ಇಂದಿನಿಂದ (ಫೆ.೨೦ ರಿಂದ ಫೆ.೨೫ ರವರೆಗೆ) ಮಳ್ಳಿ ಗ್ರಾಮದೇವತೆ ಚೌಡೇಶ್ವರಿ, ನಾಗರಳ್ಳಿಯ ಗ್ರಾಮದೇವತೆ ದ್ಯಾವಮ್ಮನ ಅದ್ಧೂರಿ ಜನಪದ ಜಾತ್ರೆ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ- ಡಾ. ಸಂತೋಷ ನವಲಗುಂದಮಳ್ಳಿ
ಉದಯರಶ್ಮಿ ದಿನಪತ್ರಿಕೆ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ೧೨ ಕಿ.ಮೀ ದೂರದಲ್ಲಿರುವ, ಶಹಾಪುರ-ಸಿಂದಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಳ್ಳಿ ಗ್ರಾಮವು ಶ್ರಿ ಚೌಡೇಶ್ವರಿ ಜಾತ್ರೆಯ ಉತ್ಸವಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಮಳ್ಳಿಯಿಂದ ಕೂಗಳತೆಯಲ್ಲಿರುವ ಚಿಕ್ಕ ಗ್ರಾಮ ನಾಗರಳ್ಳಿ. ಇಲ್ಲಿ ದ್ಯಾವಮ್ಮ ದೇವಿ ನೆಲೆಸಿದ್ದಾಳೆ. ಈ ಎರಡೂ ಊರುಗಳು ‘ಸಹೋದರ ಗ್ರಾಮಗಳೆಂದೆ’ ಹೆಸರು ಪಡೆದಿವೆ. ಸಗರನಾಡಿನಲ್ಲಿಯೇ ವೈಶಿಷ್ಟತೆಯಿಂದ ಜರುಗಲಿರುವ ಜಾತ್ರೆ ಎಂದರೆ ಮಳಲಿ(ಮಳ್ಳಿ)ಯ ಶ್ರೀ ಚೌಡೇಶ್ವರಿ ಜಾತ್ರೆ ಹಾಗೂ ನಾಗರಳ್ಳಿ ದ್ಯಾವಮ್ಮ ದೇವಿಯ ಉತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ಶಿವರಾತ್ರಿ ಅಮವಾಸ್ಯೆಯ ಹಿಂದಿನ ಶುಕ್ರವಾರದಂದು ಜಾತ್ರೆ ನಡೆಯುತ್ತದೆ. ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ. ನಾಳೆ ಗುರುವಾರ( ಫೆ.೨೦) ದಿಂದ ಪ್ರಾರಂಭವಾಗುವ ಜಾತ್ರೆ ಫೆ. ೨೪ ರವರೆಗೆ ವಿವಿಧ ಕರ್ಯಕ್ರಮಗಳಾದ ಕುಂಭೋತ್ಸವ, ನಾಟಕ, ಕುಸ್ತಿ ಪಂದ್ಯ, ಎತ್ತಿನ ಬಂಡಿ ಎಳೆಯುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಹಾಗೂ ಉತ್ಸವ ಸಮಿತಿಯಿಂದ ವಿವಿಧ ಸಾಂಸ್ಕೃತಿಕ ಉತ್ಸವಗಳು ಜರುಗುವವು.
