ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಹಮಾಲರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಲಾರಿ ಹಮಾಲರ ಯುನಿಯನ್ (ಸಿಐಟಿಯು ಸಂಯೋಜಿತ) ವತಿಯಿಂದ ಜಿಲ್ಲಾಧಿಕಾರಿಗಳು, ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ಅಸಂಘಟಿತ ಕಾರ್ಮಿಕರ ಸಹಜ ಮರಣಕ್ಕೂ ರೂ. ೦೧ ಲಕ್ಷ ರೂಗಳ ಪರಿಹಾರ ನೀಡಬೇಕು, ಹಾಗೂ ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ರೂ.೨೫ ಸಾವಿರಕ್ಕೆ ಹೆಚ್ಚಿಸಬೇಕು. ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎಲ್ಲಾ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಎಪಿಎಂಸಿ ಕಾಯಕ ನಿಧಿಯಡಿ ನಿವೃತ್ತಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಕೇಂದ್ರ ಸರಕಾರ ಇ-ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕು. ಮಿಲ್ ಗೋಡೌನ ವೇರಹೌಸ್ಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು. ವಸತಿ ಹೀನ ಹಮಾಲರಿಗೆ ವಸತಿ ಯೋಜನೆ ಜಾರಿಮಾಡಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ಐ ಮುಖಂಡ ಈರಣ್ಣ ಬೆಳ್ಳುಂಡಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಮಾಲಿ ಸಂಘದ ಅಧ್ಯಕ್ಷ ಮೋದಿನಸಾಬ ಮಮದಾಪೂರ, ಪ್ರಧಾನ ಕಾರ್ಯದರ್ಶಿ ಸಾಬು ಗುಗದಡ್ಡಿ, ಖಜಾಂಚಿ ಮೋದಿನಸಾಬ ಮುಲ್ಲಾ, ವಿಠ್ಠಲ ಬಿರಾದಾರ, ಶೇಖಸಾಬ ಮುಲ್ಲಾ, ಮಲಿಕಸಾಬ ಟಕ್ಕಳಕಿ, ತುಕಾರಾಮ ವಂಬಾಸೆ, ಅಲಿಸಾಬ ಹಿಪ್ಪರಗಿ, ಮಕ್ಬುಲ್ಸಾಬ ಬಾಗವಾನ, ಪಾಂಡು ಕಾಂಬಳೆ ಸೇರಿದಂತೆ ನೂರಾರು ಹಮಾಲಿ ಕಾರ್ಮಿಕರು ಉಪಸ್ಥಿತರಿದ್ದರು.

