ತಮ್ಮ ಬಾಳು ಬಂಗಾರವಾಗಲು ಕಾರಣರಾದ ನೆಚ್ಚಿನ ನಾಯಕನ ಹೆಸರನ್ನು ಶಾಶ್ವತವಾಗಿ ಸ್ಮರಿಸುವ ಕಾರ್ಯ ಮಾಡಿದ ಅವಿಭಕ್ತ ಹಿರೇಮಠ ಕುಟುಂಬ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬರದ ನಾಡಿನಲ್ಲಿ ಬಾಳು ಬಂಗಾರವಾಗಲು ಕಾರಣರಾದ ನೆಚ್ಚಿನ ನಾಯಕನ ಹೆಸರನ್ನು ತಮ್ಮ ಮನೆಗೆ ಇಡುವ ಮೂಲಕ ಅವಿಭಕ್ತ ಕುಟುಂಬವೊಂದು ಹೃದಯಸ್ಪರ್ಷಿ ಕಾರ್ಯ ಮಾಡಿದೆ.
ಅಷ್ಟೇ ಅಲ್ಲ, ರವಿವಾರ ಅದ್ಧೂರಿಯಾಗಿ ವಾಸ್ತು ಶಾಂತಿ ಮತ್ತು ಗೃಹ ಪ್ರವೇಶ ಪೂಜೆ ಮಾಡಿ ಅತಿಥಿ ಗಣ್ಯರನ್ನು ಆಮಂತ್ರಿಸಿ ಸತ್ಕಾರ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ 30 ಸದಸ್ಯರನ್ನು ಹೊಂದಿರುವ ಅವಿಭಕ್ತ ಹಿರೇಮಠ ಕುಟುಂಬದ ಸಹೋದರರಾದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ರಾಜಕುಮಾರ ಲೇಔಟ್ ನ ಸುವರ್ಣ ನಗರದಲ್ಲಿ ಸುಮಾರು ಬೃಹತ್ ಮನೆ ನಿರ್ಮಿಸಿದ್ದಾರೆ. ಅಲ್ಲದೇ, ಈ ಮನೆಗೆ ತಮ್ಮ ಬಾಳು ಹಸನಾಗಲು ಕಾರಣರಾದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಮನದಲ್ಲಷ್ಟೇ ಅಲ್ಲ ಮನೆಯಲ್ಲೂ ನೆಚ್ಚಿನ ನಾಯಕನ ಹೆಸರು ಅಜರಾಮರವಾಗುವಂತೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರೇಮಠ ಸಹೋದರರು, ಸೋಮದೇವರಹಟ್ಟಿಯಲ್ಲಿ ನಮ್ಮ ಕುಟುಂಬಕ್ಕೆ ಸೇರಿದ 40 ಎಕರೆ ಜಮೀನಿದೆ. ಒಣಬೇಸಾಯ ಮಾಡುತ್ತಿದ್ದ ನಮಗೆ ವರುಣ ದೇವ ಕೃಪೆ ತೋರಿದರೆ ಬೆಳೆ ಬರುತ್ತಿತ್ತು. ಆ ಬೆಳೆಯೂ ಕೂಡ ನಮ್ಮ ಕುಟುಂಬ ನಿರ್ವಹಣೆಗೆ ಮಾತ್ರ ಸಾಲುತ್ತಿತ್ತು. ಆದರೆ, 2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾದ ಎಂ. ಬಿ. ಪಾಟೀಲ ಅವರು ಕೈಗೊಂಡ ಜಲಕ್ರಾಂತಿಯಿಂದಾಗಿ ನಮ್ಮ ಹೊಲಗಳಿಗೆ ನೀರು ಬಂತು. ಒಣಬೇಸಾಯದ ಜಮೀನು ನೀರಾವರಿ ಭೂಮಿಯಾಗಿ ಮೇಲ್ದರ್ಜೆಗೇರಿತು. ಪರಿಣಾಮ ನಾವು ಎಲ್ಲ ಜಮೀನಿನಲ್ಲಿ ಉತ್ಕೃಷ್ಠ ಗುಣಮಟ್ಟದ ದ್ರಾಕ್ಷಿ ಬೆಳೆಯಲಾರಂಭಿಸಿದೇವು. ದ್ರಾಕ್ಷಿಯನ್ನು ಒಣದ್ರಾಕ್ಷಿ(ಮನುಕ) ಮಾಡಿದೆವು. ಸುಮಾರು 100 ಟನ್ ಒಣ ದ್ರಾಕ್ಷಿ ಮಾಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಒಣದ್ರಾಕ್ಷಿ ರೂ. 