ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಪುರಸಭೆ ಸದಸ್ಯ ಶಿವಪ್ಪ ಹರಿಜನ ಇವರು ದಿನಗೂಲಿ ನೌಕರ ಶಮುಶುದ್ಧಿನ್ ಮೂಲಿಮನಿ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಮತ್ತು ಅವರು ಪುರಸಭೆಯ ಸಿಬ್ಬಂದಿಗಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷ, ಕೆಲ ಸದಸ್ಯರು ಮತ್ತು ಕೆಲ ನಾಮ ನಿರ್ದೇಶಿತ ಸದಸ್ಯರು ಸಹಿ ಹಾಕಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪತ್ರದ ಸ್ವೀಕೃತಿ ಪ್ರತಿಯನ್ನು ಪತ್ರಿಕೆಗೆ ನೀಡಿದ್ದು, ಶಿವಪ್ಪ ಇವರು ಪದೇ ಪದೇ ಕಚೇರಿಗೆ ಬಂದು ಎಲ್ಲಾ ಸಿಬ್ಬಂದಿಗಳಿಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಪ್ರತ್ಯೇಕವಾಗಿ ಮತ್ತು ವೈಯಕ್ತಿಕವಾಗಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದು ಮತ್ತು ಸಿಬ್ಬಂದಿಗಳ ವಿರುದ್ಧ ತಮ್ಮ ಕಚೇರಿಗೆ ಇಲ್ಲಸಲ್ಲದ ಆರೋಪ ಮಾಡಿ ಪತ್ರಗಳು ನೀಡುತ್ತಿದ್ದು ಇದರ ಬಗ್ಗೆ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದೇ ಪದೇ ಪದೇ ನಮ್ಮ ಕೋಠಡಿಗೆ ಬಂದು ಆರೋಪ ಮಾಡುತ್ತಿದ್ದಾರೆ.
ಪುರಸಭೆಯಲ್ಲಿ ಶಮಶುದ್ದಿನ್ ಮೂಲಿಮನಿ ಇವರು ಸುಮಾರು ವರ್ಷದಿಂದ ದಿನಗೂಲಿ ಮೇಲೆ ನ್ಯಾಯಾಲಯದ ಆದೇಶ ಅನುಸಾರ ಕೆಲಸವನ್ನು ನಿರ್ವಹಿಸುತ್ತಿದ್ದು ಸಾರ್ವಜನಿಕರಿಂದ ಒಳ್ಳೆಯ ಬಾಂಧವ್ಯ ಮತ್ತು ಮೇಲಾಧಿಕಾರಿಗಳ ಆದೇಶದಂತೆ ನಿಷ್ಠೆಯಿಂದ ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇವರ ವಿರುದ್ಧ ಸುಳ್ಳು ಆರೋಪ ಮಾಡಿರುತ್ತಾರೆ. ಇದರ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಇಂದಿರಾ ನಗರದ ರಿ.ಸ.ನಂ ೫೭ ರ ಆಸ್ತಿಯ ಸ್ಲಂ ಬೋರ್ಡ ವಿಷಯದ ಕುರಿತು ಕಲಬುರ್ಗಿಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣದ ಕುರಿತು ಮಾಹಿತಿಯನ್ನು ಮೇಲಾಧಿಕಾರಿಗಳ ಆದೇಶದಂತೆ ಮೂಲಿಮನಿ ನೀಡಿದ್ದರಿಂದ ಅವರ ಮೇಲೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿ ಸದಸ್ಯ ಶಿವು ಅವರ ಸದಸ್ಯತ್ವ ರದ್ದುಗೊಳಿಸುವಂತೆ ತಿಳಿಸಲಾಗಿದೆ.
ಮನವಿ ಪತ್ರಕ್ಕೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಸದಸ್ಯರಾದ ರಫೀಕ ದ್ರಾಕ್ಷಿ, ಭಾರತಿ ಪಾಟೀಲ, ಹಣಮಂತ ಭೋವಿ, ಪ್ರತಿಭಾ ಅಂಗಡಗೇರಿ, ಷರೀಫಾ ಮೂಲಿಮನಿ, ಶಹಜಾದಬಿ ಹುಣಚಗಿ, ನಾಮ ನಿರ್ದೇಶಿತ ಸದಸ್ಯರಾದ ಸಂತೋಷ ನಾಯ್ಕೋಡಿ, ಗೋಪಿ ಮಡಿವಾಳರ ಸಹಿ ಹಾಕಿದ್ದಾರೆ. ಪತ್ರದ ಪ್ರತಿಯನ್ನು ಮುದ್ದೇಬಿಹಾಳದ ಶಾಸಕರಿಗೆ, ಜಿಲ್ಲಾ ಯೋಜನಾ ನಿರ್ದೇಶಕರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗೆ ನೀಡಿದ್ದಾರೆ.