ರಚನೆ
– ರಾಜಶೇಖರ ರಾವ್
ಸೋಮನಹಳ್ಳಿ
ಉದಯರಶ್ಮಿ ದಿನಪತ್ರಿಕೆ
ಆರದಿರದ ನಂದಾದೀಪ ಬಾನಂಗಳದಲಿ
ಆ ದೀಪ ಬೆಳಗುತಲಿ ನಿರಂತರ ಬ್ರಹ್ಮಾಂಡದಲಿ
ಹಗಲಲ್ಲಿ ಭಾಸ್ಕರನ ಪಾಳಿ ಇರುಳಲಿ ಚಂದಿರ
ಇವರನುಗುಣ ಪ್ರಕೃತಿಯ ಪ್ರಕ್ರಿಯೆ ಶಾಶ್ವತ
ಇಂದು ಆಳಿ ಅಳಿಸಿ ನಾಳೆಗಳ ಮಾಡುವ ದೀಪ
ನಾಳೆ ಹಾಳೆಗಳಲಿ ಅಕ್ಷರನಾದ ಬರೆವ ದಾರಿದೀಪ
ಪ್ರತಿಯ ಪ್ರತಿಸಾಲುಗಳು ಬದುಕು ಹರೆವ ಹಾದಿ
ಹಾದಿಗಳಲಿ ನೀತಿ ನಿಯಮ ಪೊರೆಯುವ ಗಾದಿ
ಸೊಡರಿದುವೆ ನಿರಂತರ ಉರಿವ ಸುಂದರ ದೀಪ
ಬತ್ತಿದರು ಎಣ್ಣೆಬತ್ತಿ ನಿಗಿನಿಗಿ ಹೊತ್ತುರಿವ ತಾಪ
ನಿರಂತರ ಕರ್ಮಚಕ್ರ ಕಳೆವ ಪಯಣದ ಶಾಪ
ಸೂರ್ಯ ಚಂದ್ರರೆ ರಂಗದಾಟಕೆ ನಂದಾದೀಪ
