ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಗದ ಆದಿ, ಮೂಲವನ್ನು ಆಧ್ಯಾತ್ಮಿಕ, ವೈಚಾರಿಕ ತಳಹದಿಯ ಮೇಲೆ ತಿಳಿಸುವ ವಿಧಾನಗಳೇ ಪುರಾಣ, ಪ್ರವಚನ ಸತ್ಸಂಗಗಳೇನಿಸುತ್ತವೆ ಎಂದು ಎಮ್ಮಿಗನೂರ ಹಂಪಿಸಾವಿರದೇವರ ಮಠದ ವಾಮದೇವಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೨ ನೇ ವರ್ಷದ ಕಾರ್ತೀಕೋತ್ಸವ ಅಂಗವಾಗಿ ಮಂಗಳವಾರ ಆರಂಭಗೊಂಡ ಮಹಾದಾಸೋಹಿ ಕಲಬುರ್ಗಿ ಶ್ರೀಶರಣಬಸವೇಶ್ವರ ಮಹಾಪುರಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗದ ಉದಯಕ್ಕೆ ಕಾರಣರಾದ ದೇವರನ್ನು ಪರಿಚಯಿಸುವ ಜ್ಞಾನವೇ ಆಧ್ಯಾತ್ಮ. ನಮಗೆ ಭೂಮಿ, ನೀರು, ಬೆಂಕಿ, ವಾಯು, ಆಕಾಶಗಳ ಪರಿಚಯವಿದೆ. ಆದರೆ ನಮಗೆ ಸೃಷ್ಟಿಕರ್ತ ಭಗವಂತನ ನೇರ ಪರಿಚಯವೇ ಇಲ್ಲ. ಇಂದಿಗೂ ಸೃಷ್ಟಿಕರ್ತ ಭಗವಂತ ಅಪರಿಚಿತನೇ ಆಗಿದ್ದು, ಇವನನ್ನು ಕಾಣುವ ವಿವಿಧ ವಿಧಾನಗಳನ್ನು ತಿಳಿಸುವ ಅಪರಿಮಿತ, ಅಗಾಧ, ಅನಂತ ಜ್ಞಾನದ ವಿಚಾರಗಳೇ ಪುರಾಣ, ಪ್ರವಚನಗಳಾಗಿವೆ ಎಂದರು.
ಬಸವನಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಪ್ರವಚನಕಾರರಾಗಿ ಆಗಮಿಸಿ, ಪುರಾಣ, ಪ್ರವಚನ, ಸತ್ಸಂಗಗಳು ಭಾರತೀಯ ಸಂಸ್ಕೃತಿ ಹಾಗೂ ನಮ್ಮೇಲ್ಲಾ ಧಾರ್ಮಿಕ ಆಚರಣೆಗಳ ಅಡಿಪಾಯಗಳಾಗಿವೆ ಎಂದು ನುಡಿದರು.
ಸಗರದ ಮರುಳ ಮಹಾಂತಶ್ರೀಗಳು ಆಶೀರ್ವಚನ ನೀಡಿದರು. ಹಾಗೂ ಸ್ಥಳೀಯ ಸದಯ್ಯನಮಠದ ವೀರಗಂಗಾಧರಶ್ರೀಗಳು ಸಾನಿಧ್ಯ ವಹಿಸಿದ್ದರು.
ವೀರಭದ್ರೇಶ್ವರ ಕಾರ್ತಿಕೋತ್ಸವ ಸೇವಾಸಮಿತಿಯ ಅಧ್ಯಕ್ಷ ಸಿ.ಕೆ.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಶರಣಕುಮಾರ ಯಾಳಗಿ, ತಬಲಾವಾದಕ ನಾಗರಾಜ ಹುಣಸಿಗಿಡದ (ಶಹಾಪೂರ) ಸಂಗೀತ ಸೇವೆ ನೀಡಿದರು.
ಪಂಚಾಕ್ಷರಿ ಮಿಂಚನಾಳ, ಪ್ರಭುದೇವ ಹಿರೇಮಠ, ಮಡಿವಾಳಪ್ಪ ಮಣೂರ, ಸೋಮಶೇಖರ ಹಿರೇಮಠ, ಯಲಗೂರೇಶ ದೇವೂರ, ಸಂಗನಗೌಡ ಪಾಟೀಲ, ರಮೇಶ ಮಶಾನವರ, ರವಿ ಯಾಳಗಿ, ನಿಂಬೆಣಪ್ಪ ಧುತ್ತರಗಾಂವಿ, ವಿನೋದ ನಾಶಿಮಠ, ಶ್ರೀಶೈಲ ಯಾಳಗಿ, ಆನಂದ ಜಡಿಮಠ, ಪ್ರಕಾಶ ಮಾಳನೂರ, ಶ್ರೀಶೈಲ ದೇಸಾಯಿ, ದಾನು ಯರನಾಳ, ತೇಜಪ್ಪ ಕಕ್ಕಳಮೇಲಿ, ಶ್ರೀಶೈಲ ಮಲ್ಲಿಕಾರ್ಜುನಮಠ, ಮಹಾರುದ್ರ ಕಕ್ಕಳಮೇಲಿ, ಸಂಗಪ್ಪ ಮಣೂರ, ಜಗದೇವಪ್ಪ ಬಿರಾದಾರ, ವೀರೇಶ ಕುದರಿ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

