ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಕ್ರೀಡಾಸಕ್ತಿಯನ್ನು ಹೊಂದುವಂತೆ ಪ್ರೇರೆಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಮಂಗಳವಾರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಳಿಕೋಟೆಯಲ್ಲಿ ೧೦-೧೧-೨೦೨೪ರಿಂದ ನಡೆಯುವ ರಾಜ್ಯ ಮಟ್ಟದ ವ್ಹಾಲಿಬಾಲ್ ಕ್ರಿಡಾಕೂಟದ ಆಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಕ್ರೀಡೆಗಳಲ್ಲಿ ಬಹಳಷ್ಟು ಜನರು ಆಸಕ್ತಿ ತೋರಬೇಕು. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಪಾಲಕರು, ಶಿಕ್ಷಕರು ಮಕ್ಕಳಲ್ಲಿರುವ ಕ್ರೀಡಾಸಕ್ತಿಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವಬೇಕು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಭಾಗವಹಿಸಿ ದೇಶದ ಕೀರ್ತಿ ತರುವಂತಾಗಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಹಾಗೂ ಆರೋಗ್ಯ ಸದೃಢತೆ ಹೋಂದಬಹುದಾಗಿದೆ ಎಂದು ಅವರು ಹೇಳಿದರು.
ರಾಜ್ಯ ಮಟ್ಟದ ವ್ಹಾಲಿಬಾಲ್ ಕ್ರೀಡಾಕೂಟವನ್ನು ನಮ್ಮ ಜಿಲ್ಲೆಯಲ್ಲಿ ಆಯೋಜಿಸುತ್ತಿರುವುದು ಸಂತಸದ ವಿಷಯ. ಈ ಕ್ರೀಡಾಕೂಟದಲ್ಲಿ ಆಗಮಿಸುವ ಕ್ರೀಡಾಪಟುಗಳಿಗೆ ವಸತಿ ಸೇರಿದಂತೆ ಇತರ ಅವಶ್ಯಕ ಸೌಲಭ್ಯಗಳನ್ನು ಒದಗಿಸಬೇಕು. ಆರೋಗ್ಯ ಮತ್ತು ಭದ್ರತಾ ವ್ಯವಸ್ಥೆಗೆ ಕ್ರಮವಹಿಸಬೇಕು. ಕ್ರೀಡಾಕೂಟ ಯಶಸ್ವಿಗೆ ತಾವೆಲ್ಲರೂ ಕೂಡ ಸಹಕರಿಸುವಂತೆ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಕೆ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಮಟ್ಟದ ವ್ಹಾಲಿಬಾಲ್ ಕ್ರೀಡಾಕೂಟವನ್ನು ಜಿಲ್ಲೆಯ ತಾಳಿಕೋಟೆಯ ಶ್ರೀ ಸಂಗನಬಸವ ಶಿಕ್ಷಣ ಸಂಸ್ಥೆಯ ಎಚ್.ಎಸ್ ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ದಿನಾಂಕ ೯-೧೧-೨೦೨೪ರಂದು ಸಂಜೆ ೫ ಗಂಟೆಗೆ ಕ್ರೀಡಾಕೂಟ ಉದ್ಘಾಟನೆಯಾಗಲಿದ್ದು ದಿನಾಂಕ: ೧೦-೧೧-೨೦೨೪ ಹಾಗೂ ೧೧-೧೧-೨೦೨೪ರಂದು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಒಟ್ಟು ೬೦ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ೩೦ ಪುರುಷ ಹಾಗೂ ೩೦ ಮಹಿಳಾ ತಂಡಗಳು ಭಾಗವಹಿಸಲಿದ್ದು ಒಟ್ಟು ೯೦೦ ಕ್ರೀಡಾಪಟುಗಳು ಭಾಗಹಿಸಲಿದ್ದಾರೆ. ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ, ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾಕೂಟ ಆಯೋಜಿಸಲು ಸೂಚಿಸಲಾಗಿದೆ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಿರ್ವಹಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪದವಿ ಶಿಕ್ಷಣದ ಮಹಾಮಂಡಲದ ಅದ್ಯಕ್ಷರಾದ ಎಸ್.ಎಸ್.ಗೌರಿ, ಉಪನ್ಯಾಸಕ ಸಂಘದ ಅಧ್ಯಕ್ಷರಾದ ಎಂ.ಡಿ. ಹೆಬ್ಬಿ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ. ನಾಟೀಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಬಿ.ಟಿ. ಗೊಂಗಡಿ, ತಾಳಿಕೋಟೆಯ ಸಂಗನಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್. ಪಾಟೀಲ ಸೇರಿದಂತೆ, ಜಿಲ್ಲಾ ಪ್ರಾಚಾರ್ಯರ ಮಹಾಮಂಡಲದ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಪದಾಧಿಕಾರಿಗಳು, ದೈಹಿಕ ಶಿಕ್ಷಣ ಉಪನ್ಯಾಸಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

