ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ ವತಿಯಿಂದ ಇದೇ ಜನವರಿ ೧೪ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಜ.೧೯ರಂದು ಮಹಾಯೋಗಿ ವೇಮನ ಜಯಂತಿ ಹಾಗೂ ಜ.೨೧ರಂದು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಜನವರಿ ೧೪ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಾಗೂ ಜ.೧೯ರಂದು ಜಯಂತಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಗಳನ್ನು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ನಗರದ ರಂಗಮಂದಿರ ದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ೧೦ ಘಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಮೆರವಣಿಗೆ ಆಯೋಜನೆ ಮಾಡಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ ಸಂಗೀತ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.
ಜಿಲ್ಲಾಡಳಿತದಿಂದ ಆಚರಿಸಲಾಗುವ ಈ ಎಲ್ಲ ಮಹನಿಯರ ಜಯಂತಿ ದಿನಗಳಂದು, ಜಯಂತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ, ಸಮರ್ಪಕ ವಿದ್ಯುತ್ ವ್ಯವಸ್ಥೆ, ವೇದಿಕೆ ಕಾರ್ಯಕ್ರಮದಲ್ಲಿ ಆಸನಗಳ ವ್ಯವಸ್ಥೆ, ಆಹ್ವಾನ ಪತ್ರಿಕೆ ಮುದ್ರಣ, ಶಿಷ್ಠಾಚಾರದಂತೆ ಜಯಂತಿಗಳಿಗೆ ಆಹ್ವಾನ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜ.೨೧ರಂದು ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ಬೆಳಿಗ್ಗೆ ೧೦.೦೦ಕ್ಕೆ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅತ್ಯಂತ ಸರಳ ಹಾಗೂ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿ.ಪಂ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಡಿ.ವೈ.ಎಸ್.ಪಿ ಬಸವರಾಜ ಎಲಿಗಾಗರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸಮಾಜದ ಮುಖಂಡರಾದ ವಿ.ಸಿ.ನಾಗಠಾಣ, ರಾಮು ಹೊಸಪೇಟೆ, ಕೆ.ವಾಯ್. ಆಲಕುಂಟೆ, ಅಡಿವೆಪ್ಪ ಸಾಲಗಲ್ಲ, ಮಾರುತಿ ಚವ್ಹಾಣ, ಬಸವರಾಜ ನೇಗಿನಾಳ, ಸುರೇಶ ಶಿಂಗೆ, ಎಚ್.ಆರ್. ಮಾಚಪ್ಪನವರ, ಕೆ.ಬಿ. ಪಾಟೀಲ್ ಸೋಮನಗೌಡ ಕಲ್ಲೂರ, ವಿದ್ಯಾವತಿ ಅಂಕಲಗಿ, ರಾಮು ಹೊಸಪೇಟೆ, ಎಚ್. ಆರ್. ಮಚಪ್ಪನವರ, ಕೆ.ಬಿ. ಪಾಟೀಲ, ಎಸ್.ಎಲ್.ಜೀರಗಾಳ, ಎ.ಎಚ್ ಮಲಘಾಣ,ಎಸ್.ಬಿ. ಹರನಾಳ, ಬಾಬುಗೌಡ ಬಿರಾದಾರ, ಭರತ ಕೋಳಿ, ದೇವೇಂದ್ರ ಮೇರೇಕರ್, ಭೀಮರಾಯ ಜಿಗಜಿಣಗಿ, ಗಿರೀಶ್ ಕುಲಕರ್ಣಿ, ಸಾಹೇಬಗೌಡ ಬಿರಾದಾರ, ಶಿವಾನಂದ ಅಂಬಿಗೇರ,ಪರಶುರಾಮ ಅಳಗುಂಡಗಿ, ಅಶೋಕ ಅಂಬಿಗೇರ, ಹನಮಂತ ನಾಯ್ಕೋಡಿ, ಗುರುನಾಥ ವಾಲಿಕಾರ, ಪ್ರವೀಣ ಗಣಿ, ಸಂತೋಷ ತಟಗಾರ, ಮಹಾದೇವ ಗದ್ಯಾಳ, ಇತರರು ಉಪಸ್ಥಿತರಿದ್ದರು.

