ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ಭಾಗದ ಸಾರ್ವಜನಿಕರ ಕನಸು ಕೊನೆಗೂ ನನಸಾಗುವ ಕಾಲ ಸನ್ನಿಹಿತವಾಗಿದೆ. ಇದೆ ದಿನಾಂಕ ೧೬.೦೧.೨೫ ಗುರುವಾರದಂದು ಸುಮಾರು ೫೦೦ ಕೋಟಿ ವೆಚ್ಚದ ಚಡಚಣ ಏತ ನೀರಾವರಿಯ ಪೈಪುಗಳಲ್ಲಿ ಪ್ರಾಯೋಗಿಕವಾಗಿ ಅಧಿಕಾರಿಗಳು ನೀರು ಹರಿಸಲಿದ್ದಾರೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
೨೦೧೩ ರಲ್ಲಿ ಎಂ ಬಿ ಪಾಟೀಲ ನೀರಾವರಿ ಮಂತ್ರಿಯಾಗಿದ್ದಾಗ ಚಡಚಣ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಕುಂಟುತ್ತ ಸಾಗಿದ್ದ ಕಾಮಗಾರಿ ಶಾಸಕ ವಿಠ್ಠಲ ಕಟಕಧೋಂಡ ಇವರ ವಿಶೇಷ ಆಸಕ್ತಿಯ ಫಲವಾಗಿ ಇಂದು ಪ್ರಾಯೋಗಿಕವಾಗಿ ಚಾಲನೆಗೊಳ್ಳುತ್ತಿರುವದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಭೀಮಾ ನದಿಗೆ ಬ್ರಹತ್ ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿ ನೀರನ್ನು ಸಂಗ್ರಹಿಸಿ ಪೈಪಗಳ ಮುಖಾಂತರ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಚಡಚಣ ತಾಲೂಕಿನ ಚಡಚಣ, ಹಾವಿನಾಳ,ಗೋಡಿಹಾಳ, ಹಾಲಹಳ್ಳಿ, ಬರಡೋಲ ಟೆಕ್ಕೆ, ಶಿರಾಡೋಣ, ರೇವತಗಾಂವ ಮತ್ತು ನೀವರಗಿ ಗ್ರಾಮಗಳ ಸುಮಾರು ೯೨೫೧ ಹೆಕ್ಟೆರ ಪ್ರದೇಶಗಳ ರೈತರ ಜಮೀನುಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಯುಕೆಪಿ ಎಸ್.ಇ ಮನೋಜಕುಮಾರ ಗಡಬಳ್ಳಿ, ಝಳಕಿ ಇಇ ಎಸ್.ಜಿ.ಅಂಗಡಿ, ರಾಂಪೂರ ಇಇ ಜಿ.ಎ ನಾಗರಾಳ, ಆಲಮೇಲ ಇಇ ಫರೂಕಿ, ಇಲಾಖೆಯ ಎಇಇ ಗಳು ಹಾಜರಿದ್ದರು.
ವಿಠ್ಠಲ್ ಕಟಕಧೋಂಡ ಶಾಸಕರು ಮಾತನಾಡಿ, ಚಡಚಣ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಾನು ಸಾಕಷ್ಟು ಶ್ರಮ ಪಟ್ಟಿದ್ದೆನೆ. ಅನೇಕರು ಈ ಯೋಜನೆ ಪ್ರಾರಂಭವಾಗುವದಿಲ್ಲ ಎಂಬ ಮಾತುಗಳನ್ನು ಹೇಳುತ್ತಿದ್ದರು. ಕೆಬಿಜೆಎನ್ಎಲ್ ಅಧಿಕಾರಿಗಳ ಸಹಕಾರದಿಂದ ೧೬ ರಂದು ಪ್ರಾಯೋಗಿಕವಾಗಿ ನೀರು ಹರಿಸಲಾಗುವದು. ಈ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಇವುಗಳನ್ನು ಬಗೆಹರಿಸಲಾಗುವದು. ರೈತರು ಸಹಕರಿಸಬೇಕು.
ಇದು ಪ್ರಾಯೋಗಿಕವಾಗಿರುವದರಿಂದ ಎಲ್ಲ ರೈತರು ಅಧಿಕಾರಿಗೊಂದಿಗೆ ಸಹಕರಿಸಬೇಕು. ನಾನು ಮುಂಬರುವ ದಿನಗಳಲ್ಲಿ ರೈತರ ಸಭೆಯನ್ನು ಕರೆದು ಅವರೊಂದಿಗೆ ಚರ್ಚಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯನ್ನು ನೀಡುತ್ತೆನೆ. ಈ ದಿಸೆಯಲ್ಲಿ ಎಲ್ಲ ಅಧಿಕಾರಿಗಳ ಸಭೆಯನ್ನು ನಾನು ನಡೆಸುತ್ತೆನೆ. ಮುಂಬರುವ ದಿನಗಳಲ್ಲಿ ಮುಖ್ಯ ಮಂತ್ರಿಗಳನ್ನು ಚಡಚಣಕ್ಕೆ ಕರೆಸಿ ಯೋಜನೆಯನ್ನು ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಅವರು ಇದೆ ಸಂದರ್ಭದಲ್ಲಿ ಹೇಳಿದರು.

