ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಮ್ಮ ಅಧಿಕಾರದ ಅವಧಿಯಲ್ಲಿ ಪಟ್ಟಣದ ಉದ್ಯಾನವನಗಳ ಅಭಿವೃದ್ಧಿಗೆ ಹಾಗೂ ಪಟ್ಟಣದ ಕೆರೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ಪುರಸಭೆಯ ನೂತನ ಅಧ್ಯಕ್ಷ ಮಹಿಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಹುಡ್ಕೊ ಬಡಾವಣೆಯ ಉದ್ಯಾನವನದಲ್ಲಿ ಪುರಸಭೆ, ಅರಣ್ಯ ಇಲಾಖೆ ಹಾಗೂ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಸ್ವಚ್ಚತಾ ಹಿ ಸೇವಾ” ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಟ್ಟಣದ ಜೀವನಾಡಿಯಾಗಿರುವ ಕೆರೆಯ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನಾವು ಕ್ರಿಯಾ ಯೋಜನೆ ರೂಪಿಸುತ್ತಿದ್ದೇವೆ. ಇದಕ್ಕೆ ಶಾಸಕರು ಸಹ ಒಪ್ಪಿಗೆ ನೀಡಿದ್ದಾರೆ. ಹಸಿರು ತೋರಣ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸದಸ್ಯರ ಸಲಹೆ ಪಡೆದು ಕೆರೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಪುರಸಭೆ ನೂತನ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿ, ಪಟ್ಟಣದ ಸ್ವಚ್ಛತೆ ಬಗ್ಗೆ ಜನರು ಪ್ರಜ್ಞಾವಂತರಾಗಿ ಕೆಲಸ ಮಾಡಬೇಕು. ತ್ಯಾಜ್ಯ ಮುಕ್ತ ಪಟ್ಟಣ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ನಾವು ನಡೆಯುವ ಮಾರ್ಗ ಮತ್ತು ಮನಸ್ಸುಗಳು ಒಳ್ಳೆಯದಾಗಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ಪಟ್ಟಣದಲ್ಲಿ ೬೪ ಉದ್ಯಾನವನಗಳನ್ನು ಗುರುತಿಸಲಾಗಿದೆ. ಅದಕ್ಕೆ ಗೆಜೆಟ್ ಸಹ ಆಗಿದೆ. ಪಟ್ಟಣವನ್ನು ಚಂಡೀಗಡ ಹಾಗೂ ಬಾಗಲಕೋಟೆ ಮಾದರಿಯಲ್ಲಿ ಯೋಜಿತ ನಗರವನ್ನಾಗಿ ರೂಪಿಸಲು ಎಲ್ಲರೂ ಕೆಲಸ ಮಾಡಬೇಕು. ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಉಳ್ಳ ಜನರು ನಮಗೆ ಬೇಕು. ವೇದಿಕೆಯ ಮೇಲೆ ಹೇಳುವುದೊಂದು, ವಾಸ್ತವದಲ್ಲಿ ಬೇರೆ ಮಾಡುವ ಜನರಿಂದ ಏನೂ ಸಾಧ್ಯವಿಲ್ಲ. ದೇಶ ಕಟ್ಟುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ಅತಿಥಿಯಾಗಿದ್ದ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಪುರಸಭೆಯ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು.
ಇದೇ ವೇಳೆ ಪುರಸಭೆ ನೂತನ ಅಧ್ಯಕ್ಷ ಉಪಾಧ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಮಾಜಿ ಸದಸ್ಯ ಮುತ್ತು ರಾಯಗೊಂಡ, ಶ್ರೀಶೈಲ ಮರೋಳ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಬಸವರಾಜ ಸಿದರಡ್ಡಿ, ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ವಿಶ್ವನಾಥ ನಾಗಠಾಣ, ವಿಲಾಸರಾವ್ ದೇಶಪಾಂಡೆ, ಶರಣು ಹಿರೇಕುರುಬರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ, ಸೋಮಶೇಖರ ಚೀರಲದಿನ್ನಿ, ಜಿ.ಎಂ.ಹುಲಗಣ್ಣಿ, ಕಿರಣ ಪಾಟೀಲ, ಶಿವನಗೌಡ ಪಾಟೀಲ, ಸಿದ್ದರಾಜ ಹೊಳಿ, ಎಂ.ಎಸ್.ತೆಗ್ಗಿನಮಠ, ವಿನಯಕುಮಾರ ಹಿರೇಮಠ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ ಚವ್ಹಾಣ, ರಾಜೇಂದ್ರ ಹುನ್ನೂರ, ಅನಿಲ ಚವ್ಹಾಣ, ಪುರಸಭೆಯ ಆರೋಗ್ಯಾಧಿಕಾರಿ ಮಹಾಂತೇಶ ಕಟ್ಟಿಮನಿ ಇದ್ದರು.
ಅಮರೇಶ ಕೆ.ಗೂಳಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಬಳಗದ ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ ವಂದಿಸಿದರು.
“ಹೆತ್ತ ತಾಯಿಯ ಬಗ್ಗೆ ಎಲ್ಲರಿಗೂ ಭಾವನಾತ್ಮಕ ಸಂಬಂಧ, ಪ್ರೀತಿ, ಗೌರವ ಇರುತ್ತದೆ. ಇದೇ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ತಾಯಿಯ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವ ಸಲುವಾಗಿ “ತಾಯಿಯ ಹೆಸರಿನಲ್ಲಿ ಗಿಡ ನೆಡಿ” ಅಭಿಯಾನ ಹಮ್ಮಿಕೊಂಡಿದ್ದಾರೆ. ಇದಕ್ಕೆ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು.”
– ಬಸನಗೌಡ ಬಿರಾದಾರ
ವಲಯ ಅರಣ್ಯಾಧಿಕಾರಿ, ಪ್ರಾದೇಶಿಕ ಅರಣ್ಯ ಇಲಾಖೆ
“ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೇಲೆ ಪಟ್ಟಣದ ಜನತೆ ಬಹಳಷ್ಟು ನಂಬಿಕೆ, ನಿರೀಕ್ಷೆ ಇಟ್ಟಿದೆ. ಅದನ್ನು ಉಳಿಸಿಕೊಳ್ಳುವ ಜೊತೆಗೆ ಅತ್ಯುತ್ತಮ ಆದರ್ಶ ಕೆಲಸ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಪಟ್ಟಣದ ಉದ್ಯಾನವನಗಳ ಗುರುತಿಸುವಿಕೆ ಮತ್ತು ಅಭಿವೃದ್ಧಿಗೆ ಹಸಿರು ತೋರಣ ಬಳಗ ಸದಾ ತಮ್ಮೊಂದಿಗೆ ಇರುತ್ತದೆ.”
– ಡಾ.ವೀರೇಶ ಇಟಗಿ
ಅಧ್ಯಕ್ಷರು, ಹಸಿರು ತೋರಣ ಗೆಳೆಯರ ಬಳಗ

