ಶ್ರೀಶೈಲದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಮ್ಮ ದೇಶ ಧರ್ಮಪ್ರಧಾನವಾಗಿರುವ ದೇಶ. ಧರ್ಮ ಮತ್ತು ದೇವರು ಈ ದೇಶದ ತಾಯಿ ಬೇರುಗಳಿದ್ದಂತೆ. ಪ್ರಸಂಗ ಬಂದರೆ ನಮ್ಮ ಜನತೆ ಧರ್ಮ ಮತ್ತು ದೇವರಿಗಾಗಿ ಎಂತಹ ತ್ಯಾಗಕ್ಕೂ ಸನ್ನದ್ಧರಾಗುತ್ತಾರೆ ಎಂದು ಶ್ರೀಶೈಲದ ೧೦೦೮ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ಪಟ್ಟಣದ ವಿನಾಯಕ ನಗರದ ಶ್ರೀ ವಿನಾಯಕ ಹಾಗೂ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಪಂಚದಲ್ಲಿ ಎರಡು ಪ್ರಕಾರದ ದೇವಾಲಯಗಳಿವೆ. ದೇವರು ಬಂದು ನೆಲೆಸಲೆಂದು ಭಕ್ತರೆಲ್ಲ ಕೂಡಿ ನಿರ್ಮಿಸಿದ ದೇವಾಲಯಗಳು ಒಂದು ಪ್ರಕಾರದ್ದಾದರೆ ದೇವರು ಭಕ್ತರ ಕಷ್ಟಗಳನ್ನು ಪರಿಹರಿಸಲು ತಾನೇ ನಿರ್ಮಿಸಿಕೊಂಡ ದೇವಾಲಯಗಳು ಮತ್ತೊಂದು ಪ್ರಕಾರದ್ದಾಗಿವೆ. ಇಲ್ಲಿನ ದೇವಾಲಯ ನಿರ್ಮಿಸಲು ನೀವೆಲ್ಲ ಸಾಕಷ್ಟು ಶ್ರಮ ಪಟ್ಟಿದ್ದೀರಿ ಇದು ಮಾನವ ನಿರ್ಮಿತ ದೇವಾಲಯ. ಇನ್ನು ದೇವ ನಿರ್ಮಿತ ದೇವಾಲಯ ಎಂದರೆ ಸತ್ಯ, ನ್ಯಾಯ, ಅಹಿಂಸೆ, ಪ್ರಾಮಾಣಿಕತೆಯಿಂದ ಯಾರು ನಡೆದುಕೊಳ್ಳುತ್ತಾರೆ ಅಂತಹ ದೇಹಗಳು ದೇವ ನಿರ್ಮಿತ ದೇವಾಲಯಗಳು ಎಂದರು.
ತುಮಕೂರಿನ ಮಲಯಶಾಂತಮುನಿ ಶಿವಾಚಾರ್ಯರು ಮಾತನಾಡಿ ಮಹಾಗಣಪತಿ ಮತ್ತು ವೀರಭದ್ರ ದೇವರು ನಮ್ಮ ದೇಶದ ಸಂಸ್ಕೃತಿಗೆ ಹೊಸ ಮೆರುಗನ್ನು ನೀಡಿದವರು. ಮಹಾಗಣಪತಿ ದೇಶಭಕ್ತಿಯನ್ನು ಕಲಿಸಿದ ದೇವರಾದರೆ ವೀರಭದ್ರ ಈಶ ಭಕ್ತಿಯನ್ನು ಕಲಿಸಿದ ದೇವರು. ಈ ದೇವರುಗಳ ದೇವಸ್ಥಾನವನ್ನು ನಿರ್ಮಿಸಿದ ಭಕ್ತರು ಧನ್ಯರು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಕಲಾಪೋಷಕ ಮಠದ ಡಾ|| ಶಿವಕುಮಾರ ಸ್ವಾಮಿಗಳು, ಇಟಗಿಯ ಭೂಕೈಲಾಸ ಮಠದ ಗುರು ಶಾಂತವೀರ ಶಿವಾಚಾರ್ಯರು, ಕರಭಂಟನಾಳದ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವರ ಆಪ್ತ ಕಾರ್ಯದರ್ಶಿ ಡಾ|| ಶ್ರೀಶೈಲ ಬಿದರಕುಂದಿ, ಮಾಜಿ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸದಸ್ಯ ಚನ್ನಪ್ಪಣ್ಣ ಕಂಠಿ, ಶಿವಲಿಂಗಯ್ಯ ಶಿವಯೋಗಿಮಠ, ಬಸವರಾಜ ಮೋಟಗಿ, ಸತೀಶ ಓಸ್ವಾಲ, ಸೋಮನಗೌಡ ಪಾಟೀಲ ನಡಹಳ್ಳಿ ಸೇರಿದಂತೆ ಹಲವರು ಇದ್ದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕ ವಾಗೇಶ ಹಿರೇಮಠ ಸ್ವಾಗತಿಸಿದರು. ಪ್ರವಚನಕಾರ ಐ.ಬಿ.ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
“ವಿಭೂತಿ ಇಲ್ಲದ ಹಣೆಗೆ, ದೇವಾಲಯ ಇಲ್ಲದ ಊರಿಗೆ ಧಿಕ್ಕಾರ ಎಂದು ವೇದ ಹೇಳಿರುವಾಗ ಗಲ್ಲಿ ಗಲ್ಲಿಗಳಲ್ಲಿ ದೇವಾಲಯಗಳನ್ನು ಹೊಂದಿರುವ ಮುದ್ದೇಬಿಹಾಳ ಪಟ್ಟಣ ಪುರಸ್ಕಾರಕ್ಕೆ ಯೋಗ್ಯ.”
– ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು
ಶ್ರೀಶೈಲಂ
ಶೀಮಂತಿಕೆ ಇದ್ದವರು ದಾನ ಧರ್ಮಗಳಿಗೆ ಮುಂದಾಗದಿದ್ದರೆ ಅಂಥವರು ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ಬಂದೊದಗಬಹುದು. ದಾನದಲ್ಲಿ, ಕಾಯಕದಲ್ಲಿ, ಗುರುಗಳಲ್ಲಿ ದೇವರನ್ನು ಕಾಣಬೇಕು. ಅಂದಾಗ ಮಾತ್ರ ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.”
– ಶಿವಕುಮಾರ ಮಹಾಸ್ವಾಮಿಗಳು
ಕಲಾ ಪೋಷಕ ಮಠ, ಸಿದ್ಧನಕೊಳ್ಳ.