ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಇಲ್ಲಿನ ತಹಶೀಲ್ದಾರ ಕಚೇರಿಯ ಎದುರು ಅನಿರ್ದಿಷ್ಠಾವಧಿ ಮುಷ್ಕರವನ್ನು ಪ್ರಾರಂಭಿಸಿದರು.
ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದು ಅವುಗಳ ಜವಾಬ್ದಾರಿಯನ್ನು ನಮ್ಮ ಮೇಲೆ ಹೇರುತ್ತವೆ. ಆದರೆ ಅವುಗಳಿಗೆ ಬೇಕಾಗಿರುವ ಕನಿಷ್ಟ ಮೂಲಭೂತ ಸೌಕರ್ಯಗಳನ್ನೂ ಇಲ್ಲಿಯವರೆಗೆ ಯಾವ ಸರ್ಕಾರಗಳೂ ಮಾಡಿಲ್ಲ. ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಹುಟ್ಟಿದಾಗಿನಿಂದಲೂ ನಮ್ಮ ಬಗ್ಗೆ ಯಾವ ಸರ್ಕಾರಗಳೂ ಯೋಚಿಸಿಲ್ಲ. ಇಲಾಖೆಯಲ್ಲಿ ಮತ್ತು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಆಗುವ ಬದಲಾವಣೆಗಳಿಗೆ ನಮ್ಮ ಬೆಂಬಲ ಇದೆ. ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇಸಲು ಮುಂದಾಗಬೇಕು. ಕಡೆಗಣಿಸಿದಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ದಿನನಿತ್ಯ ನಾವು ಕುಟುಂಬದ ಜೊತೆ ಒಂದು ನಿಮಿಷದ ನೆಮ್ಮದಿಯ ಬದುಕನ್ನೂ ಕಳೆಯುವಷ್ಟು ಸಮಯ ನಮಗಿಲ್ಲ. ಅಷ್ಟೊಂದು ಒತ್ತಡ ನಮ್ಮಮೇಲೆ ಹೇರಲಾಗಿದೆ. ಇಷ್ಟು ದುಡಿದರೂ ನಮಗೆ ಯಾವುದೇ ಪದೋನ್ನತಿ ಕೂಡ ಇಲ್ಲ. ಹಾಗಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮೊದಲ ಹಂತದ ಹೋರಾಟವಾಗಿ ರಾಜ್ಯದಾದ್ಯಂತ ಸ೨೬ ರಂದು ತಾಲೂಕಿನಲ್ಲಿ ಪ್ರತಿಭಟಿಸುತ್ತಿದ್ದು ಎರಡನೇ ಹಂತವಾಗಿ ಸ೨೭ ರಂದು ಜಿಲ್ಲೆಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರದೇ ಹೋದಲ್ಲಿ ಸೋಮುವಾರದಿಂದ ಬೆಂಗಳೂರಿನ ಫ್ರೀಡಂಪಾರ್ಕನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಕ.ರಾ.ಸ.ನೌ.ಸಂಘದ ತಾಲೂಕು ಉಪಾಧ್ಯಕ್ಷ ವೆಂಕಟೇಶ ಅಂಬಿಗೇರ ಮಾತನಾಡಿ ಮುಷ್ಕರಕ್ಕೆ ಬೆಂಬಲಿಸುವದಾಗಿ ತಿಳಿಸಿದರು. ಸಂಘದ ತಾಲೂಕು ಅಧ್ಯಕ್ಷ ಮನೋಜ ರಾಠೋಡ, ಖಜಾಂಚಿ ರಫೀಕ ಮುಲ್ಲಾ ಮಾತನಾಡಿದರು.
ಈ ಮುಷ್ಕರದಲ್ಲಿ ಸಂಘದ ಉಪಾಧ್ಯಕ್ಷ ರಾಮು ಹೊಸಮನಿ, ಗೌರವಾಧ್ಯಕ್ಷ ಸುನೀಲ ಚೌವ್ಹಾಣ, ದೇವರಾಜ ಗುರಿಕಾರ, ಉಮಾಪತಿ ರಾಠೋಡ, ಅನೀಲ ಚೌವ್ಹಾಣ, ಸಚೀನ ಗೌಡರ, ಕುಮಾರ ಆಲಗೂರ, ಶ್ರೀನಿವಾಸ ಹುನಗುಂದ, ಅನುಪಮಾ ಪೂಜಾರಿ, ಆರತಿ ಬಳವಾಟ, ಗಂಗಮ್ಮ ಕುಂಬಾರ, ಜೈನಾಬಿ ಕಮತಗಿ, ಕಾವ್ಯಾ ಮುರಾಳ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಇವರ ಹೋರಾಟಕ್ಕೆ ವಿವಿಧ ದಲಿತಪರ ಸಂಘಟನೆಗಳು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಪರವಾನಗಿ ಭೂ ಮಾಪಕರ ತಾಲೂಕು ಸಂಘ, ಅಟಲಜಿ ಜನಸ್ನೇಹಿ ಕೇಂದ್ರ ಮತ್ತು ಕಂದಾಯ ನೌಕರರ ಸಂಘಗಳು ಬೆಂಬಲ ಸೂಚಿಸಿದವು.

