ವೈಜ್ಞಾನಿಕ ಪ್ರತಿಭೆ ಅನಾವರಣಗೊಳಿಸಿದ ವಿಜ್ಞಾನ ವಸ್ತು ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ. ಬರೀ ಅಂಕ ಗಳಿಕೆ ಶಿಕ್ಷಣವಲ್ಲ, ಮಕ್ಕಳಲ್ಲಿ ಕೌಶಲ, ಕುತೂಹಲ ಶಕ್ತಿಯನ್ನೂ ಬಲಪಡಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮತ್ತು ಜಮಖಂಡಿಯ ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಮಂಗಲಾ ನಾಯಕ ಹೇಳಿದರು.
ಬಬಲೇಶ್ವರದ ಪಟ್ಟಣದ ಶಾಂತವೀರ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಬೋಧಕರಿಗೆ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಅಭಿವೃದ್ಧಿ) ಉಮಾದೇವಿ ಸೊನ್ನದ ಮಾತನಾಡಿ,
ಪಠ್ಯಪೂರಕ ಚಟುವಟಿಕೆಗಳೂ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಇಲಾಖೆಯು ಪ್ರತಿ ವರ್ಷ ವಿಜ್ಞಾನ ಗೋಷ್ಠಿ, ವಿಜ್ಞಾನ ನಾಟಕ, ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಶಿಕ್ಷಕರು ಸೂಕ್ತ ಮಾರ್ಗದರ್ಶನವನ್ನು ನೀಡಬೇಕು ಎಂದರು.
ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಹೊಸ ಅನ್ವೇಷಣೆಗಳತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ವಿಜ್ಞಾನ ನಿಂತ ನೀರಲ್ಲ, ಸಮಾಜಮುಖಿ ವಿಜ್ಞಾನ ಆವಿಷ್ಕಾರಗಳತ್ತ ವಿದ್ಯಾರ್ಥಿಗಳು ಆಲೋಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಎಸ್. ಪಿ. ಬಿರಾದಾರ, ಜೆ.ಜೆ.ಕುರಂದವಾಡ, ಎಸ್. ಜಿ. ಜಂಗಮಶೆಟ್ಟಿ, ಡಿ. ಪಿ. ಹಂಚಿನಾಳ, ಅಶೋಕ ಬೂದಿಹಾಳ, ಸಂದೀಪ ದೇಶಪಾಂಡೆ, ಡಿ.ಐ.ಅಸುಂಡೆ, ಬಿ.ಎಸ್. ಜಗದೀಶ, ಎ.ಎಸ್.ಹತ್ತಳ್ಳಿ, ಸುಮಂಗಲಾ ಮಲ್ಹಾರಿ, ಪ್ರಭು ಬಿರಾದಾರ, ದಿಲೀಪ ಕಾಂಬಳೆ, ಜಯಲಕ್ಷ್ಮಿ ಪಾಟೀಲ, ಸಿದರಾಯ ಅಥಣಿ ಇದ್ದರು.

