ತಳವಾರ ಜನಾಂಗಕ್ಕೆ ಮೂಲ ಸೌಲಭ್ಯ ಒದಗಿಸಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಪರಿಶಿಷ್ಟ ಪಂಗಡದ ತಳವಾರ ಜನಾಂಗಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತಳವಾರ ಸಮಾಜ ಸೇವಾ ಸಮಿತಿ ವತಿಯಿಂದ ಸಮಾಜ ಕಲ್ಯಾಣ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಮಾಜದ ಮುಖಂಡರು ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ತಳವಾರ ಸಮಾಜ ೧.೨೫ ಲಕ್ಷ ಜನಾಂಗ ವಾಸವಾಗಿದ್ದು ಶೋಷಣೆಗೆ ಒಳಗಾಗುತ್ತಲೇ ಬಂದಿದೆ. ಯಾವುದೇ ಪ್ರಾತಿನಿಧ್ಯ ದೊರಕಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಿಂದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಈ ಸಮುದಾಯದ ಏಳಿಗೆಗಾಗಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡಬೇಕು. ಶೋಷಿತ ಸಮುದಾಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಬ್ಯಾಕ್ಲಾಗ್ ಹುದ್ದೆಗಳಿಗೆ ತಕ್ಷಣದಿಂದಲೇ ಭರ್ತಿ ಮಾಡಿಕೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಶಿವಶರಣ ನಾಟೀಕಾರ, ಅಧ್ಯಕ್ಷ ಸೋಮಶೇಖರ ಜಮಾದಾರ, ಉಪಾಧ್ಯಕ್ಷ ಆನಂದ ತಳವಾರ, ಪ್ರಧಾನ ಕಾರ್ಯದರ್ಶಿ ಅಭಿಷೇಕ ಜಮಾದಾರ, ನವೀನ ರೂಗಿ, ಚಂದು ಡೊಂಗ್ರೋಜಿ, ವಿಜಯಕುಮಾರ ಚಾಳಿಕಾರ, ನರೇಶ ಜಮಾದಾರ, ರವಿ ನಾಯಿಜಿ, ಸಂತೋಷ ವಾಲಿಕಾರ, ರೋಹಿತ ನಾಯ್ಕೋಡಿ, ಈಶ್ವರ ಮಣಿಗಿರಿ, ಮಂಜು ಜಮಾದಾರ, ಭೀಮರಾಯ ಬಿಲ್ಕಕ್ಕಾರ, ಹಣಮಂತ ಕೋಳಿ, ಆಕಾಶ ಬೂದಿಹಾಳ, ಗುರುನಾಥ ವಾಲಿಕಾರ, ಶಂಕರ ವಾಲಿಕಾರ, ಲಕ್ಷ್ಮೀಪುರ ಬಡಿಗೇರ, ಬಿಟಿ. ನಾಯ್ಕೋಡಿ, ಚಂದ್ರಾಮ ತಳವಾರ, ಸುನೀಲ ಸಂಗೋಗಿ ಇನ್ನಿತರರು ಇದ್ದರು.

