ಉದಯರಶ್ಮಿ ದಿನಪತ್ರಿಕೆ
ವರದಿ: ಚೇತನ ಶಿವಶಿಂಪಿ
ಮುದ್ದೇಬಿಹಾಳ: ಸಂಜೆ ಮೈ ಕೊರೆಯುವ ಚಳಿ, ಬೆಳಿಗ್ಗೆಯಾದರೆ ಸಾಕಪ್ಪ ಎನ್ನುತ್ತಿದ್ದಂತೆ ಬರುವ ನೆತ್ತಿ ಸುಡುವ ಬಿಸಿಲು. ಕಲ್ಲು ಮುಳ್ಳುಗಳೆನ್ನದೇ ಸಾಗುವ ಭಕ್ತರ ದಂಡು. ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಇದಾವುದನ್ನೂ ಲೆಕ್ಕಿಸದೇ ಪಾದಯಾತ್ರೆ ಹೊರಡುವ ಭಕ್ತರ ದಂಡು.
ಶ್ರೀ ರಾಯರನ್ನು ನೆನೆದಾಗ ಮೊದಲು ನೆನಪಾಗುವದೇ ಮಂತ್ರಾಲಯದ ಬೃಂದಾವನ. ಏನೇ ಕಷ್ಟವಿದ್ದರೂ ಶ್ರೀಗಳನ್ನು ನೆನೆದರೆ ಸಾಕು ನಿವಾರಣೆಯಾಗುತ್ತದೆ ಎನ್ನುವ ಅಚಲ ನಂಬಿಕೆಯಿಂದ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತುಂಗಾ ತೀರದ ನಿವಾಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಹೊರಡುತ್ತಾರೆ ಭಕ್ತ ಗಣ.
ಶ್ರೀಗಳ ದರ್ಶನ ಪಡೆಯಲು ವರ್ಷವಿಡೀ ಕಾತುರದಿಂದ ಕಾಯುವ ಪಟ್ಟಣದ ಈ ಭಕ್ತರ ಪಡೆ, ಜನೆವರಿ ತಿಂಗಳು ಬಂತೆಂದರೆ ಸಾಕು ಪಾದಯಾತ್ರೆ ಹೊರಡುವ ಸಿದ್ಧತೆಗೆ ಇಳಿಯುತ್ತಾರೆ. ಜ.೯ ರಂದು ಪಾದಯಾತ್ರೆ ಮೂಲಕ ಮಂತ್ರಾಲಯಕ್ಕೆ ಹೊರಡುವ ಭಕ್ತ ಸಮೂಹ ಒಟ್ಟು ೨೦೦ ಕಿಮೀ ಗಳ ೫ದಿನಗಳ ಪಾದಯಾತ್ರೆ ಮಾಡುವರು. ದಿನಕ್ಕೆ ೪೦ ಕಿಮೀ ನಂತೆ ಹೊರಡುವ ಭಕ್ತರಿಗೆೆ ಯಾವುದೇ ಜಾತಿ, ಮತ, ಪಂಥ, ಬೇಧ-ಭಾವ ಇಲ್ಲ. ಕೋಟಿ ಒಡೆಯರು, ಕಡು ಬಡವರು, ಡಾಕ್ಟರ್, ಇಂಜಿನೀಯರ, ಪೊಲೀಸರು, ವಕೀಲರು, ಶಿಕ್ಷಕರು ಮತ್ತು ಪತ್ರಕರ್ತರನ್ನೂ ಒಳಗೊಂಡಂತೆ ಸಾಲು ಸಾಲಾಗಿ ಶ್ರೀ ರಾಯರ ನಾಮ ಸ್ಮರಣೆ ಮಾಡುತ್ತ ಸಾಗುವರು. ಕೆಲವರು ಕಾಲು ನೋವು, ಕಾಲಿನಲ್ಲಿ ಗುಳ್ಳೆ ಇನೀತರ ಅನಾರೋಗ್ಯದಿಂದ ಬಳಲಿದರೂ ಕೊಂಚ ವಿಶ್ರಾಂತಿ ಮಾಡುವ ಮೂಲಕ ಚಲಿಸುವರೇ ಹೊರತು ಪಾದಯಾತ್ರೆ ಬಿಡುವವರಲ್ಲ. ವರ್ಷದಿಂದ ವರ್ಷಕ್ಕೆ ಚಿಕ್ಕ ಬಾಲಕರಿಂದ ಹಿಡಿದು ವಯೋ ವೃದ್ಧರವೆರೆಗೆ ಪಾದಯಾತ್ರೆಯಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಮಂತ್ರಾಲಯ ತಲುಪಿ ರಾಯರ ದರ್ಶನವಾಗುತ್ತಿದ್ದಂತೆಯೇ ಪಾದಯಾತ್ರಿಗಳ ಎಲ್ಲ ನೋವುಗಳು ಮಾಯವಾಗಲಾರಂಭಿಸುತ್ತವೆ ಎನ್ನುವ ಹೇಳಿಕೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ನಾಲ್ಕೆöÊದು ದಿನಗಳವರೆಗೆ ಕ್ರಮೇಣ ಪಾದಯಾತ್ರೆ ಮಾಡಿದ ಭಕ್ತರಿಗೆ ಮೈ ಕೈ ನೋವಿನ ಜೊತೆಗೆ ಜೀವನದ ಎಲ್ಲ ಕಷ್ಟಗಳನ್ನು ದೂರಮಾಡಿ ಸನ್ಮಾರ್ಗದಲ್ಲಿ ಕರೆದೊಯ್ಯುತ್ತಾರೆ ರಾಯರು ಎಂದು ಹೇಳುತ್ತಾರೆ ಹತ್ತಾರು ವರ್ಷಗಳ ಪಾದಯಾತ್ರಿ ಭಕ್ತರು.