ಅನಾದಿಕಾಲದಿಂದಲೂ ನಡೆದುಕೊಂಡು ಬರುವ ಜಾತ್ರೆಯಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅತೀವ ಸಂತೋಷದಿಂದ ಭಾಗವಹಿಸುತ್ತಾರೆ. “ಗ್ರಾಮದ ಗೌಡನ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ಇದೇ ಊರಿನ ಪತ್ತಾರ ಮನೆಯ ಪಕ್ಕದಲ್ಲಿನ ಕೋರವಾರದವರ ಮನೆಯಲ್ಲಿನ ಮರದಲ್ಲಿ ನೆಲೆಸಿದ್ದೇನೆ. ನನಗಾಗಿ ಗುಡಿಯೊಂದು ಕಟ್ಟಿಸಿ, ಅಲ್ಲಿ ಪ್ರತಿಷ್ಠಾಪಿಸಿ ನಿತ್ಯವೂ ಪೂಜಿಸು. ನಿನಗಷ್ಟೇ ಅಲ್ಲ, ನೀನಾಳುವ ಸೀಮೆಯಲ್ಲಾ ಸಂಪದ್ಭರಿತವಾಗುತ್ತದೆ” ಎಂಬ ದೈವವಾಣಿ ಗೌಡನ ಕನಸಿನಲ್ಲಾಗುತ್ತದೆ. ಆ ತರುವಾಯ ಗ್ರಾಮದ ಎಲ್ಲ ಸಮುದಾಯದ ಜನರ ಸಹಕಾರದಿಂದ ಆ ಮರದಿಂದಲೇ ದೇವಿಯರ ಎರಡು ಮುಖಗಳನ್ನು(ದೊಡ್ಡ ಚೌಡಮ್ಮ ಮತ್ತು ಸಣ್ಣ ಚೌಡಮ್ಮ) ಸುಂದರವಾಗಿ ಕೆತ್ತನೆ ಮಾಡಿ ಎರಡು ಜೋಡಿ ಗರ್ಭಗುಡಿಗಳನ್ನು ನಿರ್ಮಿಸಿ ದೇವಿಯರನ್ನು ಪ್ರತಿಷ್ಠಾಪಿಸಿದರು ಎನ್ನುವುದು ಊರ ಪ್ರಮುಖರ ಅಭಿಪ್ರಾಯವಾಗಿದೆ. ಹೀಗಾಗಿ ಹಿರಿಯರು ಅಂದಿನಿಂದ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬಂದಿರುವ ಉತ್ಸವವನ್ನು ಇಂದಿಗೂ ಕಾಣಬಹುದಾಗಿದೆ.

ಜಾತ್ರೆ ಮಾಡುವ ವರ್ಷದ ಶಿವರಾತ್ರಿ ಅಮವಾಸ್ಯೆಯ ಎರಡು ತಿಂಗಳು ಮೊದಲೇ ಉತ್ಸವಕ್ಕಾಗಿ ಊರ ಪ್ರಮುಖರು ಸಕಲ ಸಿದತೆಗಳನ್ನ್ಧು ಮಾಡುತ್ತಾರೆ. ಚೌಡೇಶ್ವರಿ ದೇವಿ ಬಣ್ಣಕ್ಕೆ (ಹೊರ್ಪಂಡ, ಹೊರ್ಪಣ್ಣ) ಹೋಗಿ ಎರಡು ತಿಂಗಳ ರ್ಯಂತರ ಸಪ್ತವರ್ಣಗಳಿಂದ ಮಾಲೀಪಾಟಿಲರ ತೋಟದಲ್ಲಿ ಅಲಂಕಾರಗೊಂಡು ಉತ್ಸವದ ಹಿಂದಿನ ಗುರುವಾರ ರಾತ್ರಿ ೧೦ ಗಂಟೆಗೆ ಹಳ್ಳದ ದಂಡೆಯಲ್ಲಿರುವ ಚೌಡಮ್ಮನ ಕಟ್ಟೆಯ ಮೇಲೆ ಆಸೀನಳಾಗಿ ಗಂಗಸ್ಥಳ ಮಾಡಿಕೊಂಡು ಪುರಪ್ರವೇಶ ಮಾಡುತ್ತಾರೆ. ಶುಕ್ರವಾರದ ನಸುಕಿನ ಜಾವದಿಂದ ಮದ್ಯಾಹ್ನ ೨ ಗಂಟೆಯವರೆಗೂ ಗ್ರಾಮದ ಸರ್ವಜನರು ಭಯ ಭಕ್ತಿಯಿಂದ ಪರಿವಾರ ಸಮೇತ ದೇವಾಲಯಕ್ಕೆ ತೆರಳಿ, ದೇವಿಯರಿಗೆ ಉಡಿತುಂಬಿ ನೈವೇದ್ಯ ಅರ್ಪಿಸಿ ತಮ್ಮ ಹರಕೆಗಳನ್ನು ತೀರಿಸುವರು. ಮದ್ಯಾಹ್ನ ೩ ಗಂಟೆಗೆ ಗ್ರಾಮದ ಮುಖಂಡರ ಜೊತೆಗೆ ಊರ ಜನರು ಸೇರಿ ಡೊಳ್ಳು, ಬಾಜಾ ಭಜಂತ್ರಿ, ಕಳಸದೊಂದಿಗೆ ದೇವಾಲಯಕ್ಕೆ ತೆರಳುವರು. ದೇವಿಯರು ಕಣಗಿಲ ಹೂವನ್ನು ಮುಡಿದುಕೊಂಡು, ಮುತ್ತಿನ ದಂಡಿಯನ್ನು ಧರಿಸಿ ಬಿಚ್ಚುಗತ್ತಿಯನು ಝಳಪಿಸುತ್ತಾ ಬಡಿಗೆಯ ಆಟಕ್ಕೆ ಬರುವರು. ಗಾಮದ ಎಡ ಮತ್ತು ಬಲ ಸಮುದಾಯದ ಭಕ್ತರನ್ನು ಆವ್ಹಾನ ನೀಡಿದ ಗೌಡ ಎರಡೂ ಸಮುದಾಯದವರಿಗೆ ಬಾಜಾ ಭಜಂತ್ರಿಯ ಮೂಲಕ ಊರ ಹಳೆ ಅಗಸಿಗೆ ಕರೆದುಕೊಂಡು ಬರುವಷ್ಟರಲ್ಲಿ ಚೌಡೇಶ್ವರಿ ದೇವಿಯರು ಗರ್ಭಗುಡಿಯಿಂದ ಬಂದು ಪೊಲೀಸಗೌಡರ ಕಟ್ಟೆಯ ಮೇಲೆ ಆಸೀನರಾಗಿರುತ್ತಾರೆ. ಎಡ-ಬಲ ಸಮುದಾಯಗಳ ಭಕ್ತರ ಮುಖಂಡರು ಹಾಗೂ ಚೌಡೇಶ್ವರಿ ದೇವಿಯರು ಹಳೆ ಅಗಸಿಯಲ್ಲಿ ರೌದ್ರಾವತಾರದಿಂದ ಬರುವ ದೇವಿಯರ ಹಾಗೂ ವೀರಾವೇಶದಿಂದ ತಂಡೋಪ ತಂಡವಾಗಿ ಬರುವ ಎರಡೂ ಸಮುದಾಯದ ನಾಯಕರಿಗೆ ಗಂಧವನು ಲೇಪಿಸಿ ಅವರಿಂದ ಬಡಿಗೆಯನ್ನು ಪಡೆದು ರಾಜಬೀದಿಯಲಿ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ ಆಟ ಆಡುವರು.
ನೋಡುಗರ ತದೇಕ ಚಿತ್ತದ ದೃಷ್ಟಿಗೆ ಮಡಿವಾಳನ ರಾಡಿ, ತಳವಾರನ ಬಾನ, ಹಡಪದನ ಸೆಗಣಿ ರಪ್ಪೆಂದು ಸಿಡಿಯುವಾಗ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಬಂದ ಭಕ್ತರು ತಮ್ಮ ಬಟ್ಟೆಗಳನ್ನು ನೋಡುತ್ತಾ ಧನ್ಯತೆಯ ಭಾವ ಮೆರೆಯುತ್ತಾರೆ. ದೇವಿಯರ ಆಟದಲ್ಲಿ ಗದ್ದಲವಾಗದಂತೆ ಜನರ ಸಮೂಹ ಚದುರಿಸಲು ಹಡಪದನು ಬಾರಿಕಂಟೆ ಎಳೆವಾಗ ಆರಕ್ಷಕರ ನಗು ಮುಗಿಲು ಮುಟ್ಟಿರುತ್ತದೆ. ಆರಕ್ಷಕರಿಗೂ ಬೇಗ ಜನರನ್ನು ಚದುರಿಸಲಾಗದ ಸನ್ನಿವೇಶದಲ್ಲಿ ಹಡಪದನ ಬಾರಿಕಂಟೆ ಬಂತೆಂದರೆ ಸಾಕು ಜನ ತಾವಾಗಿಯೇ ಚದುರಿ ದೇವಿಯರ ಬಡಿಗೆ ಆಟಕ್ಕೆ ಅನುವು ಮಾಡುತ್ತಾರೆ. ಅಕ್ಕ-ತಂಗಿಯರ ಆಟ ನೋಡುವಲ್ಲಿ ಎಂಥವರಿಗಾದರೂ ಭಕ್ತಿ ಮತ್ತು ಸಂತಸದ ಕೃತಾರ್ಥ ಭಾವ ಪುಟಿದೇಳಲೇಬೇಕು. ಶುಕ್ರವಾರ ಸಾಯಂಕಾಲ ೬ ಗಂಟೆಯವರೆಗೆ ಆಟವಾಡಿ ಚೌಡಮ್ಮನ ಕಟ್ಟೆಯ (ಹಳ್ಳದ ದಂಡೆ) ಮೇಲೆ ಆಸೀನಳಾಗುವಳು. ರಾತ್ರಿಯಲ್ಲಾ ದೇವಿಯರ ಮುಖಗಳನ್ನು ಕಟ್ಟಿಕೊಂಡು ಸಕ್ಕಾಸರಗೆ, ಮಜ್ಜಿಗೆ ಮಾಡುವುದು, ಡೊಳ್ಳಿನ ತಾಳಕ್ಕೆ ಹೆಜ್ಜೆ ಹಾಕುವುದು ಇತ್ಯಾದಿ ಜನಪದ ಕಾರ್ಯಕ್ರಮಗಳು ಜರುಗುವವು.
ಶನಿವಾರ ಬ್ರಾಹ್ಮಿ ಪೂಜೆ ಸ್ವೀಕರಿಸಿ ಗ್ರಾಮದ ನಬೀಸಾಬ ನಾಯ್ಕೋಡಿಯವರ ಮನೆಗೆ ಹೋಗಿ ಮೊದಲ ಉಡಿ ತುಂಬಿಸಿಕೊಳ್ಳುವಳು, ನಂತರ ಮಡಿವಾಳರ ಮನೆಯಲ್ಲಿ ಮೈಲಿಗೆ ವಸ್ತçವನು ಬಿಟ್ಟು ಉಡಿತುಂಬಿಸಿಕೊಂಡು, ತವರುಮನೆಗೆ ಬಂದು ಎರಡು ದಿನದ ಉಪವಾಸ ಬಿಡುವಳು. ಪೊಲೀಸ್ಗೌಡ, ಮಾಲೀಗೌಡ, ಕುಲಕರ್ಣಿಯವರ ಮನೆಗಳಲ್ಲಿ ಉಡಿತುಂಬಿಸಿಕೊಂಡು ಮಧ್ಯಾಹ್ನ ೧೨ ಗಂಟೆಯೊಳಗಾಗಿ ದೇವಾಲಯದ ಗರ್ಭಗುಡಿ ಪ್ರವೇಸಿಸುವಳು. ಗ್ರಾಮದಲ್ಲಿರುವ ಸರ್ವಜಾತಿಗಳಿಗೂ ಒಂದೊಂದು ಛಾಜ ನಿಭಾಯಿಸುವುದರ ಮೂಲಕ ಇಡೀ ಗ್ರಾಮದ ಎಲ್ಲ ಜನರ ಭಾಗವಹಿಸುವಿಕೆ ಎದ್ದು ಕಾಣುತ್ತದೆ. ಸರ್ವ ಧರ್ಮ, ಜಾತಿಯವರು ಪ್ರೀತಿ-ಅಭಿಮಾನದಿಂದ ಕೂಡಿ ಭಕ್ತಿ ಮೆರೆಯುವುದರ ಮೂಲಕ ನಾವೆಲ್ಲರೂ ಒಂದು ಎನ್ನುವ ದಿವ್ಯ ಸಂದೇಶ ಈ ಜಾತ್ರೆಯ ವೈಶಿಷ್ಟತೆಗಳಲ್ಲೊಂದಾಗಿದೆ. ಹೀಗಾಗಿ, “ಮಾನವ ಕುಲಂ ತಾನೊಂದೆವೊಲಂ” ಎಂಬಂತೆ ಮಳ್ಳಿ ಜಾತ್ರೆ ಸರ್ವಸಮಾನತೆಯ ಪ್ರತೀಕವೆನಿಸುತ್ತದೆ.


