ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪ್ರತಿ ನಿತ್ಯ ಪಟ್ಟಣವನ್ನು ಸ್ವಚ್ಚಗೊಳಿಸುವ ಮೂಲಕ ಪ್ರತಿಯೊಬ್ಬರ ಜೀವನದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರನ್ನ ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂದು ಪುರಸಭೆ ಸದಸ್ಯ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಹಾಗೂ ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ದುಡ್ಡು ಕೊಟ್ಟರೂ ಮಾಡದೆ ಇರುವ ಕನಿಷ್ಠ ಕೆಲಸವನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಇವರಿಂದ ನಗರ ಅಂದವಾಗಿ ಕಾಣುತ್ತಿದೆ ಅಲ್ಲದೆ ಆರೋಗ್ಯಕರವಾಗಿ ಕಾಣುವಂತಾಗಿದೆ ಎಂದರು.
ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬರ ರಕ್ಷಣೆಗಾಗಿ ಶೃಮಿಸುವ ಪೌರ ಕಾರ್ಮಿಕರೊಂದಿಗೆ ನಾವಿದ್ದೇವೆ ಎಂದು ಗೌರವ ಪೂರ್ವಕ ಹೇಳುವ ಸಂಧರ್ಭದಲ್ಲಿ ಬಹುತೇಕ ತಾಲೂಕಿನ ಹಿರಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿರುವುದು ಪೌರ ಕಾರ್ಮಿಕರಿಗೆ ಅವಮಾನಿಸಿದಂತಾಗಿದೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್ನ ಅಧಿಕಾರಿ ಈರಣ್ಣ ಚಿಮ್ಮಲಗಿ ಮಾತನಾಡಿ, ಪೌರಕಾರ್ಮಿಕರು ಆರ್ಥಿಕ ಸಂಪತ್ತು ಹೊಂದಲು ಭಾರತ ಸರಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ನ್ಯಾಯವಾದಿ ಪ್ರತಾಪಸಿಂಗ್ ರಾಠೋಡ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಾಂತ ಮೇಟಿ, ಡಾ: ಅಮರೇಶ ಮಿಣಜಗಿ, ಸದಸ್ಯ ನೀಲಪ್ಪ ನಾಯಕ ಮಾತನಾಡಿದರು.
ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ವಿಜಯಕುಮಾರ ವಂದಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಪ್ರವೀಣ ಪೂಜಾರಿ, ಅಶೋಕ ಸಂಪನ್ನವರ, ದೇವೇಂದ್ರ ಚವ್ಹಾಣ, ಪ್ರವೀಣ ಪವಾರ, ಪುರಸಬೆ ಮಾಜಿ ಅಧ್ಯಕ್ಷ ಸಂಜೀವ ಕಲ್ಯಾಣಿ, ಮುಖಂಡರಾದ ಶರಣಪ್ಪ ಬೆಲ್ಲದ, ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ ಇತರರು ಇದ್ದರು.
ಪೌರ ಕಾರ್ಮಿಕರ ಆಕ್ರೋಶ
ಪೌರ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಸೇವೆ ದೊರುಕುತ್ತಿಲ್ಲ, ಪೌರ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗೆ ಹೋದರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಆಕ್ರೋಶ ಹೊರ ಹಾಕಿರುವ ಘಟನೆ ಸಂಭವಿಸಿತು.

