ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಅದು ಕೊರೋನಾ ಮಹಾಮಾರಿಯು ಅಟ್ಟಹಾಸಗೈಯುತ್ತಿದ್ದ ಸಮಯವದು. ಯಾವುದೋ ಕೆಲಸ ನಿಮಿತ್ತ ಮಹಾನಗರದ ಕಡೆಗೆ ತೆರಳಿ ಅಲ್ಲೇನೋ ಹೋಟೇಲ್ ಊಟದಲ್ಲಿ ತಿಂದ ಪೂರಿಯಿಂದ ನನಗೆ ಫುಡ್ ಪಾಯಿಸನ್ ಆಗಿ ಮಾರನೇ ದಿನದಿಂದ ವಿಪರೀತ ಜ್ವರವಿತ್ತು. ಅಂದು ವಿಪರೀತವಾದ ಚಳಿ ಮತ್ತು ಜ್ವರದಿಂದ ನಾನು ಲೋಕದ ಅರಿವಿಲ್ಲದಂತೆ ಮಲಗಿದ್ದೆ. ಮೈಯೆಲ್ಲೆಲ್ಲಾ ಗಾಢ ಕೆಂಪು ಬಣ್ಣದ ಮಚ್ಚೆಗಳು ಉಂಟಾಗಿ ಕಾಲುಗಳೆರಡೂ ಆನೆ ಕಾಲು ರೋಗ ಪೀಡಿತರಂತೆ ವಿಪರೀತ ದಪ್ಪಗಾಗಿದ್ದವು. ಕೋವಿಡ್ ಹಾವಳಿ ಜಾಸ್ತಿ ಇದ್ದುದರಿಂದ ಅಂದು ಆಸ್ಪತ್ರೆಗೂ ಹೋಗಲು ಭಯವಾಗಿತ್ತು. ಆದರೆ ಆತ್ಮವಿಶ್ವಾಸದ ಖನಿಯಂತೆ ನನ್ನ ಪತ್ನಿಯು ನನ್ನ ಪಕ್ಕದಲ್ಲಿಯೇ ಕುಳಿತುಕೊಂಡು ನನ್ನ ತಲೆಯನ್ನು ಸವರುತ್ತಾ ಜ್ವರ ಏರದಂತೆ ತಲೆಗೆ ತಣ್ಣೀರ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದ್ದಿ ಇಡುತ್ತಿದ್ದಳು. ತಣ್ಣೀರಿನ ಬಟ್ಟೆಯ ಲೇಪನವು ತುಸು ಹಿತವೆನಿಸಿ ನಾನು ನಿದ್ರಿಸಿದ್ದೆ.
ಮಧ್ಯ ರಾತ್ರಿ ಎರಡು ಗಂಟೆಗೆ ಎಚ್ಚರವಾದಾಗ ಆಕೆ ನನ್ನ ಹಣೆ, ಗಂಟಲು ಮತ್ತು ಎದೆಗೆ ಅಮೃತಾಂಜನವನ್ನು ಹಚ್ಚುತ್ತಾ ಕುಳಿತಿದ್ದಳು. ನಾನು ಕಣ್ಣು ತೆರೆದು ಆಕೆಯನ್ನು ನೋಡಿದ ಕೂಡಲೇ ಆಗ ಸ್ವಲ್ಪವಾದರೂ ಈಗ ಹಿತವೆನಿಸುತ್ತಿದೆಯೇ ಎಂದು ಕೇಳಿದಳು. ಭಾರವಾದ ತಲೆಯಿಂದಲೇ ಹೌದೆನ್ನುವಂತೆ ತಲೆ ಅಲ್ಲಾಡಿಸಿದೆ. ಊಟ ಮಾಡಲೂ ಸಾಧ್ಯವಾಗದೇ ಮಲಗಿ ಇದ್ದುದರಿಂದ ನಿಮಗೆ ಸ್ವಲ್ಪ ಏನನ್ನಾದರೂ ತಿನ್ನಲು ತರಲೇ ಎಂದು ಕೇಳಿದಳು. ನನಗೆ ಅದಾಗಲೇ ಹಸಿವಾಗಿದ್ದರಿಂದ ‘ಹೌದು’ ಎಂದೆ. ಘನ ರೂಪದ ಏನನ್ನೂ ತಿನ್ನಲು ಸಾಧ್ಯವಾಗದಷ್ಟು ಮತ್ತು ತಲೆಯನ್ನು ಮೇಲೆತ್ತಿ ನೋಡಲಾರದಷ್ಟು ಜ್ವರ ತಲೆಗೆ ಏರಿದ್ದರಿಂದ ಅವಳು ಕೂಡಲೇ ರಾಗಿ ಹಿಟ್ಟನ್ನು ಕದಡಿಸಿ ಚೆನ್ನಾಗಿ ಕುದಿಸಿ ಗಂಜಿ ಮಾಡಿ ತಂದು ನನ್ನ ಬಾಯಿಗಿಟ್ಟಳು. ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ ನಾನು ಅವಳು ಗಂಜಿಯನ್ನು ಕುಡಿಸುತ್ತಿದ್ದಂತೆ ನಿದ್ದೆಯಲ್ಲೇ ಕುಡಿದು ಅಲ್ಲೇ ಮತ್ತೆ ಮಲಗಿಬಿಟ್ಟೆ. ಪತ್ನಿಯು ತನ್ನ ಕೈಯ್ಯಾರೆ ಗಂಜಿ ಕುಡಿಸಿ ತೃಪ್ತಿಯಿಂದ ತಾನು ಏನನ್ನೋ ತಿನ್ನಲು ಅಡುಗೆ ಮನೆಗೆ ಹೋದಳು. ಅಂದಿನ ದಿನಗಳಲ್ಲಿ ನನಗೆನೂ ಯೋಚಿಸಲೂ ಸಾಧ್ಯವಾಗದೇ ‘ಇತ್ತ ಪುಲಿ, ಅತ್ತ ದರಿ’ ಎನ್ನುವಂತಿತ್ತು ನನ್ನ ಸ್ಥಿತಿ.

ಸುಮಾರು ಹದಿನೆಂಟು ದಿನಗಳ ಆಕೆಯ ಮ್ಯಾರಥಾನ್ ಆರೈಕೆ, ನಂಬಿಕೆ ಮತ್ತು ನನ್ನ ಆತ್ಮಸ್ಥೆöÊರ್ಯದ ಕಾರಣದಿಂದಾಗಿ ನಾನು ಆಸ್ಪತ್ರೆಯ ಪಾಲಾಗದೇ, ಕೊರೋನಾದ ಅಟ್ಟಹಾಸಕ್ಕೂ ಸಿಲುಕದೇ ಮಧುಮೇಹ, ಮೂತ್ರನಾಳದ ಸೋಂಕು ಮುಂತಾದ ಲಕ್ಷಣಗಳು ಇದ್ದರೂ ನಿಧಾನವಾಗಿ ಆಕೆಯ ಆರೈಕೆಯಿಂದ ಹಾಸಿಗೆಯಿಂದ ಮೇಲೆದ್ದು ಜೀವಂತವಾಗಿ ಮತ್ತೆ ಬಂದುಬಿಟ್ಟೆ. ಕೆಲವೊಮ್ಮೆ ಒಬ್ಬನೇ ಕುಳಿತಿದ್ದಾಗ ‘ಪುರುಷರು ಈ ರೀತಿ ಇರಲು ಸಾಧ್ಯವೇ ಅಥವಾ ಹೀಗಿರುತ್ತಾರೆಯೇ?’ ಎಂಬ ಪ್ರಶ್ನೆಯು ಅನೇಕ ಬಾರಿ ನನ್ನ ಮನಸಿನಲ್ಲಿ ಮೂಡಿದ್ದಿದೆ. ಏಕೆಂದರೆ ಒಂದಷ್ಟು ದಿನಗಳ ಹಿಂದೆ ನನ್ನ ಪತ್ನಿ ಅನಾರೋಗ್ಯಕ್ಕೆ ಈಡಾಗಿದ್ದಾಗ ನಾನೇನೂ ವಿಶೇಷವಾದ ಶುಷ್ರೂಶೆಯನ್ನು ಆಕೆಗೆ ಮಾಡಿಲ್ಲ. ಆಕೆಯ ಹಣೆಗೆ ಅಮೃತಾಂಜನ ಹಚ್ಚಿರಲಿಲ್ಲ, ಊಟ ಮಾಡಿಸಿರಲಿಲ್ಲ, ಎಷ್ಟು ಜ್ವರವಿದೆ ಎಂದು ನೋಡುವ ಕೆಲಸವನ್ನೂ ಮಾಡಿರಲಿಲ್ಲ. ಅವಳು ಪೂರ್ತಿ ರಾತ್ರಿ ಮಲಗಿರಲಿಲ್ಲ, ಅನಾರೋಗ್ಯದಿಂದ ಬಳಲುತ್ತಿದ್ದ ಅವಳು ಒಬ್ಬಂಟಿ ಅಲ್ಲ, ನಾನೂ ನಿನ್ನೊಂದಿಗೆ ಇದ್ದೇನೆ ಎನ್ನುವ ಭದ್ರತೆಯ ಭಾವವನ್ನು ತರಿಸುವ ಯಾವ ಕೆಲಸವನ್ನೂ ನಾನು ಮಾಡಿಲ್ಲ. ಆಕೆಯ ಹುಟ್ಟು ಹಬ್ಬದ ದಿನವನ್ನೂ ನಾನು ಮರೆತು ಪ್ರವಾಸದಲ್ಲಿದ್ದೆ. ಆದರೆ ನನ್ನ ಅನಾರೋಗ್ಯದ ಸಂದರ್ಭದಲ್ಲಿ ಅವಳು ತಾಯಿಗೆ ಸಮಾನವಾಗಿ ನನ್ನ ಸೇವೆ ಮಾಡಿದ್ದಳು.
