ಹಿರಿಯ ಸಹಕಾರಿ ಧುರೀಣ, ಪರಿಸರ ತಜ್ಞ ಡಾ.ಎಂ.ಆರ್.ದೇಸಾಯಿ ಯಡಹಳ್ಳಿ ವಿಷಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ನಾನು, ನನ್ನದು ಎಂಬುದಕಷ್ಟೇ ಸೀಮಿತವಾಗಿ ದೇಶ, ಸಮಾಜ ಕುರಿತ ಚಿಂತನೆಗಳು ಇತ್ತೀಚಿನ ದಶಕಗಳಲ್ಲಿ ಕಡಿಮೆಯಾಗಿರುವುದು ಕಳವಳ ತಂದಿದೆ” ಎಂದು ಹಿರಿಯ ಸಹಕಾರಿ ಧುರೀಣ, ಪರಿಸರ ತಜ್ಞ ಡಾ.ಎಂ.ಆರ್.ದೇಸಾಯಿ ಯಡಹಳ್ಳಿ ಹೇಳಿದರು.
ಬಾಗಲಕೋಟ ಜಿಲ್ಲೆ ಬೀಳಗಿ ಹತ್ತಿರದ ಯಡಹಳ್ಳಿ ಗ್ರಾಮದಲ್ಲಿ ನಡೆದ ಅನಗತ್ಯ, ಆಡಂಬರದ ಆಚರಣೆಗಳ ಕುರಿತು ನಡೆದ ಚಿಂತನ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನೆಹರು ಪ್ರಧಾನಿಯಾಗಿದ್ದಾಗ 1962ರ ಇಂಡೋ-ಚೈನಾ ವಾರ್ ನಲ್ಲಿ ಅನಗತ್ಯವಾಗಿ ದೀಪಗಳನ್ನು ರಾತ್ರಿ ಹಚ್ಚಬಾರದು ಎಂಬ ಕರೆಗೆ, ಶಾಸ್ತ್ರೀಯವರು ಪ್ರಧಾನಿಯಾಗಿದ್ದಾಗ ಆಹಾರ ಕೊರತೆ ನೀಗಿಸಲು ಸೋಮವಾರ ಉಪವಾಸ ಮಾಡಬೇಕು ಎಂಬ ಕರೆಗೆ ದೇಶದ ಜನತೆಯಿಂದ ದೊರೆತ ಸ್ಪಂದನೆ ಅಪೂರ್ವವಾಗಿತ್ತು. ದೇಶದ ಬಹುಸಂಖ್ಯೆ ಇದನ್ನು ಪಾಲನೆ ಮಾಡಿದ್ದರು. ಆದರೆ, ಅಮೇರಿಕಾ-ಇರಾಕ ಯುದ್ದದ ಸಂದರ್ಭದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ದೇಶದಲ್ಲಿ ಯುದ್ಧದ ಕಾರಣದಿಂದ ಆಮದು ಮಾಡಿಕೊಳ್ಳುವ ತೈಲ ಸಕಾಲಕ್ಕೆ ದೊರೆಯದೆ ಸಂಕಷ್ಟ ಉಂಟಾಗಬಹುದು. ಇಂಧನ ಮಿತವಾಗಿ ಬಳಸಿ, ಅನಗತ್ಯ ಸಂಚಾರ ಬೇಡ ಎಂದು ಮಹತ್ವದ ಸಲಹೆ ನೀಡಿದ್ದರು. ಆದರೆ ದೇಶದ ಜನ ಇದನ್ನು ಪಾಲಿಸಲಿಲ್ಲ. ಇದು ದೇಶ, ಸಮಾಜ ಕುರಿತು ನಮ್ಮ ಬದ್ಧತೆ ಕ್ಷೀಣಗೊಂಡಿರುವ ಸಂಕೇತ” ಎಂದರು.
