ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ನೇತೃತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವವು ಇದೇ ದಿ. 11 ರಿಂದ 17 ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಮಕರ ಸಂಕ್ರಮಣದ ನಿಮಿತ್ಯ ಶ್ರದ್ಧಾ-ಭಕ್ತಿ ಹಾಗೂ ಮನರಂಜನೆಗಳೊಂದಿಗೆ ಒಂದು ವಾರ ಕಾಲ ನಡೆಯುವ ಈ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ ಸಾಲಂಕೃತ ನಂದಿಧ್ವಜಗಳ ಮೆರವಣಿಗೆ ಹಾಗೂ ಮದ್ದು ಸುಡುವುದು. ಈ ಬಾರಿ ಮದ್ದು ಸುಡುವ ಕಾರ್ಯಕ್ರಮ ಅಂಬೇಡ್ಕರ ಸ್ಟೇಡಿಯಂ ಬದಲಾಗಿ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದುಗಡೆ ನಡೆಯಲಿದೆ.
ರವಿವಾರ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರಾದ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಚೇರಮನ್ ಬಸಯ್ಯ ಹಿರೇಮಠ ಅವರು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಸಿದ್ಧೇಶ್ವರ ಜಾತ್ರೆಯ ಕಾರ್ಯಕ್ರಮಗಳ ವಿವರಣೆ ನೀಡಿದರು.
ದಿ.11 ರಂದು ಸಂಜೆ 6ಕ್ಕೆ ನಂದಿಧ್ವಜಗಳ ಪೂಜೆ ಹಾಗೂ ಗೋಮಾತೆಯ ಮೆರವಣಿಗೆಯೊಂದಿಗೆ ಜಾತ್ರೆ ಪ್ರಾರಂಭವಾಗುವುದು. ಸಿದ್ಧೇಶ್ವರ ದೇವಸ್ಥಾನದಿಂದ ನಂದಿ ಧ್ವಜಗಳು ಹಾಗೂ ಗೋಮಾತೆಯ ಮೆರವಣಿಗೆ ಹೊರಟು ಅಟಲ್ ಬಿಹಾರಿ ವಾಜಪೇಯಿ ರಸ್ತೆಯ ಚತುರ್ಮುಖ ಗಣಪತಿ ದೇವಾಲಯ ತಲುಪುವುದು. ನಂತರ ಅಲ್ಲಿ ಚತುರ್ಮುಖ ಗಣಪತಿಗೆ ಪಂಚಾಮೃತ ಅಭಿಷೇಕ ಮಾಡಿ ಪ್ರಸಾದದ ನಂತರ ಮರಳಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಬರಲಾಗುವುದು.
ದಿ.12 ರಂದು ಮಧ್ಯಾಹ್ನ 12ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಲಿಂಗದ ಗುಡಿಯವರೆಗೆ ನಂದಿಧ್ವಜಗಳ ಉತ್ಸವ ನಡೆಯುವುದು. ನಂತರ ಲಿಂಗದ ಗುಡಿಯಲ್ಲಿ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ಮಾಡಿಸಿ ಮರಳಿ ದೇವಸ್ಥಾನಕ್ಕೆ ಬರುವುದು. ದಿ.೧೩ ರಂದು ಅಕ್ಷತಾರ್ಪಣೆ- ಭೋಗಿ ಕಾರ್ಯಕ್ರಮ ನಡೆಯುವುದು. ಅಂದು ಮಧ್ಯಾಹ್ನ 12.30ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಚರಿತ್ರೆ ಓದುವುದು. ನಂತರ ಶ್ರೀ ಸಿದ್ಧೇಶ್ವರ ಯೋಗದಂಡಕ್ಕೆ ಅಕ್ಷತೆ ಕಾರ್ಯಕ್ರಮ, ನಂದಿಧ್ವಜಗಳ ಉತ್ದವ ನಡೆಯುವುದು. ದಿ.14 ರಂದು ಮಧ್ಯಾಹ್ನ 12.30ಕ್ಕೆ ಸಂಕ್ರಮಣ ಆಚರಣೆ, ಸಿದ್ಧೇಶ್ವರ ದೇವಸ್ಥಾನ ಮುಂದುಗಡೆ ಹೋಮ ಹವನ, ನಂತರ ಪಲ್ಲಕ್ಕಿಯೊಂದಿಗೆ ನಂದಿಧ್ವಜಗಳ ಉತ್ಸವ ನಡೆಯುವುದು.
ದಿ.15 ರಂದು ಮಧ್ಯಾಹ್ನ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಭವ್ಯ ಮೆರವಣಿಗೆ, ರಾತ್ರಿ ೮ ಗಂಟೆಗೆ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದುಗಡೆ ಸಾಂಕೇತಿಕವಾಗಿ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯುವುದು. 16 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ, ದಿ.17 ರಂದು ಮಧ್ಯಾಹ್ನ 3ಕ್ಕೆ ಎಸ್.ಎಸ್.ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯುವುದು. ಈ ಜಾತ್ರೆಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಮನರಂಜನೆ ಕಾರ್ಯಕ್ರಮಗಳು ಜರುಗುವವು. ಸಿದ್ಧೇಶ್ವರ ಜಾತ್ರೆಯೊಟ್ಟಿಗೆ ತೊರವಿ ಬಳಿ ಶ್ರೀ ಸಿದ್ಧೇಶ್ವರ ಜಾನುವಾರು ಜಾತ್ರೆಯೂ ದೊಡ್ಡ ಪ್ರಮಾಣದಲ್ಲಿ ನೆರವೇರಲಿದೆ.
ಕನ್ನಡನಾಡಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುವ ಅಂದದ ಚಂದದ ಶ್ರೀ ಸಿದ್ಧೇಶ್ವರ ಸಂಮಕ್ರಮಣ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವಯೋಗಿ ಸಿದ್ಧೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಗೌರವ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ(ಹಂದಿಗನೂರ), ಬಸವರಾಜ ಸೂಗುರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ಎಸ್.ಎಚ್.ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ರಮೇಶ ಹಳ್ಳದ ಸೇರಿದಂತೆ ಸಿದ್ಧೇಶ್ವರ ಜಾತ್ರೆಯ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