ಒಮ್ಮೊಮ್ಮೆ ಆ ಭಗವಂತನು ಹೆಣ್ಣಿಗಾಗಿಯೇ ವಿಭಿನ್ನವಾದ ಮತ್ತು ವಿಶಿಷ್ಟವಾಗಿ ಮಿಡಿಯುವಂತಹ ಮಾತೃತ್ವದ ಹೃದಯವನ್ನು ಕೊಟ್ಟಿದ್ದಾನೆಯೇ? ಒಂದು ಹೆಣ್ಣಿನಲ್ಲಿರುವ ಕರುಣೆ, ಮಮತೆ ಮತ್ತು ಮಾತೃತ್ವದ ಹೃದಯವು ಬಹುತೇಕ ಗಂಡಸರಲ್ಲಿ ಇಲ್ಲ ಏಕೆ ಎನ್ನುವ ಯೋಚನೆಯು ನನ್ನ ಮನಸ್ಸಿನಲ್ಲಿ ಬಂದಾಗ ಸೂಕ್ತ ಉತ್ತರವು ದೊರೆಯದೇ ಸುಮ್ಮನಾಗುತ್ತಿದ್ದೆ. ಆ ಒಂದು ದಿನ ನನ್ನ ಪತ್ನಿಯು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಆಕೆಗೆ ಹಸಿವು ಆಗಿರಬಹುದು, ಆಕೆಯು ಮಲಗಿದಲ್ಲಿಂದ ಎದ್ದೇಳಲು ಅಶಕ್ತಳಾಗಿ ಇದ್ದಿರಬಹುದು. ಆಗ ಆಕೆಯ ಮನದಾಳದಲ್ಲಿ ನನ್ನ ಪತಿ ನನ್ನ ಜತೆಗೇ ಇದ್ದಿದ್ದರೆ ಎಂಬ ಆಸೆಯು ಮೂಡಿರಬಹದು. ಇಂತಹ ಯೋಚನೆಗಳೆಲ್ಲವೂ ಏನೇ ಆಗಿದ್ದರೂ ‘ಈ ಜಗತ್ತಿನ ಪ್ರತಿಯೊಬ್ಬ ಪುರುಷನೂ ಯಾವುದಾದರೂ ಒಂದು ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಆಕೆಯ ನೋವು, ನಲಿವು, ಕಷ್ಟಗಳು, ಭಾವನೆಗಳು ಮತ್ತು ದುಗುಡಗಳನ್ನು ಅರಿಯುವ ಸಣ್ಣದಾದ ಪ್ರಯತ್ನವನ್ನು ಮಾಡಲೇಬೇಕು’ ಎಂಬ ಭಾವನೆಯು ನನ್ನ ಮನದಾಳದಲ್ಲಿ ಮೂಡಿತ್ತು. ಮಗಳಾಗಿ, ಸಹೋದರಿಯಾಗಿ, ತಾಯಿಯಾಗಿ, ಗೆಳತಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಅದೆಷ್ಟು ಪಾತ್ರಗಳನ್ನು ನಿಭಾಯಿಸುತ್ತಾಳೆ ಈ ಹೆಣ್ಣು? ಅದೆಷ್ಟು ಕಷ್ಟಗಳನ್ನು ಆಕೆಯು ಆಕೆಯ ಸಂಸಾರಕ್ಕಾಗಿ ಎದುರಿಸುತ್ತಾಳೆ, ಸಹಿಸುತ್ತಾಳೆ, ಸವಾಲುಗಳ ಜೊತೆಗೆ ಹೋರಾಡುತ್ತಾಳೆ ಎಂದು ಊಹಿಸುವುದೂ ಅಸಾಧ್ಯ. ಅತ್ಯಂತ ಸುಲಭವಾಗಿ ನಾವು ಹೆಣ್ಣು ಮಕ್ಕಳಿಗೆ ಅಪಹಾಸ್ಯ ಮಾಡಬಹುದು, ಆದರೆ ಹೆಣ್ಣಿನೊಳಗೆ ಇರುವ ಮಮತೆಯ ಮೂರ್ತಿ, ಮಾತೃತ್ವದ ಹೃದಯ ಪುರುಷರಲ್ಲಿ ಬಹುತೇಕ ಇರಲು ಸಾಧ್ಯವೇ ಇಲ್ಲ. ಅದಕ್ಕೇ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಲ್ಲಿ ಮಹಿಳೆಯರನ್ನು ಗೌರವ ಮತ್ತು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳು ಇರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನಿಸಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ಫಲಹೀನ ಆಗುತ್ತವೆ ಎಂದು ಮನುಸ್ಮೃತಿ ತಿಳಿಸುತ್ತದೆ.
