ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮೀಣ ಕೃಷಿ ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಸದಸ್ಯರ, ನಿರ್ದೇಶಕರ ಸಹಕಾರ, ಅವಲೋಕನ ಹಾಗೂ ಮುಖ್ಯವಾಗಿ ರೈತ ಸಮುದಾಯದ ಸಕ್ರೀಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಹೇಳಿದರು.
ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಮಂಗಳವಾರ ಜರುಗಿದ ೧೧೨ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ವಿಜಯಪುರ ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹಿನ್ನಡೆಯಲ್ಲಿದ್ದ ಸಂಘವು ಕಳೆದ ವರ್ಷದಿಂದ ಪ್ರಗತಿಪಥದಲ್ಲಿದ್ದು, ಈ ವರ್ಷ ರೂ.೪೧ ಲಕ್ಷ ಲಾಭಗಳಿಸಿದೆ. ಮುಂದಿನ ದಿನಗಳಲ್ಲಿ ವ್ಹಿಡಿಸಿಸಿ ಬ್ಯಾಂಕಿನ ದೇವರಹಿಪ್ಪರಗಿ ಶಾಖೆಯ ಕಟ್ಟಡ ನಿರ್ಮಿಸಲು ನಾವೆಲ್ಲ ಮುಂದಾಗೋಣ ಎಲ್ಲರ ಸಹಕಾರವಿರಲಿ ಎಂದರು.
ಕಾರ್ಯನಿರ್ವಹಣಾಧಿಕಾರಿ ಶರಣಗೌಡ ಅಂಗಡಿ ವರದಿವಾಚಿಸಿ, ೧೯೧೨ರಲ್ಲಿ ಆರಂಭಗೊಂಡ ಸಂಘವು ೨೩೭೨ ಸದಸ್ಯ ಬಲದಲ್ಲಿ ೧೧೭೨ ಸಾಲಗಾರರಿಗೆ ಸಾಲ ಹಂಚಿದ್ದು, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೪೧ ಲಕ್ಷ ರೂ.ಗಳ ಲಾಭ ಗಳಿಸಿದೆ. ಸಂಘ ಹಿಂದಿನ ಲೆಕ್ಕಪತ್ರ ವರ್ಗೀಕರಣದಲ್ಲಿ “ಬಿ” ಸ್ಥಾನ ಹೊಂದಿದ್ದು ಈ ವರ್ಷ “ಎ” ಹಂತಕ್ಕೆ ಏರಿದೆ ಎಂದರು.
ಸಂಘದ ಅಧ್ಯಕ್ಷ ಶ್ರೀಶೈಲ ದೇಸಾಯಿ, ಉಪಾಧ್ಯಕ್ಷ ಹುಸೇನಿ ಬಿಜಾಪೂರ, ನಿರ್ದೇಶಕರಾದ ಈರಣ್ಣ ಒಂಟೆತ್ತೀನ, ಈರಣ್ಣ ವಸ್ತçದ, ಕಾಸಪ್ಪ ಮೆಟಗಾರ, ಬಸವರಾಜ ಹಳಿಮನಿ, ಚಂದ್ರಾಮ ನಾಯ್ಕೋಡಿ, ಬಸವರಾಜ ತಳಕೇರಿ, ನಿವೃತ್ತ ನೌಕರರ ಸಂಘದ ತಾಲ್ಲೂಕು ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ವ್ಹಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಅಮೀತ ಖಂಡೇಕರ, ಮಲ್ಲಪ್ಪ ಮಂಗಳೂರ, ಜೈಬೂನಬಿ ಮಕಾನದಾರ, ಶಂಕರಗೌಡ ಪಾಟೀಲ(ಯರನಾಳ), ಮಲ್ಲಪ್ಪ ಬಿರಾದಾರ, ಯಲಗೂರೇಶ ದೇವೂರ, ವಿರೇಶ ಕುದರಿ, ಶಾಂತಪ್ಪ ದೇವೂರ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