ನೈಸರ್ಗಿಕ ಸಂಪತ್ತನ್ನು ನಾವು ಅನಗತ್ಯ ಹಾಳು ಮಾಡುತ್ತಿದ್ದೇವೆ. ಅರಣ್ಯ ಸಂಪತ್ತು ರಕ್ಷಿಸುವ ಉನ್ನತ ಅರಣ್ಯ ಅಧಿಕಾರಿ ತಮ್ಮ ಮನೆಯಲ್ಲಿನ ಮದುವೆ ಆಮಂತ್ರಣ ನನಗೆ ನೀಡಿದ್ದರು. ಅದರ ತೂಕ 300 ಗ್ರಾಂ ಆಗಿತ್ತು. ಒಂದು ಕೆಜಿ ಕಾಗದ ತಯಾರಿಸಬೇಕಾದರೆ ಐದು ಕೆಜಿ ಕಟ್ಟಿಗೆ ಬೇಕಾಗುತ್ತದೆ. ಹೀಗೆ ಸಾವಿರ ಸಾವಿರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಾರೆ. ಇದಕ್ಕಾಗಿ ಎಷ್ಟು ಮರಗಳನ್ನು ನಾವು ಆಹುತಿ ಕೊಡುತ್ತೇವೆ? ಇದರ ಬದಲಾಗಿ ಪೋನ್ ಕರೆಯ ಮೂಲಕ ಅಥವಾ ವ್ಯಾಟ್ಸಪ್ ಸಂದೇಶದ ಮೂಲಕ ಆಮಂತ್ರಿಸಿದರೆ ಅವರ ಸಮಯ, ಶ್ರಮ ಮತ್ತು ದೇಶದ ಅಮೂಲ್ಯ ಸಂಪತ್ತು ಮಿಗಿಲಾಗಿ ಅವರು ಗಳಿಸಿದ ದೊಡ್ಡ ಮೊತ್ತದ ಧನವನ್ನು ಉಳಿಸಬಹುದು. ಇಂತಹ ಆಲೋಚನೆಗಳಿಗೆ ನಾವು ಒತ್ತು ಕೊಡುತ್ತಿಲ್ಲ. ಬದಲಾಗಿ ಬೇರೆಯವರ ಆಚರಣೆಗಳನ್ನು ನಾವು ಅನುಸರಿಸುತ್ತ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತ ಅನಗತ್ಯ ಆಡಂಬರಕ್ಕೆ ಬಿದ್ದು, ಇಡೀ ಸಮಾಜ ಕನಿಷ್ಠ ಸ್ಥಿತಿಗೆ ತಲುಪುತ್ತಿದೆ. ಈ ಸಂದರ್ಭದಲ್ಲಿ ನಾವು ಕೈಚೆಲ್ಲಿ ಕೂಡದೇ ಬದಲಾವಣೆ ನನ್ನಿಂದ ಸಾಧ್ಯ ಎಂದು ಎಲ್ಲರೂ ಆಲೋಚಿಸಿದರೆ ತಕ್ಕ ಮಟ್ಟಿಗೆ ಸುಧಾರಣೆ ತರಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ, ಇತ್ತೀಚಿನ ದಿನಗಳಲ್ಲಿ ಮದುವೆ, ರಿಸಪ್ಶನ್, ಎಂಗೆಜಮೆಂಟ್, ಯಾದಿ ಹೆಸರುಗಳಲ್ಲಿ ಮತ್ತು ಸೀಮಂತ ಕಾರ್ಯ, ಜನ್ಮದಿನ, ಹುಟ್ಟುಗಿರಣಿ, ಮದುವೆ ವಾರ್ಷಿಕೋತ್ಸವ ಇತ್ಯಾದಿಗಳನ್ನು ಅನಗತ್ಯ ಆಡಂಬರದ ಆಚರಣೆಗಳಿಂದ ಸಾಲ ಮಾಡಿಯಾದರೂ ಇವುಗಳನ್ನು ಮಾಡಲೇಬೇಕೆಂಬ ಮನಸ್ಥಿತಿಗಳಿಂದಾಗಿ ಇದೊಂದು ಸಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಈ ಕುರಿತು ಎಲ್ಲರೂ ಚಿಂತನ-ಮಂಥನ ನಡೆಸಬೇಕು ಎಂದರು.
