ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಾಜದಲ್ಲಿ ಪ್ರತಿನಿತ್ಯವೂ ಪ್ರತಿಕ್ಷಣದಲ್ಲೂ ನಾನಾ ಕಾರಣಗಳಿಂದ ರಕ್ತ ಹೀನತೆ ಉಂಟಾದಾಗ ವ್ಯಕ್ತಿಗಳಿಗೆ ರಕ್ತ ನೀಡಿ ಬದುಕಿಸಲು ಅವಶ್ಯಕವಾಗಿ ರಕ್ತ ಬೇಕಾಗುತ್ತದೆ ಎಂದು ಸಿಂದಗಿ ವೇದಿಕೆ ಘಟಕದ ಅಧ್ಯಕ್ಷ ದಾವುದಸಾಬ ನದ್ವಿ ಕರೆ ನೀಡಿದರು.
ಸಿಂದಗಿ ನಗರದ ಅಖಿಲ ಭಾರತೀಯ ಮಾನವೀಯತೆ ಸಂದೇಶ ವೇದಿಕೆ ಹಾಗೂ ನ್ಯೂ ಇರಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾ ಶ್ರೇಷ್ಠದಾನವಾಗಿದೆ. ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದರು.
ಈ ವೇಳೆ ಸಿಂದಗಿಯ ತಾಲೂಕಾಸ್ಪತ್ರೆ ರಕ್ತ ನಿಧಿ ವಿಭಾಗದ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ರಕ್ತವು ಜೀವ ದ್ರವ್ಯವಾಗಿ ಪ್ರಾಣ ಉಳಿಸುತ್ತದೆ. ರಕ್ತದಾನದಿಂದ ಆರೋಗ್ಯ ಸುಧಾರಿಸುತ್ತದೆ. ದೇಹದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ೫೦ಕ್ಕೂ ಅಧಿಕ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಶಿಬಿರದಲ್ಲಿ ಜಿಲ್ಲಾಸ್ಪತ್ರೆಯ ರಕ್ತ ಶೇಖರಣಾ ಘಟಕದ ವೈದ್ಯ ಡಾ.ಗೌರವ ಮಾನೆ, ಡಾ.ಖದೀಜಾ ಮೈತ್ರಿ ಮಾತನಾಡಿದರು. ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಬ್ದುಲ್ರಜಾಕ ದುದನಿ, ಸಿಂದಗಿಯ ನ್ಯೂ ಇರಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಕ್ಷ ಮೈಬುಬಸಾಬ ಹಸರಗುಂಡಗಿ, ವೇದಿಕೆಯ ಪದಾಧಿಕಾರಿಗಳಾದ ಫಯಾಜ ನದ್ದಿ, ಖಾರಿ ರಿಯಾಜ ನದ್ವಿ. ಅಬ್ದುಲ್ರಹಮಾನ ನದ್ವಿ ಸೇರಿದಂತೆ ಅನೇಕರು ಇದ್ದರು. ಕಲೀಮುಲ್ಲಾ ನದ್ವಿ, ದಸ್ತಗೀರ ಉಸ್ತಾದ ಕಾರ್ಯಕ್ರಮ ನಿರ್ವಹಿಸಿದರು.

