ಡಾ.ಬಿ.ಆರ್. ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸೇನೆ ತಾಲೂಕ ಸಮಿತಿ ಬಬಲೇಶ್ವರ ವತಿಯಿಂದ ತಹಶೀಲ್ದಾರ ಬಬಲೇಶ್ವರ ರವರ ಮುಖಾಂತರ ಘನವೆತ್ತ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಇತ್ತೀಚಿಗೆ ಸಂಸತ್ ಅಧಿವೇಶನದಲ್ಲಿ ಗೃಹ ಸಚಿವರಾದ ಅಮಿತ್ ಶಾ ರವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರವರ ಬಗ್ಗೆ ಹಗುರವಾಗಿ ಹಾಗೂ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದು ದೇಶದ ದಲಿತರು , ಶೋಷಿತರು ಹಾಗೂ ಎಲ್ಲಾ ನ್ಯಾಯಪ್ರಿಯ ಪ್ರಜೆಯ ಹೃದಯವನ್ನು ತೀವ್ರವಾಗಿ ನೋಯಿಸಿರುವ ಘಟನೆಯಾಗಿದೆ. ಅಂಬೇಡ್ಕರವರು ಇಡೀ ದೇಶದ ಪ್ರಜಾಪ್ರಭುತ್ವದ ಬುನಾದಿಯಾಗಿದ್ದಾರೆ. ಅವರು ಈ ದೇಶದಲ್ಲಿ ಸಮಾನತೆ ಭ್ರಾತೃತ್ವ ಮತ್ತು ನ್ಯಾಯದ ತತ್ವಗಳನ್ನು ಸ್ಥಾಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ದಲಿತರು, ಧಮನೀತರು, ಮಹಿಳೆಯರು ಮತ್ತು ಎಲ್ಲಾ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ. ಅಂಬೇಡ್ಕರ ಅವರು ನಮಗೆ ಕೇವಲ ನಾಯಕನಷ್ಟೇ ಅಲ್ಲ, ಬಡವರ, ದಲಿತರ ಹಾಗೂ ಶೋಷಿತರ ಪಾಲಿಗೆ ದೇವರಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಅಮಿತ್ ಶಾ ಅವರು ಹಗುರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಮಾತ್ರವಲ್ಲ. ಅವು ನಮ್ಮ ಸಂವಿಧಾನದ ಅಧ್ಯಾತ್ಮಿಕತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ. ದಲಿತರು ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಈ ಹೇಳಿಕೆಯಿಂದ ಹಾನಿಯಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣವೇ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಅಮಿತ್ ಶಾ ರವರು ದೇಶದ ಜನತೆಯಲ್ಲಿ ಬಹಿರವಾಗಿ ಕ್ಷಮೆಯಾಚಿಸಬೇಕು. ಭಾವನಾತ್ಮಕವಾಗಿ ಹಾನಿಯಾಗುವಂತಹ ಹೇಳಿಕೆಗಳನ್ನು ತಡೆಯಲು ಸರಕಾರ ಕಠಿಣ ನಿಯಮಾವಳಿ ತರಬೇಕು. ಪ್ರಜಾಪ್ರಭುತ್ವದ ನಾಯಕರು ನಮ್ಮ ಸಂವಿಧಾನ ಮತ್ತು ರಾಷ್ಟ್ರೀಯ ನಾಯಕರ ಸನ್ಮಾನವನ್ನು ಕಾಪಾಡುವಂತೆ ಕಾನೂನು ತರಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷರಾದ ಖಾಜು ಹೊಸಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಕ್ಬರ ಗೋಕಾಂವಿ, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಂಕರ ಇಮ್ಮನದ, ಬಬಲೇಶ್ವರ ತಾಲೂಕ ಅಧ್ಯಕ್ಷರಾದ ಭೀಮರಾಯ ಗವಾರಿ, ಜಿಲ್ಲಾ ಉಪಾಧ್ಯಕ್ಷ ವಿನೋದ ಡಿ. ಬನಸೋಡೆ, ಸುಭಾಸ ತಳವಾರ, ಚರಣ ಗವಾರಿ, ಈಶ್ವರ ಗವಾರಿ, ಆಕಾಶ ಹಾದಿಮನಿ, ಚೇತನ ರೂಡಗಿ, ಎಸ್.ಡಿ. ಬೇನೂರ, ಮಾಂತೇಶ ಹರಿಜನ, ಎಸ್.ಸಿ. ಹರಿಜನ, ಸಿ.ಜಿ.ಸಿಂಗೆ, ಸಂಗಮೇಶ ಎಸ್., ಆಕಾಶ ಹರಿಜನ, ವಿಶಾಲ ಕಾಂಬಳೆ ಇನ್ನಿತರರು ಇದ್ದರು.

