ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಕ್ಕಳ, ಯುವಜನಾಂಗದ ಮನಸ್ಸನ್ನು ವಿಕಸನಗೊಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ೧೨ ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳು ಮಾರ್ಗದರ್ಶಿಯಾಗಿವೆ ಎಂದು ನರಸಲಗಿಯ ಎಸ್.ಡಿ.ಎಸ್.ಬಿ.ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಎ.ಎಂ.ನರಸರಡ್ಡಿ ಹೇಳಿದರು.
ತಾಲೂಕಿನ ನರಲಸಗಿ ಗ್ರಾಮದ ಎಂ.ಡಿ.ಎಸ್.ಬಿ. ಸಂಯುಕ್ತ ಪಪೂ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಲಿಂ.ಸಿದ್ರಾಮಪ್ಪ ನಾಗಪ್ಪ ಕನ್ನೂರ, ಲಿಂ. ಸೋಮಪ್ಪ ಶಿವಪ್ಪ ಹೆಬ್ಬಾಳ, ಲಿಂ.ಮನೋಹರ ತವನಪ್ಪ ದಂಡಾವತಿ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ರಚಿಸಿರುವ ವಚನಗಳ ಅರ್ಥಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಬೇಕಿದೆ. ನಾಡಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಶರಣರ ಸಾಹಿತ್ಯವನ್ನು ಪ್ರಸರಣ ಮಾಡುವಲ್ಲಿ ತನ್ನ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಡಾ.ಫ.ಗು.ಹಳಕಟ್ಟಿ ಕುರಿತು ಅರುಂಧತಿ ಹತ್ತಿಕಾಳ ಮಾತನಾಡಿ, ಫ.ಗು.ಹಳಕಟ್ಟಿ ಅವರು ವಚನಗಳ ಸಂಗ್ರಹಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವ ಮೂಲಕ ವಚನಗಳ ಸಂಗ್ರಹ ಮಾಡಿ ಅವುಗಳ ಸಂರಕ್ಷಣೆ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಅದಕ್ಕಾಗಿ ಇವರನ್ನು ವಚನ ಗುಮ್ಮಟ ಎಂದು ಕರೆಯಲಾಗಿದೆ. ಅವರು ಸ್ವಂತಕ್ಕಾಗಿ ಬದುಕು ಸಾಗಿಸದೇ ಸಮಾಜಕ್ಕಾಗಿ ಬಾಳಿ ಬದುಕಿದರು. ಅದಕ್ಕಾಗಿ ಇಂದಿಗೂ ಅವರು ಚಿರಸ್ಮರಣೀಯರಾಗಿದ್ದಾರೆ ಎಂದರು.
೧೨ ನೇ ಶತಮಾನದ ವಚನಕಾರ್ತಿಯರ ಕುರಿತು ಡಾ.ವೀಣಾ ಗುಳೇದಗುಡ್ಡ ಮಾತನಾಡಿ, ಜಾತಿ,ಮತ ಎಣಿಸದೇ ಎಲ್ಲ ಜನಾಂಗದ ಶರಣೆಯರು ೧೨ ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ್ದಾರೆ. ೩೬ ವಚನಕಾರ್ತಿಯರು ಇದ್ದರು. ಆಯ್ದಕ್ಕಿ ಲಕ್ಕಮ್ಮ, ದುಗ್ಗವ್ವೆ, ಸೂಳೆಸಂಕವ್ವೆ, ಕಸಗೂಡಿಸುವ ಸತ್ಯಕ್ಕ ಸೇರಿದಂತೆ ಅನೇಕ ಶರಣೆಯರು ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ಮುಖಂಡ ಶ್ರೀಶೈಲಗೌಡ ಹೊಸಳ್ಳಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಪ್ರೊ.ಪಿ.ಎಲ್.ಹಿರೇಮಠ, ವಿವೇಕಾನಂದ ಕಲ್ಯಾಣಶೆಟ್ಟಿ, ಶರಣು ಬಸ್ತಾಳ, ಎಸ್.ಐ.ಮನಗೂಳಿ, ಸಾವಿತ್ರಿ ಕಲ್ಯಾಣಶೆಟ್ಟಿ, ಅಪ್ಪು ದಂಡಾವತಿ, ದೇವೇಂದ್ರ ಗೋನಾಳ ಇತರರು ಇದ್ದರು.
ಡಾ.ಅರ್ಜುನ ಉಳ್ಳಾಗಡ್ಡಿ ಸ್ವಾಗತಿಸಿದರು. ಆರ್.ಜಿ.ಅಳ್ಳಗಿ ಪ್ರಾಸ್ತವಿಕವಾಗಿ ಮಾತನಾಡಿದರು. ಸುಶ್ಮಿತಾ ಓದಿ ನಿರೂಪಿಸಿದರು. ಎಂ.ಸಿ.ಜಡಿಮಠ ವಂದಿಸಿದರು.

