ದೇವರಹಿಪ್ಪರಗಿಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಥಮ ಸಭೆ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿತು.
ಸಭೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಕುರಿತು ಚರ್ಚೆ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಸಾಹೇಬಗೌಡ ಬಿರಾದಾರ ಹಾಗೂ ಉಪಾಧ್ಯಕ್ಷ ರೆಹಮಾನ ಕಣಕಾಲ ಮಾತನಾಡಿ, ಹಲವಾರು ಕಡೆ ಗೃಹಲಕ್ಷ್ಮಿ ಯೋಜನೆಯ ಹಣ ಸೂಕ್ತ ರೀತಿಯಲ್ಲಿ ಜಮೆಯಾಗುತ್ತಿಲ್ಲ. ಶಕ್ತಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಬಸ್ಸುಗಳನ್ನು ಸಿಂದಗಿ ದೇವರಹಿಪ್ಪರಗಿ ವಿಜಯಪುರ ಮಾರ್ಗಗಳ ಮಧ್ಯ ಓಡಿಸಬೇಕು. ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಮಾಡುವವರು ಹಣ ಪಡೆದು ಪಾವತಿ ಮಾಡುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿ ಬಯೋಮೆಟ್ರಿಕ್ ಮಾಡಿಕೊಂಡು ನಂತರ ಪಡಿತರ ವಿತರಣೆ ಮಾಡುತ್ತಿದ್ದಾರೆ. ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಅರ್ಹ ನಿರುದ್ಯೋಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ನರೇಗಾ ಯೋಜನೆ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್ ಪವಾರ, ಹೆಸ್ಕಾಂ ಶಾಖಾಧಿಕಾರಿ ಯು.ಎಲ್.ಪಟ್ಟಣ, ಆಹಾರ ನಿರೀಕ್ಷಕ ದಳವಾಯಿ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಪರಶುರಾಮ ಉತ್ನಾಳ, ಸದಸ್ಯರಾದ ಬೀರು ಹಳ್ಳಿ, ಪ್ರಕಾಶ ಮಣೂರ, ಮಹಮ್ಮದಶಫೀಕ ಸಿಪಾಯಿ, ಶೋಭಾ ಭಾವಿಕಟ್ಟಿ, ಶಾಕೀರಾ ಹೆಬ್ಬಾಳ, ರವಿಕಾಂತ ನಾಯ್ಕೋಡಿ, ಸದಾಶಿವ ಕಡ್ಲೆವಾಡ, ಭೈರೆಡ್ಡಿ ಹದ್ನೂರ, ಕುಮಾರ ರಾಠೋಡ, ಮಾಂತೇಶ ಚಲವಾದಿ ಮಡಿವಾಳಪ್ಪ ಹಡಪದ, ಜಿ.ಎಸ್.ರೋಡಗಿ, ಎಸ್.ಎಸ್.ಆಲಮೇಲ, ಎ.ಪಿ.ಕಂಬಾರ, ಜಿ.ವಿ.ಸಂಪನ್ನವರ, ಎಸ್.ವಿ.ಹತ್ತರಗಿ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು, ಸಿಬ್ಬಂದಿ ಇದ್ದರು.

