ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗೌತಮ್ ಆರ್ ಚೌಧರಿ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಭಾರತ ಸರ್ಕಾರದ ದಿಟ್ಟ ನಿರ್ಧಾರವಾಗಿದೆ. ಈಚೆಗೆ ಕಾಶ್ಮೀರದ ಪೆಹೆಲ್ಗಾಮ್ನಲ್ಲಿ ನಡೆದ ಘೋರ ಹತ್ಯಾಕಾಂಡಕ್ಕೆ ಉತ್ತರವಾಗಿ ನಮ್ಮ ಸೇನೆಯಿಂದ ಪಿಓಕೆ ಮತ್ತು ಪಾಕಿಸ್ತಾನದಲ್ಲಿರುವ ೨೧ ಉಗ್ರರ ತಾಣಗಳ ಮೇಲೆ ಧಾಳಿ ನಡೆಸಿ ಧ್ವಂಸಗೊಳಿಸಿ ಉಗ್ರರನ್ನು ಹತ್ಯೆಗೈದಿರುವುದು ನಮ್ಮ ಶಕ್ತಿ ಏನೆಂದು ಹೇಡಿ ಪಾಕಿಸ್ತಾನಕ್ಕೆ ತಿಳಿಸಿದಂತಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಆರ್ ಚೌಧರಿ ಹೇಳಿದ್ದಾರೆ.
ಬುಧವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಈಚೆಗೆ ಕಾಶ್ಮೀರದ ಪೆಹಲ್ಗಾಮ್ದಲ್ಲಿ ಉಗ್ರರು ಮಾಡಿದ ದಾಳಿಗೆ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಇದರಲ್ಲಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರವು ನಮ್ಮ ಸೈನಿಕರಿಂದ ನಿನ್ನೆ ಮಧ್ಯರಾತ್ರಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಮಾಡಿ ಮೂಲಕ ನೂರಾರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತಿಕಾರ ನೀಡಿದೆ. ಇದು ನಾವೆಲ್ಲರೂ ನಮ್ಮ ಸೈನಿಕರ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತಾಗಿದೆ. ನಮ್ಮ ದೇಶದ ಮಹಿಳೆಯರ ಸಿಂಧೂರ ಕಳೆದವರನ್ನು ಎಂದಿಗೂ ಬಿಡುವದಿಲ್ಲ ಎಂಬ ಸಂದೇಶ ಪಾಪಿ ಪಾಕಿಸ್ತಾನಕ್ಕೆ ಸಾರಿದಂತಾಗಿದೆ. ದೇಶದ ಯೋಧರಿಂದ ಇನ್ನು ಉಗ್ರರ ಸಂಪೂರ್ಣ ನಿರ್ನಾಮವೇ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರವಾಗಿದೆ ಎಂಬ ಸಂದೇಶ ದೇಶವಾಸಿಗಳಿಗೆ ರವಾನೆಯಾದಂತಾಗಿದೆ ಎಂದು ಡಾ.ಗೌತಮ್ ಚೌಧರಿ ತಿಳಿಸಿದ್ದಾರೆ.