ಹಿಂದೂ ಬಾಂಧವರು ನನ್ನವರೇ, ಅವರ ಮತದಾನ ಹಕ್ಕು ಉಳಿಸಲು ನಾನು ಶ್ರಮಿಸುವೆ | ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದೂ ಬಾಂಧವರು ನನ್ನ ಸಹೋದರರು, ಅವರು ಸಾವಿರಾರು ಸಂಖ್ಯೆಯಲ್ಲಿ ಮತಗಳನ್ನು ನೀಡಿದ್ದಾರೆ, ಅವರ ಮತದಾನ ಹಕ್ಕು ರಕ್ಷಣೆ ನನ್ನ ಹೊಣೆಯೂ ಕೂಡಾ ಹೌದು, ಹಿಂದೂ ಬಾಂಧವರು ಸಹ ನನ್ನನ್ನು ಪ್ರೀತಿಸುತ್ತಾರೆ, ವಿನಕಾರಣ ಹುಳಿ ಹಿಂಡುವ ಕೆಲಸ ಮಾಡಬೇಡಿ, ವಿಜಯಪುರ ನಗರ ನಿಮಗಷ್ಟೇ ಸೇರಿದ್ದಲ್ಲ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ
ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಭಾಗಿಯಾಗಲು ನಾನು ಯಾರು ಎಂದು ಕೇಳಿರುವ ನಗರ ಶಾಸಕ ಯತ್ನಾಳರಿಗೆ ತಿರುಗೇಟು ನೀಡಿರುವ ಮುಶ್ರೀಫ್ ಅವರು, ನಾನು ಎರಡು ಬಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ, ಕಳೆದ ಬಾರಿ
೮೬ ಸಾವಿರ ಮತಗಳನ್ನು ಪಡೆದಿರುವೆ, ೨೫ ಸಾವಿರಕ್ಕೂ ಹೆಚ್ಚು ಹಿಂದೂ ಬಾಂಧವರು ನನಗೆ ಮತದಾನ ನೀಡಿದ್ದಾರೆ, ನಾನು ಬಿ.ಎಲ್.ಎ-೧ ಇರುವೆ, ಈ ಎಲ್ಲ ಕಾರಣಕ್ಕೆ ನಾನು ನ್ಯಾಯಕ್ಕೆ ಹೋರಾಡುತ್ತಿರುವೆ, ಯಾರ ಹೆಸರು ಮತಪಟ್ಟಿಯಿಂದ ಕೈ ತಪ್ಪಿ ಹೋಗಬಾರದು ಎಂದು ಶ್ರಮಿಸುತ್ತಿರುವೆ, ಹೀಗಾಗಿ ಶಾಸಕರು ವಿಜಯಪುರ ನಗರ ತಮಗಷ್ಟೇ ಸೀಮಿತ ಎನ್ನುವುದರಿಂದ ಹೊರಬರಬೇಕು ಎಂದರು.
ಗೂಂಡಾಗಿರಿ ಮಾಡುತ್ತೇನೆ ಎಂದು ಯತ್ನಾಳ ಹೇಳಿದ್ದಾರೆ. ಆದರೆ, ವಿಜಯಪುರ ನಿಮಗೆ ಮಾತ್ರ ಸೇರಿಲ್ಲ. ಇಡೀ ನಗರದ ಜನತೆಯ ಪರವಾಗಿ ನಾನು ಮಾತನಾಡುತ್ತೇನೆ. ನಾನು ಎಲ್ಲಿಯು ಗೂಂಡಾಗಿರಿ, ದಬ್ಬಾಳಿಕೆ ಮಾಡಿಲ್ಲ, ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳು ಸಹ ನನ್ನನ್ನು ಪ್ರೀತಿ ಮಾಡುತ್ತಾರೆ. ಅವರು ನನ್ನ ಸಹೋದರರು, ಹಿಂದೂ ಬಾಂಧವರ ಬಗ್ಗೆ ನಿಮ್ಮಂತೆ ನಕಲಿ ಪ್ರೀತಿ ನಾನು ಮಾಡುವುದಿಲ್ಲ ತಿಳಿದುಕೊಳ್ಳಿ ಎಂದರು.
