ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ (೧೪ ವಯೋಮಾನದೊಳಗಿನ ಬಾಲಕಿಯರ) ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ರಜತ ಪದಕ ಪಡೆದಿದ್ದಾರೆ.
ರೋಚಕ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ನಾಲ್ಕು ಅಂಕಗಳ ಅಂತರದಲ್ಲಿ ಮಹಾರಾಷ್ಟ್ರ ತಂಡದ ಎದುರು ಸೋತಿತು. ರಜತ ಪದಕದೊಂದಿಗೆ ಟ್ರೋಫಿ ಪಡೆದರು.
ಕರ್ನಾಟಕ ತಂಡದಲ್ಲಿ ಐವರು ಬಾಲಕಿಯರು ಸಮೀಪದ ಬೇನಾಳ ಆರ್.ಎಸ್. ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು, ಒಬ್ಬಾಕೆ ಸಮೀಪದ ಯಲಗೂರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಇದ್ದಾರೆ.
ಕರ್ನಾಟಕ ತಂಡದಲ್ಲಿನ ನಿಸರ್ಗಾ ಸಿದ್ದರಾಜು ರಾಷ್ಟ್ರ ಮಟ್ಟದ ಬೆಸ್ಟ್ ದಾಳಿಗಾರ್ತಿ (ಅಟ್ಯಾಕರ್ ) ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಇಲ್ಲಿಯವರೆಗೂ ವಿಜಯಪುರ ಜಿಲ್ಲೆಯ ಯಾವೊಬ್ಬ ಕ್ರೀಡಾಪಟು ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ರಜತ ಪದಕ ಪಡೆದಿಲ್ಲ. ನಾನು ತರಬೇತಿಗೊಳಿಸಿದ ವಿದ್ಯಾರ್ಥಿನಿಯರು ಪಡೆದದ್ದು ನನಗೆ ಹೆಮ್ಮೆಯ ವಿಷಯ ಎಂದು ಬೇನಾಳ ಆರ್.ಎಸ್. ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎನ್.ಬಿ.ದಾಸರ ಹೇಳಿದರು.
ಜಿಲ್ಲೆಯ ಬೇನಾಳ, ಮಣಗೂರು, ಮಸೂತಿ ಸೇರಿದಂತೆ ನಾನಾ ಶಾಲೆಗಳ ನೈಜ ಕೊಕ್ಕೊ ಪ್ರತಿಭೆಗಳ ಮೇಲೆ ವಿಶ್ವಾಸವಿತ್ತು, ಅದಕ್ಕಾಗಿಯೇ ಇದೇ ಪ್ರಥಮ ಬಾರಿಗೆ ಆಲಮಟ್ಟಿಯಲ್ಲಿ ಬೆಳಗಾವಿ ವಿಭಾಗ ಮಟ್ಟ ಹಾಗೂ ಕರ್ನಾಟಕ ರಾಜ್ಯ ಮಟ್ಟವನ್ನು ಆಲಮಟ್ಟಿಯಲ್ಲಿಯೇ ಪಂದ್ಯಾವಳಿ ಸಂಘಟಿಸಿ ಜಿಲ್ಲೆಯ ಕೊಕ್ಕೊ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲಾಗಿತ್ತು. ಈಗ ರಾಷ್ಟ್ರ ಮಟ್ಟದಲ್ಲಿಯೂ ಸಾಧನೆ ಮಾಡಿದ್ದು ಹರ್ಷ ತಂದಿದೆ ಎಂದು ಆಲಮಟ್ಟಿಯಲ್ಲಿ ರಾಜ್ಯ ಮಟ್ಟದ ಕೊಕ್ಕೊ ಸಂಘಟಿಸಿದ್ದ ಶಿಕ್ಷಕ ಸಂಘಟನೆಯ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹರ್ಷ ವ್ಯಕ್ತಪಡಿಸಿದರು.
ಬೇನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗಳೇಶ್ವರ, ಲಕ್ಷ್ಮಿ ವಡಗೇರಿ, ಅಯ್ಯಮ್ಮಾ ಹಾವರಗಿ, ಅಪೂರ್ವ ತೋಟದ, ಸುಮಂಗಲಾ ಮಂಗಳಗುಡ್ಡ ಹಾಗೂ ಸಮೀಪದ ಯಲಗೂರ ಶಾಲೆಯ ಸಂಜನಾ ವಡವಡಗಿ ಕರ್ನಾಟಕ ಬಾಲಕಿಯರ ಖೋಖೋ ತಂಡದಲ್ಲಿದ್ದರು.

