ಉದಯರಶ್ಮಿ ದಿನಪತ್ರಿಕೆ
ವರದಿ: ಡಾ.ಯಂಕನಗೌಡ ಎಸ್ ಪಾಟೀಲ
ಕೆಂಭಾವಿ: ಆಡಳಿತದಲ್ಲಿರುವ ಸರ್ಕಾರಗಳು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯ ನಿರಂತರವಾಗಿದ್ದರು, ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯದೇ ಅದೆಷ್ಟೋ ಕುಟುಂಬಗಳು ಇಂದಿಗೂ ರೋಟಿ, ಧೋತಿ, ಮಕಾನ್ ಇಲ್ಲದೆ ಬದುಕುತ್ತಿದ್ದಾರೆ. ಅಂತಹವರನ್ನು ಗುರುತಿಸುವ ಗುರುತರ ಜವಾಬ್ದಾರಿವುಳ್ಳ ಸರ್ಕಾರದ ಹತ್ತು ಹಲವು ಸಮಿತಿಗಳಲ್ಲಿ ಆಶ್ರಯ ಸಮಿತಿಯು ಕೂಡ ಒಂದಾಗಿದೆ. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನೂತನವಾಗಿ ಪದಗ್ರಹಣ ಮಾಡಿದ ಆಶ್ರಯ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂ ಪಕ್ಷಾತೀತವಾಗಿ, ಸಾಲು ಸಾಲು ಸನ್ಮಾನ, ಅಭಿನಂದನೆಗಳು, ಮಹಾಪೂರವೇ ಹರಿದುಬರುತ್ತಿರುವುದು ಆಶಾದಾಯಕ ಬೆಳವಣಿಗೆ.
ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಆಶ್ರಯ ಕಮಿಟಿಯ ನೂತನ ಅಧ್ಯಕ್ಷ ಶರಣಬಸವ ಕಾಕಾ ಡಿಗ್ಗಾವಿಯವರು ಅಧಿಕಾರಕ್ಕೆ ಆಸೆ ಪಟ್ಟವರಲ್ಲ, ಕಾಡಿಬೇಡಿ ಅಧಿಕಾರ ಪಡೆದವರಲ್ಲ, ಅದಕ್ಕಾಗಿ ಅವರನ್ನು ಯಾರೂ ಹೆಸರಿಟ್ಟು ಕರೆಯುವುದಿಲ್ಲ ಎಲ್ಲರೂ ಪ್ರೀತಿಯಿಂದ ‘ಕಾಕಾ’ ಎಂದು ಕರೆಯುತ್ತಾರೆ. ಹಾಗಾಗಿಯೇ ಡಿಗ್ಗಾವಿಯವರಿಗೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎನ್ನುತ್ತಾರೆ ಕೆಲವರು. ಈ ಹಿಂದೆ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಕಂಡು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಪುರವರ ಶಿಫಾರಸು ಮೇರೆಗೆ ರಾಜ್ಯ ಸರ್ಕಾರ ಆಶ್ರಯ ಕಮಿಟಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾರ್ಯಕರ್ತರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಹುರುಪು, ಉತ್ಸಾಹ, ಹುಮ್ಮಸ್ಸು, ನೂರ್ಮಡಿಯಾಗಿದ್ದು ನಿಜ. ಆಶ್ರಯ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರಗಳ ನೇಮಕಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಆಶ್ರಯ ಕಮಿಟಿ ಅಧ್ಯಕ್ಷರು ಮತ್ತು ಸದಸ್ಯರು ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ, ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಲಿ, ನಿರ್ಗತಿಕರಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ಆರ್ಥಿಕ ದುರ್ಬಲರಿಗೆ, ಮನೆಯಿಲ್ಲದವರನ್ನು ಗುರುತಿಸಿ ಗುಡಿಸಲು ಮುಕ್ತ ಪುರಸಭೆಗೆ ಮುನ್ನುಡಿ ಬರೆಯಲಿ, ವಿವಿಧ ವಸತಿ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹೆಚ್ಚುವರಿ ದೇವರಾಜ್ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆಯಡಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಕಾರ್ಯ ‘ಡಿಗ್ಗಾವಿ’ ಯವರಿಂದ ಕಾರ್ಯರೂಪಕ್ಕೆ ಬರಲಿ, ಮತಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಸಚಿವ ಶರಣಬಸಪ್ಪಗೌಡ ದರ್ಶನಪುರವರ ಮನವೊಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಆಶ್ರಯ ಕಮಿಟಿ ಕಾರ್ಯಪ್ರವೃತ್ತವಾಗಲಿ ಎಂಬುದೇ ಜನಾಭಿಪ್ರಾಯ.