ನಾನು ಇಡೀ ನಗರವನ್ನು ಸುತ್ತಾಡುತ್ತೇನೆ. ನೀವು ಸುತ್ತಾಡಿ, ನಿಮಗೆ ಯಾರು ಬೇಡ ಎಂದಿದ್ದಾರೆ, ನಗರದ ವಾರ್ಡ್ ಗಳಲ್ಲಿ ಒಂದೇ ಜಾತಿ, ಸಮುದಾಯಕ್ಕೆ ಸೇರಿದ ಜನರು ಮಾತ್ರ ಇಲ್ಲ. ಎಲ್ಲ ಸಮಾಜ ಬಾಂಧವರು ನನ್ನ ಕಷ್ಟ, ಸುಖಕ್ಕೆ ಆಗಿದ್ದಾರೆ. ಅವರ ಕಷ್ಟ, ಸುಖಕ್ಕೆ ನಾನು ಆಗುವೆ, ನಾನು ಯಾರ ಹೆದರಿಕೆಗೂ ಜಗ್ಗಲ್ಲ ಎಂದರು.
ಕೇವಲ ಅಲ್ಪಸಂಖ್ಯಾತರನ್ನು ಯಾಕೆ ಗುರಿ ಮಾಡುತ್ತೀರಿ?, ಅವರನ್ನು ಯಾಕೆ ನನ್ನನ್ನು ಬೈಯುತ್ತೀರಿ. ನೀವು ಬೈಯುವುದಾದರೆ ನನ್ನನ್ನು ಬೈಯಿರಿ. ಇಡೀ ಸಮುದಾಯವನ್ನು ಯಾಕೆ ಬೈಯುತ್ತೀರಿ ಎಂದು ಮುಶ್ರೀಫ್ ಖಾರವಾಗಿ ಪ್ರಶ್ನೆ ಮಾಡಿದರು.
ಮುಖಂಡರಾದ ಫಯಾಜ್ ಕಲಾದಗಿ, ಮಹಾದೇವ ರಾವಜೀ, ಅಪ್ಪು ಪೂಜಾರಿ, ಈರಪ್ಪ ಕುಂಬಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಮಾಣ ಮಾಡಲು ಶಾಸಕರಿಗೆ ಸವಾಲು
ನಾಗಠಾಣ ಸೇರಿ ಬೇರೆ ಮತಕ್ಷೇತ್ರದ ಜನರನ್ನು ನಗರ ಮತಕ್ಷೇತ್ರಕ್ಕೆ ಸೇರಿಸುತ್ತಿದ್ದೀರಿ ಯಾಕೆ?, ನಗರ ಮತಕ್ಷೇತ್ರದ ಹಿಂದೂಗಳ ಮೇಲೆ ನಮಗೆ ನಂಬಿಕೆ ಇಲ್ಲವೇ?, ನೀವು ಗೆದ್ದಿರುವುದು ಬೋಗಸ್ ಮತಗಳಿಂದ. ಒಂದು ವೇಳೆ, ಬೋಗಸ್ ಮತಗಳಿಂದ ಗೆದ್ದಿಲ್ಲ ಎನ್ನುವುದಾದರೆ ಎಂದು ನೀವು ನಿಮ್ಮ ಮಕ್ಕಳ ಪ್ರಮಾಣ ಮಾಡಿ ನೋಡೋಣ ಎಂದು ಮುಶ್ರೀಫ್ ಸವಾಲು ಹಾಕಿದರು.
ನಾನು ಯಾವ ಅಕ್ರಮವನ್ನೂ ಮಾಡಿಲ್ಲ, ಬೇಕಾದರೆ
ನಾನೂ ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಲು ಸಿದ್ಧ ಎಂದರು.