1.50 ಕೋ. ಇದ್ದ ಆದಾಯ ಈಗ ರೂ. 3.50 ರಿಂದ ರೂ. 4 ಕೋ. ವರೆಗೆ ತಲುಪಿದೆ. ಆರ್ಥಿಕವಾಗಿ ನಾವು ಸ್ವಾವಲಂಬಿಯಾಗಲು ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರೇ ಕಾರಣ. ಅವರ ಋಣವನ್ನು ತೀರಿಸಲು ಆಗುವುದಿಲ್ಲ. ಅವರ ಹೆಸರು ಕೇವಲ ನಮ್ಮ ಮನಸ್ಸಿನಲ್ಲಿ ಇರಬಾರದು. ನಮ್ಮ ಮನೆಗೂ ಇರಬೇಕು ಎಂಬ ಸದುದ್ದೇಶದಿಂದ ನಮ್ಮ ನೂತನ ಮನೆಗೆ ಶ್ರೀ ಎಂ. ಬಿ. ಪಾಟೀಲ ನಿಲಯ ಎಂದು ಹೆಸರು ಇಟ್ಟಿದ್ದೇವೆ. ನಮ್ಮ ಜೀವನದ ಸಾರ್ಥಕ ಕ್ಷಣಗಳಲ್ಲಿ ಇದು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ರೈತರ ಹೆಮ್ಮೆಯ ಕಾರ್ಯದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಂ. ಬಿ. ಪಾಟೀಲ, ಅನ್ನದಾತನ ಕನಸಿನ ಮನೆಯ ಮೇಲೆ ನನ್ನ ಹೆಸರು ಹಾಕಿದ್ದಾರೆ. ಇದು ನನಗೆ ಸಿಕ್ಕ ಅಪೂರ್ವ ಗೌರವ. ಈ ಸುದ್ದಿ ಮನಸ್ಸನ್ನು ಭಾವುಕವಾಗಿಸಿದೆ. ಇದು ಕೇವಲ ನನ್ನ ಹೆಸರಲ್ಲ. ಇದು ರೈತರ ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆಯ ಸಂಕೇತ. ನಾವು ಮಾಡಿದ ಕೆಲಸವನ್ನು ಮರೆಯುವವರೇ ಹೆಚ್ಚು ಎನ್ನುವ ಕಾಲದಲ್ಲಿ, ನಮ್ಮ ರೈತರು ಮಾತ್ರ ತಾವು ಬೆಳೆದ ಹಣ್ಣು, ತರಕಾರಿ, ಹಾಲು ತಂದು ಪ್ರೀತಿಯಿಂದ ನೀಡುತ್ತಾರೆ. ಈಗ ತಮ್ಮ ಕನಸಿನ ಮನೆಗೂ ನನ್ನ ಹೆಸರಿಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ವಿಜಯಪುರ ನಗರದಲ್ಲಿ ಮನೆ ನಿರ್ಮಿಸಿದ ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿಯ ಸಿದ್ದಯ್ಯ, ಸಾತಯ್ಯ, ಬಸಯ್ಯ ಮತ್ತು ಮಲ್ಲಯ್ಯ ಅವರ ಅವಿಭಕ್ತ ಕುಟುಂಬಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಬರಗಾಲದಿಂದ ತತ್ತರಿಸಿದ್ದ ಈ ನೆಲದಲ್ಲಿ, ಇಂದು ರೈತರು ಕೋಟಿ ರೂಪಾಯಿಗಳ ಆದಾಯ ಗಳಿಸುವ ಮಟ್ಟಿಗೆ ಬೆಳೆದಿದ್ದಾರೆ. ಅದಕ್ಕೆ ನಾವು ಮುತುವರ್ಜಿ ವಹಿಸಿ ಜಾರಿಗೊಳಿಸಿದ ನೀರಾವರಿ ಯೋಜನೆಗಳ ಕೊಡುಗೆ ಮಹತ್ವದ್ದಾಗಿದೆ. ಅನ್ನದಾತನ ಈ ಯಶಸ್ಸು ಮತ್ತು ಕೃತಜ್ಞತೆಯ ಭಾವನೆ ಇನ್ನಷ್ಟು ಸೇವೆ ಮಾಡುವ ಜವಾಬ್ದಾರಿಯನ್ನು ನನ್ನ ಮೇಲೆ ಹೆಚ್ಚಿಸುತ್ತದೆ. ಇದು ಕೇವಲ ಒಬ್ಬ ರೈತನ ಯಶಸ್ಸಲ್ಲ, ನೀರಾವರಿ, ಶ್ರಮ, ಸಂಕಲ್ಪ ಮತ್ತು ವಿಶ್ವಾಸ ಒಂದಾದಾಗ ಸಾಧ್ಯವಾಗುವ ಪರಿವರ್ತನೆಯ ಜೀವಂತ ಸಾಕ್ಷಿ. ಈ ಪ್ರೀತಿ ನನ್ನನ್ನು ಮತ್ತಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ರೈತರ ಬದುಕು ಇನ್ನಷ್ಟು ಹಸನಾಗುವವರೆಗೆ, ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗುವವರೆಗೆ ನನ್ನ ಸೇವೆಯ ಪಯಣ ನಿರಂತರವಾಗಿರಲಿದೆ ಎಂದು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಮನೆಯ ವಾಸ್ತು ಶಾಂತಿ ಮತ್ತು ಗೃಹಪ್ರವೇಶಕ್ಕೆ ಆಗಮಿಸಿದ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್ ಅಧ್ಯಕ್ಷ ಧ್ರುವ ಎಂ. ಪಾಟೀಲ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಡಾ.ಮಹಾಂತೇಶ ಬಿರಾದಾರ,
ಚೆನ್ನೈ ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ(ಸಿಬಿಐಸಿ ಟಿಐಟಿಎಲ್) ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜಕುಮಾರ ಸಿದ್ರಾಮ ಕುಮಾನಿ, ಮುಖಂಡರಾದ ಜಕ್ಕಪ್ಪ ಯಡವೆ, ಗುರು ಮಾಳಿ, ಸೋಮನಾಥ ಬಾಗಲಕೋಟ, ವಿ. ಎಸ್.ಪಾಟೀಲ, ಧರ್ಮಣ್ಣ ಬಿಳೂರ, ಚನ್ನಪ್ಪ ಕೊಪ್ಪದ, ಗುರು ಮುಚ್ಚಂಡಿ, ನಿಂಗನಗೌಡ ಬಿರಾದಾರ, ಮಹಾಂತೇಶ ಹಾದಿಮನಿ, ಶ್ರೀಶೈಲ ತುಳಜಣ್ಣವರು, ಅನೀಲ ಹಿರೇಮಠ ಮುಂತಾದವರು ಹಿರೇಮಠ ಸಹೋದರರಿಗೆ ಶುಭ ಹಾರೈಸಿದರು.
99 ಕೆಲಸ ಮಾಡಿದರೂ ಒಂದು ಕೆಲಸವಾಗದಿದ್ದರೆ ನಾಯಕರನ್ನು ದೂರುವ ಇಂದಿನ ದಿನಗಳಲ್ಲಿ ನೀರಾವರಿ ಮೂಲಕ ಅನ್ನದಾತರ ಬಾಳನ್ನು ಬಂಗಾರವಾಗಿಸಿದ ನಾಯಕನ ಹೆಸರನ್ನು ತಮ್ಮ ಹೊಸ ಮನೆಗೆ ಇಡುವ ಮೂಲಕ ಸೋಮದೇವರಹಟ್ಟಿ ಹಿರೇಮಠ ಸಹೋದರರು ಉಪಕಾರ ಮಾಡಿದವರ ಹೆಸರನ್ನು ಮನಸ್ಸಿನಲ್ಲಷ್ಟೇ ಅಲ್ಲ, ಭೌತಿಕವಾಗಿಯೂ ಶಾಶ್ವತವಾಗಿಡುವ ಕೆಲಸ ಮಾಡಿದ್ದಾರೆ.

