಹಿರೇಮಠವು ದೊಡ್ಡ ಶಕ್ತಿ ಹೊಂದಿದೆ. ಮೂರು ವರ್ಷಕೊಮ್ಮೆ ನಡೆಯುತ್ತಿರುವ ಶ್ರೀಮಠದ ಜಾತ್ರೆಯು ಎಲ್ಲರ ಸಹಕಾರದೊಂದಿಗೆ ಏ.೧೮ ರಿಂದ ಇಂದಿನವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜನರಲ್ಲಿ ಭಕ್ತಿಯ ಜಾಗೃತೆ ಮೂಡಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಧರ್ಮವನ್ನು ಅರಿತು ನಡೆದರೆ ಜೀವನ ಪಾವನವಾಗುತ್ತದೆ. ಶ್ರೀಮಠದ ದೈವಿ ಶಕ್ತಿ ದೊಡ್ಡದ್ದು. ಶ್ರೀಮಠದ ಕಟ್ಟಡಕ್ಕೆ ಹಿಂದೆ ನನ್ನ ತಂದೆ ಸಚಿವ ಶಿವಾನಂದ ಪಾಟೀಲರು ಅನುದಾನ ನೀಡಿದ್ದಾರೆ. ಈಚೆಗೆ ಹೆಚ್ಚುವರಿಯಾಗಿ ರೂ ೫ ಲಕ್ಷ ಸಹ ನೀಡಿದ್ದಾರೆ ಎಂದರು.
ಬಸವನಬಾಗೇವಾಡಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಆದಿಶಕ್ತಿದೇವಿ ಹಿರೇಮಠದ ಟ್ರಸ್ಟ್ ಅಧ್ಯಕ್ಷ ಹಣಮಂತ್ರಾಯ ಸೊನ್ನದ ಮಾತನಾಡಿದರು. ನೇತೃತ್ವವನ್ನು ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯರು, ಜಮಖಂಡಿಯ ಆನಂದ ದೇವರು, ಅರಳಿಚಂಡಿಯ ಮಹಾದೇವಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪ್ರಕಾಶ ದೇಸಾಯಿ, ಲಕ್ಷ್ಮೀ ಶಾಖಾಪುರ, ತಾಲೂಕು ತಳವಾರ ಸಂಘದ ಅಧ್ಯಕ್ಷ ಎಸ್.ಎ.ದೇಗಿನಾಳ, ಶಿಕ್ಷಕ ಮಹೇಶಗೌಡ ಬಿರಾದಾರ, ಗುರಪ್ಪ ದೇವೂರ, ಭೀಮಣ್ಣ ಹೊಸಮನಿ. ಬಿ.ಎಂ.ಮೂಕರ್ತಿಹಾಳ ಇತರರು ಇದ್ದರು. ಶಿವಯ್ಯ ಹಿರೇಮಠ ಸ್ವಾಗತಿಸಿದರು. ರವಿ ಸೊನ್ನದ ನಿರೂಪಿಸಿದರು. ಎಸ್.ಎಸ್.ಕತ್ತಿ ವಂದಿಸಿದರು. ಇದೇ ಸಂದರ್ಭದಲ್ಲಿ ನೂರಾರು ಸುಮಂಗಲೆಯರಿಗೆ ಶ್ರೀಮಠದಿಂದ ಉಡಿ ತುಂಬಲಾಯಿತು. ವಚನ ಕಂಠಪಾಠ ಸ್ಪರ್ಧೆಯಲ್ಲಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.