ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶತಮಾನೋತ್ಸವ ಕಂಡ ಇಲ್ಲಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಪ್ರತೀ ವರ್ಷ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡಮಾಡುತ್ತಿದ್ದ ಸಿದ್ಧೇಶ್ವರ ರತ್ನ ಪ್ರಶಸ್ತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದು, ಮುಂದಿನ ವರ್ಷದಿಂದ ಮತ್ತೆ ಈ ಪ್ರಶಸ್ತಿ ನೀಡಲು ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ವಿಷಯವಾಗಿ ರವಿವಾರ ಸಿದ್ಧೇಶ್ವರ ಕಲಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಗಿಂತ ಮುಂಚೆ ಪ್ರತೀ ವರ್ಷವೂ ಸಿದ್ಧೇಶ್ವರ ಸಂಸ್ಥೆಯಿಂದ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡುತ್ತ ಬರಲಾಗುತಿತ್ತು. ಈ ಹಿಂದೆ ಹಲವಾರು ಜನ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರಣಾಂತರದಿಂದ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಾಗಿದ್ದು, ಮುಂದಿನ ವರ್ಷದಿಂದ ಮತ್ತೆ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡಲಾಗುವುದು ಎಂದರು.
ಈ ಹಿಂದೆ ಸಿದ್ಧೇಶ್ವರ ರತ್ನ ಪ್ರಶಸ್ತಿಯ ಜತೆಗೆ 25 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುತ್ತಿತ್ತು. ಮುಂದಿನ ವರ್ಷದಿಂದ ಪ್ರಶಸ್ತಿಯ ನಗದು ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಅವರು ಘೋಷಿಸಿದರು.
ಸಿದ್ಧೇಶ್ವರ ಸಂಸ್ಥೆಯು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸಂಸ್ಥೆಯ ಅಡಿಯಲ್ಲಿ ಶ್ರೀ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ, ಸಂಗನಬಸವ ಶಿಶುನಿಕೇತನ, ಶ್ರೀ ನೀಲಕಂಠೇಶ್ವರ ವಿದ್ಯಾಮಂದಿರ, ಎಸ್ ಸಿ ಉಪ್ಪಿನ ವಾಣಿಜ್ಯ ಮಹಾವಿದ್ಯಾಲಯ, ಅಟಲ್ ಬಿಹಾರಿ ವಾಜಪೇಯಿ ಶಿಶುನಿಕೇತನ ಶಾಲೆ ಈ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಜಿ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆ, ಶ್ರೀ ಈಶ್ವರಗೌಡ ರಾ. ಪಾಟೀಲ (ಯತ್ನಾಳ) ಡಯಾಲಿಸಿಸ್ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಕಗ್ಗೋಡ ಗ್ರಾಮದಲ್ಲಿ ಶ್ರೀ ರಾಮನಗೌಡ ಬಾ. ಪಾಟೀಲ ಯತ್ನಾಳ) ಇವರ ಹೆಸರಿನಲ್ಲಿ ಗೋರಕ್ಷಾ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಇಷ್ಟೊಂದು ದೊಡ್ಡ ಪ್ರಮಾಣದ ಗೋಶಾಲೆ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಯಾವ ಮಠ ಮಾನ್ಯಗಳಲ್ಲಿಯೂ ಇಲ್ಲ. ಗೋಶಾಲೆಯಲ್ಲಿ
ಗೋವಿನ ಸೆಗಣಿಯಿಂದ ಶುಚಿರ್ಭೂತ ವಿಭೂತಿ, ಗೋಮೂತ್ರ, ತುಪ್ಪ, ಮೊಸರು, ಮಜ್ಜಿಗೆ, ಏರಿಹುಳಗೊಬ್ಬರ, ದಂತ ಮಂಜನ, ಬಟ್ಟೆ ತೊಳೆಯುವ ಸಾಬುನು, ಮೈಯಿಗೆ ಹಚ್ಚುವ ಸಾಬುನು, ಪಿನಾಯಿಲ್, ಸಾವಯವ ಬೆಲ್ಲ, ಊದಿನ ಕಡ್ಡಿ ಹಾಗೂ ಇನ್ನೂ ಹಲವಾರು ಸಗಣಿಯ ಉಪಸಾಮಗ್ರಿಗಳನ್ನು ತಯಾರಿಸಲಾಗುತ್ತಿದೆ. ಪೇರಲ, ಸಿತಾಫಲ, ಚಿಕ್ಕು, ಬಾಳೆಹಣ್ಣು ಸೇರಿದಂತೆ ಇನ್ನಿತರ ಹಣ್ಣು ಹಂಪಲುಗಳನ್ನು ಬೆಳೆಯಲಾಗುತ್ತಿದೆ. ಬೆಳೆದ ಹಣ್ಣನ್ನು ಹಾಗೂ ಇತರ ಉಪಸಾಮಗ್ರಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲುನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ ಒಂದು ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದೆ.
ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ಶ್ರೀ ಸಿದ್ಧೇಶ್ವರ ಫೌಂಡೇಶನ ಸ್ಥಾಪಿಸಿದ್ದು, ಅದರಡಿಯಲ್ಲಿ ಶ್ರೀ ಬಂಥನಾಳೇಶ ಶಿಕ್ಷಾ ಸುರಕ್ಷಾ ಯೋಜನೆ, ಶ್ರೀ ಸಿದ್ಧೇಶ್ವರ ಸ್ವಾಸ್ಥ್ಯ ಸಹಾಯ ಯೋಜನೆ, ಡಾ. ಫ.ಗು.ಹಳಕಟ್ಟಿ ಕನ್ನಡ ಸಾಹಿತ್ಯ ಸಂಸ್ಕೃತಿ ಮನೆಕಟ್ಟಿ ಯೋಜನೆ,
ಶ್ರೀ ಅಟಲ್ ಆಸರೆ ಯೋಜನೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಶ್ರೀ ಸಿದ್ಧೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿಂದ ಒಂದು ವೈದ್ಯಕೀಯ ಹಾಗೂ ಆಯುರ್ವೇದ ಕಾಲೇಜನ್ನು ಕೂಡ ವಿಜಯಪುರದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಶಾಸಕ ಯತ್ನಾಳ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಗೌರವ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ(ಹಂದಿಗನೂರ), ಬಸವರಾಜ ಸೂಗುರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ,ವಿಯಕುಮಾರ ಡೋಣಿ, ಬಸವರಾಜ ಗಣಿ, ಎಸ್.ಎಚ್.ನಾಡಗೌಡ, ನಾಗಪ್ಪ ಗುಗ್ಗರಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಸಿದ್ಧೇಶ್ವರ ಜಾತ್ರೆಯ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗುರುಪಾದಯ್ಯ ಗಚ್ಚಿನಮಠ, ಸದಾಶಿವ ಗುಡ್ಡೋಡಗಿ, ಎಂ.ಎಸ್.ಕರಡಿ,ಸಾಯಬಣ್ಣಾ ಭೋವಿ, ಪ್ರಭು ಗೊಬ್ಬೂರ, ಡಾ.ಸುನೀಲ ಉಕುಮನಾಳ, ಶರಣಪ್ಪ ದುಂಡಿ, ಸುಧೀರ ಪರದಣ್ಣವರ, ಮುರಗಯ್ಯ ಗಚ್ಚಿನಮಠ, ಶರಣಯ್ಯ ಗೊಳಸಂಗಿಮಠ,ಚಂದ್ರು ಕುರೆಣ್ಣವರ, ಡಾ. ಸೋಮಶೇಖರ ವಾಲಿ, ಮಹಾದೇವ ಜಂಗಮಶೆಟ್ಟಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ಪಾಟೀಲ (ಚಿಮ್ಮಲಗಿ), ಎಸ್.ಎಸ್
ಗೊಳಸಂಗಿಮಠ, ಎಂ.ಎಸ್. ರುದ್ರಗೌಡರ, ಸುಭಾಸ್ ಮರನೂರ ಮುಂತಾದವರು ಉಪಸ್ಥಿತರಿದ್ದರು.