ಇನ್ನು ಈ ಪಾದಯಾತ್ರಿಗಳಿಗೆ ಸೌಲಭ್ಯಗಳನ್ನು ಒದಗಿಸಲೆಂದೇ ಶ್ರೀ ರಾಯರ ಮತ್ತೊಂದು ಭಕ್ತಗಣ ಸಿದ್ಧವಿರುತ್ತೆ. ಎಲ್ಲರ ಬಟ್ಟೆ-ಬರೆ ಲಗೇಜ್ಗಳನ್ನು ಒಂದೆರಡು ವಾಹನಗಳಲ್ಲಿ ಇರಿಸಿಕೊಂಡು ದಾನಿಗಳ ನೆರವು ಪಡೆದು ಮಾರ್ಗದ ಮಧ್ಯೆ ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆಯ ಸೇವೆ ಮಾಡುತ್ತ ರಾಯರ ಕೃಪೆಗೆ ಪಾತ್ರರಾಗುತ್ತಾರೆ ಈ ಭಕ್ತರು. ಬಗೆ ಬಗೆಯ ತಿಂಡಿಗಳು, ಮನೆಯಲ್ಲಿಯೇ ಸವಿಯದ ಸವಿರುಚಿಯ ಭೋಜನ, ಕಾಲು ನೋವು ಅಂದರೆ ಸಾಕು ಎಣ್ಣೆ ಹಚ್ಚಿ ಮಸಾಜ್ ಮಾಡುವರು. ಕಾಲು ಒತ್ತಿ ಮಸಾಜ್ ಮಾಡುವಾಗ ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳನ್ನೇ ಕಾಣುವರು ಈ ಭಕ್ತರು. ಮಕರ ಸಂಕ್ರಮಣದಂದು ನದಿ ಸ್ನಾನದ ಮೂಲಕ ಶ್ರೀ ಗುರು ರಾಘವೇಂದ್ರಸ್ವಾಮಿಗಳ ದರ್ಶನ ಪಡೆದು ಮರಳುವರು.
“ನಾನೂ ಮೊದಲು ೨೦ ವರ್ಷಗಳಿಗೂ ಹೆಚ್ಚು ಕಾಲ ಪಾದಯಾತ್ರೆ ಮೂಲಕ ರಾಯರ ದರ್ಶನ ಪಡೆದಿದ್ದೇನೆ. ಸಧ್ಯ ಸೇವಾರ್ಥಿಯಾಗಿ ಕಳೆದ ೮ ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಪಾದಯಾತ್ರೆ ವೇಳೆ ಎಲ್ಲಿದ ಹುಮ್ಮಸ್ಸು, ಉತ್ಸಾಹ ಇರುತ್ತದೆ. ನಾವು ಭೂಲೋಕದಲ್ಲಿರುವ ಯಾವ ಅರಿವೂ ಇರುವದಿಲ್ಲ. ರಾಯರ ಲೀಲೆ ಅಪಾರ.”
– ಅಶೋಕ ವನಹಳ್ಳಿ
ಸೇವಾರ್ಥಿ
ವಾಹದ ಮೂಲಕ ರಾಯರದರ್ಶನಕ್ಕೂ ಪಾದಯಾತ್ರೆ ಮೂಲಕ ದರ್ಶನಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಪಾದಯಾತ್ರೆ ಅನುಭವ ಅದ್ಭುತ. ಅಂತರಂಗ ಮಾತ್ರವಲ್ಲದೇ ಶಾರೀರಿಕವಾಗಿಯೂ ಸಾಕಷ್ಟು ಬದಲಾವಣೆ ಕಾಣುತ್ತೇವೆ.”
– ರಾಮು ಪೂಜಾರಿ.
ಪಾದಯಾತ್ರಿ

