ಎನ್ಡಿಎ ಪರೀಕ್ಷೆಯಲ್ಲಿ ವಿಜಯಪುರದ ಎಕ್ಸಲೆಂಟ್ ಕಾಲೇಜ್ ವಿದ್ಯಾರ್ಥಿಗಳ ಸಾಧನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿರುವ ಕೆಲವು ಸೇವೆಗಳಿಗೆ ಬೇಕಾದಂತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರ ಲೋಕ ಸೇವಾ ಆಯೋಗವು ಪ್ರತಿ ವರ್ಷವು ಎನ್ಡಿಎ ಪರೀಕ್ಷೆಗಳನ್ನು ನಡೆಸುತ್ತದೆ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿರುತ್ತಲಿದ್ದು ೨೦೨೪ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಮರ್ಥ ಎಸ್. ಕಲಾಲ್, ಶ್ರೀಧತ್ತಾ ದೀಕ್ಷಿತ, ಪ್ರಮೋದ ಚಾಂದಕವಟೆ, ಆದರ್ಶ ವಜ್ರವಾಡ, ಪ್ರೀತಿ ಗಿರೀಶ ಮಂಟೂರು ಸೇರಿದಂತೆ ಐದು ಜನ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಲಿಯುತ್ತಿರುವ ಕಾಲೇಜಿಗೂ ಹಾಗೂ ವಿಜಯಪುರ ಜಿಲ್ಲೆಗೂ ಕೀರ್ತಿ ತಂದಿದ್ದಾರೆ.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹರ್ಷ ವ್ಯಕ್ತಪಡಿಸುತ್ತ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಠಿಣವಾಗರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತಮ್ಮಲ್ಲಿನ ದೇಶಭಕ್ತಿಯನ್ನು ಪರೀಕ್ಷೆ ಎದುರಿಸುವ ಮೂಲಕ ತೋರ್ಪಡಿಸಿದ್ದಾರೆ. ಏಕೆಂದರೆ ಎನ್ಡಿಎ ಪರೀಕ್ಷೆಗಳು ಎಲ್ಲ ಪರೀಕ್ಷೆಗಳಂತೆ ಇರುವುದಿಲ್ಲ. ಹಾಗೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಹ ಎಲ್ಲರಂತೆ ಇರುವುದಿಲ್ಲ. ಯಾರಿಗೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನನ್ನದೂ ಒಂದು ಪಾಲಿರಲಿ ಹಾಗೂ ಉಸಿರು ಹೆಸರು ಕೊಟ್ಟ ದೇಶಕ್ಕಾಗಿ ನಮ್ಮ ಸೇವೆ ಮುಡಿಪಿರಲಿ ಎನ್ನುವ ಆಸೆ ಇರುತ್ತದೆಯೋ ಅಂಥವರು ಮಾತ್ರ ಈ ಪರೀಕ್ಷೆಯನ್ನು ಎದುರಿಸುವುದಕ್ಕೆ ಮುಂದಾಗುತ್ತಾರೆ. ಮುಂದಿನ ದಿನಗಳಲ್ಲಿ ಇವರ ಮಾರ್ಗದರ್ಶನ ಪಡೆದುಕೊಂಡ ಕಿರಿಯ ಸಹಪಾಟಿಗಳು ಸಹ ಎನ್ಡಿಎ ಪರೀಕ್ಷೆಯನ್ನು ಬರೆದು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇವರ ಸಾಧನೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದರು.
ಸಮರ್ಥ ಎಸ್. ಕಲಾಲ್ ಶ್ರೀಧತ್ತಾ ದೀಕ್ಷಿತ ಪ್ರಮೋದ ಚಾಂದಕವಟೆ, ಆದರ್ಶ ವಜ್ರವಾಡ ಪ್ರೀತಿ ಗಿರೀಶ ಮಂಟೂರು

