ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮ ಲೋಕದ ಸಿರಿಯಾಗಿದ್ದಾರೆ. ಇವರು ನೀಡಿರುವ ಸಂದೇಶಗಳು ಎಂದಿಗೂ ಸ್ಮರಣೀಯವಾಗಿವೆ. ಇವುಗಳನ್ನು ನಾವೆಲ್ಲರೂ ಅಂತರಂಗದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸನ್ಮಾರ್ಗದಲ್ಲಿ ನಡೆಯೋಣವೆಂದು ರೋಣಿಹಾಳ ಗ್ರಾಮದ ಪ್ರಗತಿಪರ ರೈತ ಶ್ರೀಶೈಲ ಬಿರಾದಾರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶಿವಲಿಂಗೇಶ್ವರ ವಿರಕ್ತಮಠದ ಶರಣ ಬಳಗ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹಯೋಗದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನ ಕಾರ್ಯಕ್ರಮದಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಂತರಂಗದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನನಿಧಿಯಾಗಿದ್ದರು. ಅವರು ತಮ್ಮ ಪ್ರವಚನದಲ್ಲಿ ಜೀವನ ಮೌಲ್ಯ,ಸಾವಯವ ಕೃಷಿ, ಶರಣರ ಸಂದೇಶ ಸೇರಿದಂತೆ ತತ್ವಶಾಸದಲ್ಲಿರುವ ಸಾರವನ್ನು ನಮಗೆ ಉಣಬಡಿಸಿದ್ದಾರೆ. ೧೨ ನೇ ಶತಮಾನದಲ್ಲಿ ಶರಣರ ಬಸವ ಕಲ್ಯಾಣ ಕೈಲಾಸವಾಗಿತ್ತು. ಇಂದು ೨೧ ನೇ ಶತಮಾನದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಇದ್ದ ವಿಜಯಪುರದ ಜ್ಞಾನಯೋಗಾಶ್ರಮವು ಕೈಲಾಸವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಪೂಜ್ಯರನ್ನು ಪಡೆದುಕೊಂಡು ಈ ನಾಡು ಧನ್ಯವಾಗಿದೆ. ಇವರು ನೀಡಿರುವ ಸಂದೇಶಗಳನ್ನು ನಾವೆಲ್ಲರೂ ಅರಿತುಕೊಂಡು ಪ್ರೀತಿ,ಸಹಬಾಳ್ವೆಯಿಂದ ನಾವೆಲ್ಲರೂ ಇರೋಣವೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಸಿದ್ದೇಶ್ವರ ಸ್ವಾಮೀಜಿಯವರ ಅಂತರಂಗವನ್ನು ಹೊಕ್ಕು ನೋಡಿದಾಗ ಅವರ ಕಾಯಕ ಪ್ರಜ್ಞೆ ನಾವು ಅರಿಯಬಹುದು. ಅವರು ಪ್ರವಚನ ಕಾಯಕ ಮಾಡದೇ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ ಎಂಬುವದು ಅವರು ಕನ್ಹೇರಿ ಮಠದಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಮಗೆ ಗೊತ್ತಾಯಿತು ಎಂದು ಸ್ಮರಿಸಿಕೊಂಡರು. ಸಿದ್ದೇಶ್ವರ ಸ್ವಾಮೀಜಿಯವರಿಂದ ನಾವೆಲ್ಲರೂ ಕಲಿಯುವದು ಬಹಳವಿದೆ. ಅವರ ನಡೆ-ನುಡಿಯನ್ನು ಅಂತರಂಗದಿಂದ ನೋಡಬೇಕಿದೆ. ಅವರು ಸಮಯ ಕೊಡುತ್ತಿರಲಿಲ್ಲ. ಸಮಯ ತೆಗೆದುಕೊಳ್ಳುತ್ತಿದ್ದರು. ಅವರು ನೀಡಿದ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿರುವದನ್ನು ನಾವು ಕಾಣುತ್ತೇವೆ. ಇಂತಹ ಶ್ರೀಗಳ ಸಂದೇಶ ಅರಿತು ನಾವೆಲ್ಲರೂ ಮುನ್ನಡೆಯಬೇಕಿದೆ ಎಂದರು.
ಅಂತರಂಗದ ಅರಿವು ಕಾರ್ಯಕ್ರಮದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಪ್ರಭಾಕರ ಖೇಡದ, ಸುಮಂಗಲಾ ಮಠಪತಿ, ಶಾಂತಾ ಚೌರಿ, ತಾರಾಮತಿ ಹೂಗಾರ, ಅನಿಲ ಬಿರಾದಾರ,ವಿರೇಶ ಗೂಡ್ಲಮನಿ, ಗಂಗಾಧರ ಪಾರಶೆಟ್ಟಿ, ಪ್ರೊ.ಸುಭಾಸ, ಶಿವಕುಮಾರ ಶಿವಶಿಂಪಿ, ದ್ರಾಕ್ಷಾಯಿಣಿ ಬಾಗೇವಾಡಿ ಸೇರಿದಂತೆ ೧೫ ಕ್ಕೂ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ವೇದಿಕೆಯಲ್ಲಿ ಮುಖಂಡ ರವಿಗೌಡ ಚಿಕ್ಕೊಂಡ, ತಾಲೂಕು ಜನಪದ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ, ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಹೂಗಾರ ಇದ್ದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಕೊಟ್ರೇಶ ಹೆಗ್ಡಾಳ ಸ್ವಾಗತಿಸಿದರು. ಬಸವರಾಜ ಹಂಚಲಿ, ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಬಿ.ವ್ಹಿ.ಚಕ್ರಮನಿ ವಂದಿಸಿದರು.
ಇದೇ ಸಂದರ್ಭದಲ್ಲಿ ಚಿನ್ಮಯಿ ಹೆಗ್ಡಾಳ, ಸುಪ್ರೀತ ಹದಿಮೂರ ಚಿಣ್ಣರ ಹುಟ್ಟುಹಬ್ಬವನ್ನು ಆಚರಿಸಲಾಯಿತು

