ಅಂತಾರಾಷ್ಟ್ರೀಯ ಪ್ರಸವಪೂರ್ವ ಆರೈಕೆ ಮುಂದುವರೆದ ವೈದ್ಯಕೀಯ ಶಿಕ್ಷಣ ಕುರಿತ ಕಾರ್ಯಾಗಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸವ ಪೂರ್ವ ಆರೈಕೆ ಕಾರ್ಯಾಗಾರಗಳು ತಾಯಂದಿರು ಮತ್ತು ಶಿಶುಗಳ ಆರೈಕೆ ವೃತ್ತಿಪರರಿಗೆ ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಕೌಶಲ್ಯ ಅಳವಡಿಸಿಕೊಳ್ಳಲು ಅವಕಾಶ ನೆರವು ನೀಡುತ್ತವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂಪತ್ ಗುಣಾರಿ ಹೇಳಿದ್ದಾರೆ.
ಶನಿವಾರ ನಗರದ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಮೇರಿಕದ ಟಿ.ಎ.ಎಚ್.ಬಿ ಟೆಕ್ಸಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಸವಪೂರ್ವ ಆರೈಕೆ ಮುಂದುವರೆದ ವೈದ್ಯಕೀಯ ಶಿಕ್ಷಣ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಂದಿರು ಮತ್ತು ನವಜಾತ ಶಿಶುಗಳ ಆರೈಕೆ ಬಹುಮುಖ್ಯವಾಗಿದೆ. ಈ ಕೆಲಸದಲ್ಲಿ ಕಾರ್ಯ ನಿರ್ವಹಿಸುವ ವೃತ್ತಿಪರರಿಗೆ ಬದಲಾಗುತ್ತಿರುವ ಇಂದಿನ ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ತಾಂತ್ರಿಕ ಕೌಶಲ್ಯ ಮತ್ತು ವೃತ್ತಿಕೌಶಲ್ಯ ಅಗತ್ಯವಾಗಿದೆ. ತರಬೇತಿ ಶಿಬಿರಗಳು ಮತ್ತು ಕಾರ್ಯಾಗಾರಗಳು ಈ ವೃತ್ತಿಪರರಿಗೆ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ನೆರವು ನೀಡುತ್ತವೆ ಎಂದು ಡಾ.ಗುಣಾರಿ ಹೇಳಿದರು.
ಟೆಕ್ಸಾಸ್ ನ ಟಿ.ಎ.ಬಿ.ಎಚ್. ಪ್ರತಿನಿಧಿ ಡಾ.ಪ್ರಕಾಶ ಕಬ್ಬೂರ ಅವರು ವಿಶ್ವಾದ್ಯಂತ ಆರೋಗ್ಯ ಸೇವೆಯಲ್ಲಿ ಹೂಡಿಕೆಯ ಮಹತ್ವವನ್ನು ಹಂಚಿಕೊಂಡರು. ಅಲ್ಲದೇ, ಭಾರತ ಮತ್ತು ಅಮೆರಿಕಾದ ನಡುವಿನ ವೈದ್ಯಕೀಯ ಜ್ಞಾನ ವಿನಿಮಯದ ಮಹತ್ವವನ್ನು ವಿವರಿಸಿದರು.
ತಾಯಂದಿರು, ನವಜಾತ ಶಿಶುಗಳ ಮತ್ತು ಮಕ್ಕಳ ಆರೈಕೆಯಲ್ಲಿ ತೊಡಗಿರುವ ನರ್ಸ್ಗಳು ಹಾಗೂ ವೈದ್ಯರಿಗಾಗಿ ಆಯೋಜಿಸಲಾಗಿದ್ದ ಈ ಕಾರ್ಯಾಗಾರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪೆರಿನಾಟಲ್ ಆರೈಕೆ ತಜ್ಞರು ತಾಯಿ ಮತ್ತುನವಜಾತ ಶಿಶುಗಳ ಆರೈಕೆ ಕ್ಷೇತ್ರದಲ್ಲಿನ ವಿದ್ಯಮಾನಗಳನ್ನು ಹಂಚಿಕೊಂಡರು. ಅಲ್ಲದೇ, ಈ ಕ್ಷೇತ್ರದಲ್ಲಿನ ಹೊಸ ಚಿಕಿತ್ಸೆ ವಿಧಾನಗಳು, ತಂತ್ರಜ್ಞಾನಗಳು ಹಾಗೂ ಆರೈಕೆಯಲ್ಲಿರುವ ಅತ್ಯುತ್ತಮ ವಿಧಾನಗಳ ಕುರಿತು ಚರ್ಚೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಎಲ್ಡಿಇ ಆಸ್ಪತ್ರೆಯ ನಾನಾ ವಿಭಾಗಗಳ ಮುಖ್ಯಸ್ಥರು, ವೈದ್ಯರು, ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳು ತಂತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಕುಲಪತಿ ಡಾ.ಆರ್.ಎಸ್.ಮುಧೋಳ, ರಜಿಸ್ಟ್ರಾರ್ ಡಾ.ರಾಘವೇಂದ್ರ ಕುಲಕರ್ಣಿ, ಡಾ.ಎಸ್.ವಿ.ಪಾಟೀಲ, ಡಾ.ತೇಜಸ್ವಿನಿ ವಲ್ಲಭ, ಡಾ.ಸುಮಂಗಲಾ ಪಾಟೀಲ, ಡಾ.ಶೈಲಜಾ ಬಿದರಿ, ಡಾ.ಶೈಲಜಾ ಪಾಟೀಲ, ಡಾ.ಮಲ್ಲಿಕಾರ್ಜುನ ಯಡವಣ್ಣವರ, ಡಾ.ಮುತ್ತು ಗುಡದಿನ್ನಿ, ಡಾ.ಶೋಭಾ ಗುಡದಿನ್ನಿ, ಡಾ.ಸಿದ್ದು ಚರಕಿ, ಡಾ.ಅರುಣಾ ಬಿರಾದಾರ, ಡಾ.ಕಲ್ಯಾಣ್ ಶೆಟ್ಟರ, ಡಾ.ರವಿ ನಾಗನೂರ, ವಿವಿಯ ಅಧಿಕಾರಿಗಳು, ರೋಟರಿಯನ್ಸ್ಗಳಾದ ರವಿ ಶಿಲ್ಲೇದಾರ, ಹರ್ಷ ಶಾ, ಡಾ.ಶ್ರೀಪಾದ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