ಸಹಕಾರಿ ಧುರೀಣ ಎಂ.ಆರ್. ಪಾಟೀಲ, ಬಳ್ಳೊಳ್ಳಿ, ದಯಾನಂದ ಪಾಟೀಲ ಮುಧೋಳ, ಎಸ್.ಟಿ.ಪಾಟೀಲ ಯಡಹಳ್ಳಿ ಮಾತನಾಡಿ, ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನ್ಯಾಯವಾದಿಗಳಾದ ಶ್ರೀಕಾಂತ ಶಿರಾಡೋಣ, ಎನ್.ಎಸ್.ಲೋಣಿ, ಶರಶ್ಚಂದ್ರ ಪಾಟೀಲ, ಲೋಕಾಯುಕ್ತ ಡಿಎಸ್ಪಿ ಬಸವರಾಜ ಯಲಿಗಾರ, ಸುರೇಶ ದೇಸಾಯಿ ಕಲಕೇರಿ, ಅದೃಶ್ಯಪ್ಪ ದೇಸಾಯಿ, ಪ್ರಕಾಶ ಪರನಾಕರ ಮತ್ತಿತರರು ಮಾತನಾಡಿ, ದುಂದು ವೆಚ್ಚ, ಅನಗತ್ಯ ಆಚರಣೆ, ವಿವಾಹ ವಿಚ್ಚೇದನಗಳು, ವೃದ್ಧಾಪ್ಯದಲ್ಲಿನ ಪಾಲಕರ ನಿರ್ಲಕ್ಷ್ಯ ಮತ್ತಿತರ ವಿಷಯಗಳ ಕುರಿತು ತಿಳಿಸಿಕೊಟ್ಟರು.
ಬೀಳಗಿ ತಾಲೂಕು ಕೊಲೂರ ಗ್ರಾಮದ ಶಿವಪ್ಪ ಸಂಗಪ್ಪ ತಿಪರೆಡ್ಡಿ, ತಿಕೋಟಾ ತಾಲೂಕಿನ ಬರಟಗಿಯ ಗುರುಪಾದಗೌಡ ದಾಶ್ಯಾಳ ಮಾತನಾಡಿ, ಇನ್ನು ಮುಂದೆ ನಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಸರಳವಾಗಿ ಮಾಡುವುದಾಗಿ ಸಭೆಗೆ ತಿಳಿಸಿದರು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ದೇವಕಾಂತ ಬಿಜ್ಜರಗಿ, ಶರಣು ಸಬರದ, ಎಚ್.ಎಸ್.ಕೋರಡ್ಡಿ, ಮಲ್ಲಪ್ಪ ಕಾಳಗಿ, ಹೊಸೂರು ಗ್ರಾಮದ ಮಲ್ಲಿಕಾರ್ಜುನ ಬಾರಡ್ಡಿ ಸೇರಿದಂತೆ ಈ ಚಿಂತನ ಸಭೆಯಲ್ಲಿ ಭಾಗವಹಿಸಿದ್ದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ವಿವಿಧ ಸಮುದಾಯಗಳ ಪ್ರಮುಖರು ನಮ್ಮ-ನಮ್ಮ ಸಮುದಾಯಗಳಲ್ಲಿ, ಪ್ರದೇಶಗಳಲ್ಲಿ ಮತ್ತು ಆಪ್ತಮಿತ್ರರಲ್ಲಿ ನಾವೇ ಮುಂದಾಗಿ ಸರಳ ಕಾರ್ಯಕ್ರಮಗಳ ಕುರಿತು ಜನರಲ್ಲಿ ತಿಳಿಹೇಳುವುದಾಗಿ ಈ ಸಭೆ ನಿರ್ಣಯಿಸಿತು.

