ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕ್ಯಾಂಪಸ್ ಗುರುವಾರ ಸಂಪೂರ್ಣ ರಂಗು ರಂಗಾಗಿತ್ತು.
ಹೊಸ ವರ್ಷವನ್ನು ಅನೇಕರು ಸಿಳ್ಳೆ ಚಪ್ಪಾಳೆ ಹೊಡೆದು, ಕೇಕ್ ಕಟ್ ಮಾಡಿ ಆಚರಿಸುತ್ತಾರೆ,ಆದರೆ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಾತಾವರಣ ಸಂಪೂರ್ಣ ಇದಕ್ಕೆ ತದ್ವಿರುದ್ದವಾಗಿತ್ತು. ಎಲ್ಲಿ ನೋಡಿದರಲ್ಲಿ ಇಲಕಲ್ ಸೀರೆ, ಹಸಿರು ಬಳೆ, ಮುಡಿತುಂಬ ಮಲ್ಲಿಗೆ ಹೂ, ಕೈತುಂಬ ಹಸಿರು ಬಳೆ ಧರಿಸಿದ ವಿದ್ಯಾರ್ಥಿನಿಯರು ಮತ್ತು ಧೋತಿ, ಪಂಚೆ, ಶೆಲ್ಲೆ ಧರಿಸಿದ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.
ಹೌದು, ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತೀಯ ಉಡಿಗೆ-ತೊಡಿಗೆ, ನಮ್ಮ ಆಹಾರ ಪದ್ದತಿ ಮತ್ತು ನಮ್ಮ ಸಂಸ್ಕೃತಿಯ ಭಾಗವಾದ ಬೈಲಾಟ, ಕೋಲಾಟ, ಡೊಳ್ಳು ಕುಣಿತ, ತತ್ವಪದ, ಭರತನಾಟ್ಯ, ಬಿಸು ಕಲ್ಲಿನ ಹಾಡು, ಕುಟ್ಟು ವಾಗಿನ ಹಾಡು, ಜೋಕುಮಾರನ ಹಾಡು, ಸೀಮಂತದ ಹಾಡು, ಅರಿಸಿಣ ಹಚ್ಚುವಾಗಿನ ಹಾಡು, ಮೈನೆರೆದಾಗ ಹಾಡುವ ಹಾಡು ಸೇರಿದಂತೆ ಎಲ ರೀತಿಯಲ್ಲಿ ಹಳ್ಳಿಯ ಸಂಸ್ಕೃತಿಯನ್ನು ಬಿಂಬಿಸಿ ಸಾರ್ವಜನಿಕರ ಮನಸೋರೆಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಂಕಚಿ ಈ ರೀತಿಯ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್. ಗಿಡವೀರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ನಿರ್ದೇಶಕರಾದ ಸಂಗಮೇಶ ಅವಜಿ, ಅಶೋಕ ಕುಲಕರ್ಣಿ, ನಾಗಮ್ಮ ಅಂಕದ, ನಿವೃತ್ತ ಉಪನ್ಯಾಸಕ ಆರ್.ಪಿ ಬಗಲಿ, ಜಾನಪದ ಅಕ್ಯಾಡಮಿಯ ತಾಲೂಕ ಅಧ್ಯಕ್ಷ ಶಿವನಗೌಡ ಬಿರಾದಾರ, ನಿವೃತ್ತ ಪ್ರಾಚಾರ್ಯ ಎಸ್.ಜಿ ಜಂಗಮಶೆಟ್ಟಿ, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್.ಚೋರಗಿ, ಸ್ಮೀತಾ ಪಾವಲೆ, ಎಸ್.ಕೆ.ಕುಲಕರ್ಣಿ, ಆಗಮಿಸಿದ್ದರು, ಪ್ರಾಚಾರ್ಯ ಮನೋಜ ಕಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರೀಶೈಲ ಕಾಮಗೊಂಡ ಸೇರಿದಂತೆ ವಿವಿದ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

