ಇಟ್ಟಂಗಿಹಾಳ ಬಳಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹೊರವಲಯದ ಇಟ್ಟಂಗಿಹಾಳ ಬಳಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನೆ ಘಟಕ ಸ್ಥಾಪಿಸಲು 10 ಎಕರೆ ಜಮೀನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಘೋಷಿಸಿದ್ದಾರೆ.
ಶನಿವಾರ ನಗರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಆಯೋಜಿಸಿರುವ ಮೈಸೂರು ಸ್ಯಾಂಡಲ್ ಸಾಬೂನು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ, ಸಚಿವ ಎಂ.ಬಿ. ಪಾಟೀಲ ಅವರು ಕೈಗಾರಿಕೆ ಸಚಿವರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು, ನಷ್ಟದಲ್ಲಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವನ್ನು ಲಾಭಕ್ಕೆ ತಂದಿದ್ದಾರೆ. ಮುಂದಿನ ಸಂಕ್ರಾಂತಿಯೊಳಗೆ ವಿಜಯಪುರ ಜಿಲ್ಲೆಯಲ್ಲಿಯೇ ಒಂದು ಸಾಬೂನು ಕಾರ್ಖಾನೆ ಘಟಕ ಪ್ರಾರಂಭಿಸಬೇಕು. ಇದರಿಂದ ನೂರಾರು ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಮನವಿ ಮಾಡಿದರು.
ಆಗ ತಕ್ಷಣ ಸ್ಪಂದಿಸಿದ ಸಚಿವ ಎಂ. ಬಿ. ಪಾಟೀಲ ಅವರು, ಇಟ್ಟಂಗಿಹಾಳ ಬಳಿ 10 ಎಕರೆ ಜಮೀನು ನೀಡಲಾಗುವುದು. ಒಂದೆರಡು ದಿನಗಳಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ಮೈಸೂರು ಮಹಾರಾಜರು ನೀರಾವರಿಗಾಗಿ ಕೆ.ಆರ್.ಎಸ್. ಡ್ಯಾಂ, ಕೈಗಾರಿಕೆಗಾಗಿ ಕೆ.ಎಸ್.ಡಿ.ಎಲ್. ಮತ್ತು ಶಿಕ್ಷಣಕ್ಕಾಗಿ ನಾನಾ ಸಂಸ್ಥೆಗಳನ್ನು ಪ್ರಾರಂಭಿಸಿ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಅವರು ಪ್ರಾರಂಭಿಸಿರುವ ಮೈಸೂರು ಸ್ಯಾಂಡಲ್ ಸೋಪ್ ಜಗತ್ತಿನಾದ್ಯಂತ ಅದರದೇ ಜನಪ್ರೀಯತೆ ಹೊಂದಿದೆ. ಈ ಹಿಂದೆ ರಾಜ್ಯದ ಜನರ ಮನಗಳಲ್ಲಿ ಸ್ಥಾನ ಪಡೆದಿದ್ದ ಸಾಬೂನು ಇತ್ತೀಚೆಗೆ ಗೊಂದಲದಿಂದ ಕೂಡಿ ಅಪಖ್ಯಾತಿ ಪಡೆದಿತ್ತು. ನಾನು ಸಚಿವನಾದ ನಂತರ ಸೂಕ್ತ ಕ್ರಮ ಕೈಗೊಂಡು ಡಿಎಫ್ಓ ಪ್ರಶಾಂತ ಅವರನ್ನು ಎಂಡಿ ಮಾಡಿ ಪುನಶ್ಚೇತನಕ್ಕೆ ಕ್ರಮ ಕೈಗೊಂಡು ಸುಮಾರು 20 ಹೊಸ ಉತ್ಪನ್ನಗಳನ್ನು ಹೊರತಂದು ಸಂಸ್ಥೆಯನ್ನು ಗತವೈಭವಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ರಾಜ್ಯದ ಕಿರಾಣಿ ಅಂಗಡಿಗಳಿಂದ ಹಿಡಿದು ದೇಶ, ವಿದೇಶಗಳಲ್ಲಿ ನಮ್ಮ ಮಳಿಗೆ ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಕ್ರಮ ಕೈಗೊಳ್ಳಲಾಗಿದೆ. ನಮ್ಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಲಾ ಲೋಕ ಸ್ಥಾಪಿಸಿ ಅಲ್ಲಿ ಈ ಉತ್ಪನ್ನಗಳನ್ನು ಪರಿಚಯಿಸಲಾಗುವುದು. ನಮ್ಮ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆ.ಎಸ್.ಡಿ.ಎಲ್ ಅಧ್ಯಕ್ಷ ಸಿ. ಎಸ್ ನಾಡಗೌಡ ಕೂಡ ಈಗ ಕಂಪನಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ ಪಿ. ಕೆ. ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿ. ಪಂ. ಸಿಇಓ ರಿಷಿ ಆನಂದ, ಆಡಳಿತ ಮತ್ತು ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಎಂ. ಗಂಗಪ್ಪ, ಬೆಂಗಳೂರು ಕಚೇತಿಯ ಅಕೌಂಟ್ಸ್ ಮ್ಯಾನೇಜರ್ ರುದ್ರೇಶ ಬಿ. ಕೆ., ಕಿರಿಯ ಅಧಿಕಾರಿ ವಿಜಯಮಹಾಂತೇಶ ಕಾಮತ, ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗು ಸಜ್ಜನ, ಗುರು ಗಚ್ಚಿನಮಠ, ಕಾರ್ಪೋರೇಟರ್ ರಾಜು ಮಗಿಮಠ, ಎಂ. ಎಸ್. ಕರಡಿ ಮುಂತಾದವರು ಉಪಸ್ಥಿತರಿದ್ದರು.

