ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿದ “ಉದಯರಶ್ಮಿ” ಪತ್ರಿಕಾ ಬಳಗ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಬಡವರ ಸೇವೆಯಲ್ಲಿ ದೇವರನ್ನು ಕಾಣುತ್ತಿರುವ ಮಾನವೀಯ ಕಳಕಳಿಯ ಡಾ.ಗೌತಮ್ ಚೌಧರಿ ಅವರ ಸೇವೆಯನ್ನು ಇಂದಿನ ಯುವ ವೈದ್ಯರು ಅನುಸರಿಸಬೇಕು ಎಂದು “ಉದಯರಶ್ಮಿ” ಸಂಪಾದಕ ಇಂದುಶೇಖರ ಮಣೂರ ಹೇಳಿದರು.
ಬುಧವಾರ ಸಂಜೆ ಬೆಂಗಳೂರಿನ ಅವರ ಆಸ್ಪತ್ರೆಯಲ್ಲಿ “ಉದಯರಶ್ಮಿ” ಪತ್ರಿಕಾ ಬಳಗದೊಂದಿಗೆ ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಡಾ.ಗೌತಮ್ ಚೌಧರಿ ಅವರು ಬಸವಾದಿ ಶರಣರ ಹಾದಿಯಲ್ಲಿ ಸಾಗುತ್ತಿದ್ದು, ವಿಜಯಪುರ ಜಿಲ್ಲೆಯ ಗ್ರಾಮಗಳಲ್ಲಿ ಆಗಾಗ ಆರೋಗ್ಯ ಉಚಿತ ಶಿಬಿರಗಳ ಮೂಲಕ ಸದ್ದಿಲ್ಲದೆ, ಪ್ರಚಾರದ ಹಂಗಿಲ್ಲದೇ ಆರೋಗ್ಯ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಅನುಕರಣೀಯ ನಡೆಯಾಗಿದೆ ಎಂದರು.
ಈ ವೇಳೆ ಡಾ.ಗೌತಮ್ ಚೌಧರಿ ಮಾತನಾಡಿ, ಬಡರೋಗಿಗಳ ಸೇವೆಯಲ್ಲಿ ತಾವು ತಮ್ಮ ತಂದೆ ಮಾಜಿ ಸಚಿವ ದಿ. ಡಾ.ಆರ್.ಬಿ.ಚೌಧರಿ ಅವರನ್ನು ಕಾಣುತ್ತಿದ್ದು ಇದನ್ನು ನಿರಂತರ ಮುಂದುವರೆಸುವುದಾಗಿ ತಿಳಿಸಿದರು.
“ಉದಯರಶ್ಮಿ” ದಿನಪತ್ರಿಕೆಯು ತುಂಬ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪಿದ್ದು ಪತ್ರಿಕೆಯ ಗುಣಮಟ್ಟಕ್ಕೆ ಹಾಗೂ ಅದರ ಜೀವಪರ-ಜನಪರ ಕಳಕಳಿಗೆ ಸಾಕ್ಷಿಯಾಗಿದೆ. ಒಂದು ಜಿಲ್ಲಾಮಟ್ಟದ ದಿನಪತ್ರಿಕೆ ಹೇಗಿರಬೇಕು ಎಂಬುದಕ್ಕೆ “ಉದಯರಶ್ಮಿ” ಮಾದರಿಯಾಗಿದೆ ಎಂದ ಡಾ.ಗೌತಮ್ ಪತ್ರಿಕೆಯ ಎಲ್ಲ ಜೀವಪರ ಕಾರ್ಯಕ್ರಮಗಳಿಗೆ ತಾವೂ ಕೈಜೋಡಿಸುವುದಾಗಿ ಭರವಸೆ ನೀಡಿದರು.
“ಉದಯರಶ್ಮಿ” ಬೆಂಗಳೂರಿನ ಪ್ರಧಾನ ವರದಿಗಾರ ಅರುಣಕುಮಾರ ಮಾತನಾಡಿ, ನಮ್ಮ ಭಾರತೀಯ ಯೋಧರು “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಯಶಸ್ವಿಯಾಗಿ ಸಾಧಿಸಿದ ಹೆಮ್ಮೆ, ಸಂತೋಷದಲ್ಲಿ ದೇಶವೇ ಮುಳುಗಿದ ಈ ಸಾರ್ಥಕ ಘಳಿಗೆಯಲ್ಲಿ ಡಾ.ಗೌತಮ್ ಚೌಧರಿ ಅವರ ಜನ್ಮದಿನ ಆಚರಣೆ ಸಹ ಸಾರ್ಥಕ್ಯ ಪಡೆದಿದೆ ಎಂದರು.
“ಉದಯರಶ್ಮಿ” ವಿಜಯಪುರ ಜಿಲ್ಲಾ ವರದಿಗಾರ ಚಂದ್ರಕಾಂತ ಬಿರಾದಾರ ಮಾತನಾಡಿ, ಡಾ.ಗೌತಮ್ ಚೌಧರಿ ನಮ್ಮ ಭಾಗದ ಸಾಕಷ್ಟು ರೋಗಿಗಳಿಗೆ ತಮ್ಮ ವೈಯುಕ್ತಿಕ ವೆಚ್ಚದಲ್ಲಿ ಬೆಂಗಳೂರಿಗೆ ಕರೆಸಿ ಶಸ್ತ್ರಚಿಕಿತ್ಸೆ ನೆರವೇರಿಸಿ ಅನೇಕ ಬಡ ಕುಟುಂಬಗಳ ಮನೆಗೆ ಬೆಳಕು ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

“ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದ ಸೇವಾ ವೃತ್ತಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಗಿಗಳಲ್ಲಿ ದೇವರನ್ನು ಕಾಣುವ ಪರಿಸ್ಥಿತಿ ಕಾಣದಾಗಿದೆ. ವೈದ್ಯಕೀಯ ವೃತ್ತಿ ಲಾಭದಾಯಕ ವೃತ್ತಿ ಎಂದು ಭಾವಿಸಿರುವ ವೈದ್ಯರ ಸಂಖ್ಯೆ ಯೇ ಹೆಚ್ಚಾಗಿದೆ. ಆದರೆ ತಾವು ಸ್ಥಾಪಿಸಿದ ಹಾಸ್ಪಿಟಲ್ ಮತ್ತು ಟ್ರಸ್ಟ್ ಮಾನವೀಯ ಸೇವಾ ಕಾರ್ಯದ ಉದ್ದೇಶ ಹೊಂದಿದೆ.”
– ಡಾ.ಗೌತಮ್ ಚೌಧರಿ
ಅಧ್ಯಕ್ಷರು, ಡಾ. ಆರ್.ಬಿ.ಚೌಧರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್
ವಿಜಯಪುರ