ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊ. ಪಾಟೀಲ್ ವಿರುದ್ಧ ಅವಿಶ್ವಾಸ ನಿರ್ಣಯ ಯಶಸ್ವಿ
ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿದ್ದ ಕೆಂಭಾವಿ ಪಟ್ಟಣ ಪುರಸಭೆಯ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಂಡಿದೆ.
ಆಡಳಿತಾರೂಢ ಕಾಂಗ್ರೆಸ್ನ ಬಂಡಾಯದ ಅಲೆಯಲ್ಲಿ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಯಾದಗಿರಿ ಉಪ ವಿಭಾಗಾಧಿಕಾರಿ ಶ್ರೀಧರ ಗೋಟೂರ್ ರವರ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯವು ಭಾರಿ ಬಹುಮತದೊಂದಿಗೆ ಅಂಗೀಕಾರಗೊಂಡಿತು.
ಸಭೆಗೆ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರನ್ನೊಳಗೊಂಡಂತೆ ಒಟ್ಟು 20 ಸದಸ್ಯರು ಹಾಜರಿದ್ದರು. ಅವಿಶ್ವಾಸ ಗೊತ್ತುವಳಿ ಸೂಚನೆಯಂತೆ 18 ಮತಗಳು ಹಾಲಿ ಅಧ್ಯಕ್ಷರ ವಿರುದ್ಧ ಬಿದ್ದರೆ, ಒಂದು ತಟಸ್ಥ ಮತ್ತು ಒಂದು ಮತ ಅಧ್ಯಕ್ಷರ ಪರವಾಗಿ ಚಲಾವಣೆಯಾಯಿತು. ಪುರಸಭೆ ಕಾಯ್ದೆ 1964, ಕಲಂ 42(9) ರಂತೆ ಮೂರನೇ ಎರಡು ಭಾಗದಷ್ಟು ಬಹುಮತದೊಂದಿಗೆ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊ.ಪಾಟೀಲ್ ತಮ್ಮ ಸ್ಥಾನವನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಸುರಪುರ ತಹಸೀಲ್ದಾರ್ ಎ ಎಸ್ ಸರ್ಕಾವಸ್, ಪುರಸಭೆ ಮುಖ್ಯ ಅಧಿಕಾರಿ ಪ್ರಕಾಶ್ ಬಾಗ್ಲಿ, ಪುರಸಭೆ ಸದಸ್ಯರು, ಕಂದಾಯ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು. ಪೊಲೀಸರು ಬಿಗಿ ಬಂದೋಬಸ್ತ ಕಲ್ಪಿಸಿದ್ದರು.
ಇದರೊಂದಿಗೆ ಕೆಂಭಾವಿ ಪುರಸಭೆಯ ಹೈಡ್ರಾಮಾಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದ್ದು, ಮುಂದಿನ ಅವಧಿಗೆ ಅಧ್ಯಕ್ಷ ಗಾದಿ ಹಿಡಿಯಲು ಕಾಂಗ್ರೆಸ್ ಪಾಳೆಯದಲ್ಲಿ ವರಿಷ್ಠರ ಸೂಚನೆ ಪಾಲನೆಯಾಗಲಿದೆಯೇ ಅಥವಾ ಹೊಸ ಪೈಪೋಟಿ ಶುರುವಾಗಲಿದೆಯೇ ಎಂದು ಕಾದು ನೋಡಬೇಕಿದೆ.
ತಮ್ಮದೇ ಪಕ್ಷದ ಅಧ್ಯಕ್ಷರ ವಿರುದ್ಧ ಮತ
ಅಧಿಕಾರ ಹಂಚಿಕೆಯ ಒಳ ಒಪ್ಪಂದದಂತೆ ನೀಡಿದ್ದ ರಾಜೀನಾಮೆಯನ್ನು ವರಿಷ್ಠರ ಗಮನಕ್ಕೆ ತರದೆ ದಿಢೀರನೆ ವಾಪಸ್ ಪಡೆದಿದ್ದ ಪ್ರಿಯಾ ಪೊ. ಪಾಟೀಲ್ ನಡೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ಸೋಮವಾರ ನಡೆದ ಮತ ಚಲಾವಣೆಯಲ್ಲಿ ಕಾಂಗ್ರೆಸ್ನ ಬಹುತೇಕ ಸದಸ್ಯರು ಒಗ್ಗಟ್ಟಾಗಿ ತಮ್ಮದೇ ಪಕ್ಷದ ಅಧ್ಯಕ್ಷರ ವಿರುದ್ಧ ಮತ ಚಲಾಯಿಸುವ ಮೂಲಕ ವರಿಷ್ಠರ ನಿರ್ಧಾರಕ್ಕೆ ಜೈ ಎಂದಿದ್ದಾರೆ.
“ಪುರಸಭೆ ಕಾಯ್ದೆ 1964ರ ಕಲಂ 42(9) ಅನುಸಾರವಾಗಿ ನಡೆದ ಈ ವಿಶೇಷ ಸಭೆಯಲ್ಲಿ ಪುರಸಭೆಯ 23 ಸದಸ್ಯರ ಪೈಕಿ 20 ಜನ ಸದಸ್ಯರು ಹಾಜರಾಗಿದ್ದರು. ಒಬ್ಬ ಸದಸ್ಯರು ಮಾತ್ರ ಅಧ್ಯಕ್ಷರ ಪರವಾಗಿ ಮತ ಹಾಕಿದರೆ, ಅವಿಶ್ವಾಸ ಮಂಡನೆಗೆ ಅವಶ್ಯವಿದ್ದ 16 ಮತಗಳ ಪೈಕಿ 18 ಸದಸ್ಯರು ಅವಿಶ್ವಾಸದ ಪರ ಕೈ ಎತ್ತಿದ್ದಾರೆ. ಒಬ್ಬರು ತಟಸ್ಥರಾಗಿದ್ದರು. ಸಭೆಯಲ್ಲಿ ಮೂರನೇ ಎರಡು ಭಾಗದಷ್ಟು ಬಹುಮತದೊಂದಿಗೆ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿರುವುದರಿಂದ ಈ ಕ್ಷಣದಿಂದಲೇ ಪುರಸಭೆ ಅಧ್ಯಕ್ಷರ ಅಧಿಕಾರ ಮುಕ್ತಾಯವಾಗುತ್ತದೆ.”
– ಶ್ರೀಧರ್ ಗೋಟುರ್
ಪುರಸಭೆ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತರು, ಯಾದಗಿರಿ ಜಿಲ್ಲೆ.