“ಇಂದಿನ ಪೈಪೋಟಿಯ ಯುಗದಲ್ಲಿ ನಾವೂ ಕೂಡ ನಮ್ಮ ಗುಣಮುಟ್ಟದ ಉತ್ಪನ್ನಗಳನ್ನು ಪರಿಚಯಿಸಿ, ಪ್ರಚಾರ ಮಾಡಿ, ಮನೆಮನೆಗೆ ತಲುಪಿಸುವ ಮೂಲಕ ಇತರ ಕಂಪನಿಗಳಿಗೆ ಸ್ಪರ್ಧೆಗಿಳಿಯಬೇಕು. ಜಾತ್ರೆ, ಸಾಂಸ್ಕೃತಿಕ ಮತ್ತೀತರ ಕಾರ್ಯಕ್ರಮಗಳಲ್ಲಿ ಸಾಬೂನು ಮೇಳ ಆಯೋಜಿಸಿ ರಿಯಾಯಿತಿ ದರದಲ್ಲಿ ಸಾಬೂನು ಮಾರಾಟ ಮಾಡಬೇಕು. ಈ ಮೂಲಕ ಬಹುರಾಷ್ಟ್ರೀಯ ಕಂಪನಿಳ ಪ್ರಚಾರಕ್ಕೆ ಪ್ರತಿಯಾಗಿ ನಮ್ಮ ವಸ್ತುಗಳ ಪ್ರಚಾರ ಕೈಗೊಳ್ಳಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪಿನ ಗುಣಮಟ್ಟ ಎಂದೂ ಬದಲಾಗಿಲ್ಲ. ಅಗರಬತ್ತಿ, ಸೌಂದರ್ಯವರ್ಧಕ ವಸ್ತುಗಳು, ಬಟ್ಟೆ ಒಗೆಯುವ ಸಾಬೂನುಗಳು, ಧೂಪ್, ಸಾಮ್ರಾಣಿ ಸೇರಿದಂತೆ ಇನ್ನೂ ಹೆಚ್ಚು ಹೊಸ ಉತ್ಪನ್ನಗಳ ಪರಿಚಯಕ್ಕೆ ಸಚಿವ ಎಂ. ಬಿ. ಪಾಟೀಲರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಉತ್ಪನ್ನಗಳ ಜನಪ್ರೀಯತೆಯಾಗಲು ಸಂಸ್ಥೆಯ ಸಕಲ ಸಿಬ್ಬಂದಿ ಕೊಡುಗೆಯೂ ಸಾಕಷ್ಟಿದೆ. ವಿಜಯಪುರದಲ್ಲಿಯೂ ಒಂದು ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಐದಾರು ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಲು ಸಿದ್ಧತೆ ಮಾಡಲಾಗುವುದು.”
– ಸಿ. ಎಸ್. ನಾಡಗೌಡ
ಶಾಸಕರು ಹಾಗೂ ಅಧ್ಯಕ್ಷರು
ಕೆ.ಎಸ್.ಡಿ.ಎಲ್ ಸಂಸ್ಥೆ, ಬೆಂಗಳೂರು

“ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ ಸ್ಥಾಪಿಸುವ ಸಚಿವ ಎಂ. ಬಿ. ಪಾಟೀಲರ ನಿರ್ಧಾರ ಸ್ವಾಗತಾರ್ಹ. ಇದರಿಂದ 400 ಯುವಕರಿಗೆ ಉದ್ಯೋಗ ಸಿಗಲಿದೆ. ಇಂದು ನೀರಾವರಿಯಿಂದಾಗಿ ಜಿಲ್ಲೆ ಅಭಿವೃದ್ಧಿಯಾಗಿದೆ. ಮುಂದಿನ ವರ್ಷದಲ್ಲಿ ವಿಜಯಪುರದಲ್ಲಿಯೇ ರಾಜ್ಯದಲ್ಲಿ ಅತೀ ಹೆಚ್ಚು ಮೈಸೂರು ಸ್ಯಾಂಡಲ್ ಸೋಪ್ ಮಾರಾಟದಲ್ಲಿ ಮುಂಚೂಣಿಯಲ್ಲಿರಲಿದೆ. ನಾವೂ ಕೂಡ ಈ ಉತ್ಪನ್ನಗಳ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.”
– ಬಸನಗೌಡ ಪಾಟೀಲ ಯತ್ನಾಳ
ಶಾಸಕರು, ವಿಜಯಪುರ ನಗರ

