ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನಲ್ಲೆಡೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ಬಾಂದಾರಗಳು ತುಂಬಿ ಹರಿಯುತ್ತಿದ್ದು, ರೈತರ ತೋಟಗಳಿಗೆ ನೀರು ನುಗ್ಗಿದ್ದರಿಂದ ದ್ರಾಕ್ಷಿ ಪಡಗಳು ನೀರಲ್ಲೆ ನಿಂತಿವೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳದ ಬಾಂದಾರ ತುಂಬಿ ಹರಿಯುತ್ತಿದ್ದು, ಅಪಾಯಮಟ್ಟ ಮೀರಿ ಹರಿದು ಸೇತುವೆ ಮೇಲಗಡೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವದರಿಂದ ವಾಹನ ಸವಾರರಿಗೆ ತೊಂದರೆಯುಂಟಾಗಿ ಸಾಲುಗಟ್ಟಲೆ ವಾಹನಗಳು ನಿಂತಿದ್ದವು. ಸಂಗಮನಾಥ ದೇವಾಲಯದ ಗರ್ಭಗುಡಿಯ ಒಳಗೆ ನೀರು ನುಗ್ಗಿದ್ದರಿಂದ ಪೂಜಾ ಕಾರ್ಯಗಳು ಸ್ಥಗಿತಗೊಂಡಿವೆ.
ಡೋಣಿ ನದಿ ಹರಿವು ಮಳೆಯಿಂದಾಗಿ ಹೆಚ್ಚಾಗಿದ್ದರಿಂದ ರೈತರ ತೋಟಗಳಿಗೆ ನೀರು ಹರಿದು ತೊಗರಿ ಇತರೆ ಬೆಳೆಗಳು ಜಲಾವೃತ್ತವಾಗಿವೆ. ಕೆಲವೆಡೆ ಸೇತುವೆ ಮೇಲಿರುವ ಡಾಂಬರಿ ಕಿತ್ತು ಹೋಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವದರಿಂದ ಶಾಲಾ ಮಕ್ಕಳಿಗೆ ಶಾಲೆಗಳಿಗೆ ತೆರಳಲು ತೊಂದರೆಯಾಯಿತು.


