ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲ ಸಾಹಿತ್ಯ ಸಮಾಜ ಮತ್ತು ಸಂಸ್ಕೃತಿಗೆ ಮಾರಕವಾಗಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಸಾರುವ ಉತ್ತಮ ಸಾಹಿತ್ಯ ಮೂಡಿಬರಬೇಕಿದೆ ಎಂದು ಮಳಖೇಡದ ಅ. ಸೈ. ಶಾ. ಮುಸ್ತಫಾ ಖಾದ್ರಿ ಸಾಹೇಬ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ತೈಸಿನ್ - ತಸ್ಲೀಮ್ ಗ್ರಂಥಮಾಲೆ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಲೇಖಕ ಇಲಿಯಾಸ್ ಪಟೇಲ್ ಬಳಗಾನೂರ ಅವರ ‘ಅತಿಥಿ ಹೃದಯ’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ನಶಿಸಿ, ಯುವಕರಲ್ಲಿ ಸಂಸ್ಕಾರ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವ ಸಾಹಿತಿಗಳು ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಮೂಲಕ ಶಿಷ್ಟಾ ಸಾಹಿತ್ಯ ರಚನೆಗೆ ಮುಂದಾಗಲಿ ಎಂದು ಆಶಿಸಿದರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಸಿಂದಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ಪಾಟೀಲ್ ಗಣಿಹಾರ್ ಮಾತನಾಡಿ, ಬರಹಗಾರರು, ಚಿಂತಕರು, ಯುವಕರು, ಸಮಾಜದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ ಎಂದವರು, ಅತಿಥಿ ಹೃದಯ ಕೃತಿಯ ಮೂಲಕ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿದ ಲೇಖಕ ಇಲಿಯಾಸ್ ಪಟೇಲ್ ಅವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಮೌಲ್ಯಯುತ ಕೃತಿಗಳು ಪ್ರಕಟವಾಗಲಿ ಎಂದು ಹಾರೈಸಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಷ. ಬ್ರ. ಚನ್ನಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಿರಿಯ ಪತ್ರಕರ್ತ ಸಂಜೀವರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ನಿಂಗನಗೌಡ ದೇಸಾಯಿ ಕೃತಿಯ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಠ್ಠಲ ಚವ್ಹಾಣ, ವೀರಣ್ಣ ಕಲಿಕೇರಿ, ದೇವಿಂದ್ರಪ್ಪ ಕರಡಕಲ್, ಬಸವರಾಜ ಕೂಡ್ಲಿಗಿ, ಹಳ್ಳೇರಾವ್ ಕುಲಕರ್ಣಿ, ರಾಚಪ್ಪ ಕುಂಬಾರ, ಪರಶುರಾಮ ಮಾಳಹಳ್ಳಿಕರ್, ವೀರೇಶ ಟಕ್ಕಳಕಿ ಹಾಗೂ ನಾಗರಾಜ ಅವರು ಕವನ ವಾಚಿಸಿದರು. ಪ್ರಮುಖರಾದ ಅಯ್ಯೂಬ್ ಪಟೇಲ್ ಬಳಗಾನೂರ, ಮಕ್ತುಮ್ ಪಟೇಲ್, ಚಂದ್ರಶೇಖರ ಸ್ವಾಮಿ ಹಿರೇಮಠ, ಬಂದೇನವಾಜ್ ನಾಶಿ, ಬಂದೇನವಜಾ ನಾಲ್ತವಾಡ್, ಗುರು ಕುಲ್ಕರ್ಣಿ, ಮಹಿಬೂಬ್ ವಡಕೇರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಗಾನ ಕೋಗಿಲೆ ಎಸ್ ಜಾನಕಿ ರವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಡಾ. ಯಂಕನಗೌಡ ಪಾಟೀಲ್ ಕಾರ್ಯಕ್ರಮ ನಡೆಸಿಕೊಟ್ಟರು, ಲೇಖಕ ಇಲಿಯಾಸ್ ಪಟೇಲ್ ಸ್ವಾಗತಿಸಿದರು.
ಹಾಜಿಗಳಿಗೆ ಹಾಗೂ ಲೇಖಕರಿಗೆ ಸನ್ಮಾನ
ಕೃತಿ ಬಿಡುಗಡೆ ಸಂದರ್ಭದಲ್ಲಿ ಹಜ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ತಾಯ್ನಾಡಿಗೆ ಹಿಂದಿರುಗಿದ ರಫೀಕ್ ವಡಿಕೇರಿ, ಅಬ್ದುಲ್ ರಜಾಕ್ ಹವಾಲ್ದಾರ್, ಗಾಲೀಬ್ ಖಾನ್ ಮೌಲಾನಾ ಹಾಗೂ ಮೈಮುದ ವಡಿಕೇರಿ ಇವರಿಗೆ ಹಾಗೂ ಕೃತಿಯ ಕರ್ತೃ ಇಲಿಯಾಸ್ ಪಟೇಲ್ ಬಳಗಾನೂರ ಅವರಿಗೆ
ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

